ಗ್ರಾಮಗಳಲ್ಲಿ ಸಾಮರಸ್ಯ ಬೆಸೆಯಲು ದೇಗುಲ ಪರಂಪರೆ, ಧಾರ್ಮಿಕ, ಆಧ್ಯಾತ್ಮಿಕತೆ ಆಚರಣೆಯ ನಂಬುಗೆ ವಿಶೇಷವಾಗಿದೆ. ಹಿರಿಯರ ಆದರ್ಶವನ್ನು ಪರಿಪಾಲಿಸಲು ಗ್ರಾಮೀಣ ಯುವಕರ ಮನಸ್ಸು ಒಂದಾಗಿರುವುದು ಆರೋಗ್ಯಕರ ಬೆಳವಣಿಗೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಂಸ್ಕೃತಿ- ಸಂಸ್ಕಾರದ ಬೀಡು, ದೇಗುಲಗಳ ಪರಂಪರೆ ನಾಡು. ಭಾರತದ ಆಚಾರ ವಿಚಾರಗಳನ್ನು ಇಡೀ ವಿಶ್ವವೇ ಮೆಚ್ಚಿ ಗೌರವಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತುಳಸಿ ಗ್ರಾಮದಲ್ಲಿ ಬಸವೇಶ್ವರ ದೇಗುಲ ಉದ್ಘಾಟನೆ, ವಿಮಾನ ಗೋಪುರ, ಕಳಸ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಮಾತನಾಡಿ, ಜಗತ್ತಿನಲ್ಲಿ ಬಲುದೊಡ್ಡ ರಾಷ್ಟ್ರ ನಮ್ಮದು. ಅನೇಕ ವೈವಿಧ್ಯತೆಯನ್ನು ಹೊಂದಿದೆ. ಆದರೆ, ಧಾರ್ಮಿಕ, ಸಂಸ್ಕಾರದಲ್ಲಿ ಒಳಿತಿಗಾಗಿರುವ ಆಶಯ ಮಾತ್ರ ಒಂದಾಗಿದೆ ಎಂದರು.
ಗ್ರಾಮಗಳಲ್ಲಿ ಸಾಮರಸ್ಯ ಬೆಸೆಯಲು ದೇಗುಲ ಪರಂಪರೆ, ಧಾರ್ಮಿಕ, ಆಧ್ಯಾತ್ಮಿಕತೆ ಆಚರಣೆಯ ನಂಬುಗೆ ವಿಶೇಷವಾಗಿದೆ. ಹಿರಿಯರ ಆದರ್ಶವನ್ನು ಪರಿಪಾಲಿಸಲು ಗ್ರಾಮೀಣ ಯುವಕರ ಮನಸ್ಸು ಒಂದಾಗಿರುವುದು ಆರೋಗ್ಯಕರ ಬೆಳವಣಿಗೆ ಎಂದರು.ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಸಾಮರಸ್ಯದಿಂದ ಭಾಗವಹಿಸಿ ಸದ್ಭಕ್ತಿಯನ್ನು ಮೆರೆಯುತ್ತಿದ್ದಾರೆ. ರೈತರು ಭೂಮಾತೆ, ದೇವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ದೇಗುಲ, ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ. ಯುವಕರು ಜಾಗರೂಕರಾಗಿ ಧರ್ಮ, ಭಗವಂತನ ಆರಾಧನೆಗೆ ಮುಂದಾಗುವಂತೆ ಕರೆ ನೀಡಿದರು.
ಇಡೀ ಗ್ರಾಮವನ್ನು ವಿದ್ಯುತ್ ದೀಪಗಳ ಅಲಂಕಾರ, ವಿವಿಧ ರಂಗವಲ್ಲಿ ಬಿಡಿಸಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಅನ್ನದಾಸೋಹ ನಡೆಸಲಾಯಿತು. ತೊಳನೇಶ್ವರ, ಬಸವೇಶ್ವರ, ಮಹಾಗಣಪತಿ, ಸುಬ್ರಹ್ಮಣ್ಯ, ವಿಮಾನ ಕಳಸ, ಮಹಾಕುಂಭಾಭಿಷೇಕ ಸನ್ನಿವೇಶ ಸವಿಯಲು ತುಳಸಿ, ತುಳಸಿಗೇಟ್, ಅಂಕನಹಳ್ಳಿ, ಐಕನಹಳ್ಳಿ, ಭದ್ರನಕೊಪ್ಪಲು, ಬಸವನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಅಧಿಕವಾಗಿ ಭಾಗವಹಿಸಿದದರು.ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಸುರೇಶ್, ಮನ್ಮುಲ್ ನಿರ್ದೇಶಕ ಶೀಳನೆರೆ ಅಂಬರೀಷ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮುಖಂಡರಾದ ಮಾದಾಪುರ ರಾಮಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಚಂದ್ರೇಗೌಡ ಇದ್ದರು.