ಹರಿಹರದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆಗೆ ಆಕ್ರೋಶ

| Published : Dec 06 2024, 08:55 AM IST

ಸಾರಾಂಶ

ಹರಿಹರ ತಾಲೂಕಿನ ವಿವಿಧ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅವ್ಯಾಹತ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಬುಧವಾರ ತಾಲೂಕು ಕಚೇರಿ ಶಿರಸ್ತೆದಾರ್ ಸುನೀತಾರಿಗೆ ಮನವಿ ಸಲ್ಲಿಸಲಾಯಿತು.

ಹರಿಹರ: ಹರಿಹರ ತಾಲೂಕಿನ ವಿವಿಧ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅವ್ಯಾಹತ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಬುಧವಾರ ತಾಲೂಕು ಕಚೇರಿ ಶಿರಸ್ತೆದಾರ್ ಸುನೀತಾರಿಗೆ ಮನವಿ ಸಲ್ಲಿಸಲಾಯಿತು.ನಂತರ ಸಂಘಟನೆಯ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಗುತ್ತೂರು, ಹರ್ಲಾಪುರ, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ರಾಜನಹಳ್ಳಿ, ಧೂಳೆಹೊಳೆ, ಇಂಗಳಗೊಂದಿ ಸೇರಿ ಹಲವು ಗ್ರಾಮಗಳಲ್ಲಿನ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳನ್ನು ಅಕ್ರಮ ಮಣ್ಣಿನ ಗಣಿಗಾರಿಕೆಗೆ ಅವ್ಯಾಹತವಾಗಿ ಬಳಸಲಾಗಿದೆ ಎಂದು ದೂರಿದರು.ನದಿ ದಡದ ಈ ಗ್ರಾಮಗಳಲ್ಲಿ 20 ರಿಂದ 40 ಅಡಿಗಳ ಆಳದವರೆಗೆ ಜೆಸಿಬಿ, ಹಿಟಾಚಿಯಂತಹ ಬೃಹತ್ ಯಂತ್ರಗಳಿಂದ ಗುಂಡಿಗಳನ್ನು ತೋಡುತ್ತಾ, ಅಕ್ರಮ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ರಾಜನಹಳ್ಳಿ ಗ್ರಾಮದಲ್ಲಿ ಅಂದಾಜು 2 ಎಕರೆಯಷ್ಟು ಸರ್ಕಾರದಿಂದ ಮಂಜೂರಾದ ಪರಿಶಿಷ್ಟ ಜನಾಂಗದವರ ರುದ್ರಭೂಮಿಯಲ್ಲೂ ಗಣಿಗಾರಿಕೆ ನಡೆಸಿ ಮೃತರ ಅಂತ್ಯ ಸಂಸ್ಕಾರ ನಡೆಸದಂತಾಗಿದೆ. ಅಲ್ಲಿನ ಪರಿಶಿಷ್ಟರು ಮೃತಪಟ್ಟರೆ ನದಿ ದಡ, ರಸ್ತೆ ಅಕ್ಕಪಕ್ಕವೇ ಅಂತ್ಯ ಸಂಸ್ಕಾರ ಮಾಡುವ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತ ಪಡಿಸಿದರು.ಈವರೆಗೆ ನಡೆದಿರುವ ಅಕ್ರಮ ಗಣಿಗಾರಿಕೆ ಗಮನಿಸಿದರೆ ಹರಿಹರವು ರಿಪಬ್ಲಿಕ್ ಆಫ್ ಬಳ್ಳಾರಿಯಂತಾಗತ್ತದೆ. ಕೂಡಲೆ ರಾಜ್ಯ ಸರ್ಕಾರವು ಅಕ್ರಮ ಗಣಿಗಾರಿಕೆಯನ್ನು ಚಿತ್ರೀಕರಿಸಲು ದ್ರೋಣ್ ಯಂತ್ರದ ಸಹಾಯ ಪಡೆಯಬೇಕು. ಇದಕ್ಕೆ ಸಹಕಾರ ನೀಡಿದ ಆರೋಪ ಇರುವ ಕಂದಾಯ, ಪರಿಸರ, ಪೊಲೀಸ್, ಕೃಷಿ ಇಲಾಖೆಗಳ ಹಿಂದಿನ, ಈಗಿನ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.ಸಂಘಟನೆಯ ಸಾಕಮ್ಮ, ಬಸವರಾಜಪ್ಪ, ಸಂಜೀವ್, ಸುನೀತಾ, ಶೈಲು, ಅಣ್ಣಪ್ಪ, ರೇಣುಕಮ್ಮ, ಬಸವರಾಜ್, ಹರೀಶ್, ಶಿವಣ್ಣ, ಹನುಮಮತಪ್ಪ, ಹಾಲಮ್ಮ, ಮುಬೀನಾ, ವೀರೇಶ್, ಸಂತೋಷ, ಪರಮೇಶ್, ನಾಗಪ್ಪ, ನಾಗರಾಜ್, ಮಂಜು, ನೀಲಪ್ಪ, ಹಾಲಮ್ಮ, ಲಕ್ಷ್ಮಣರೆಡ್ಡಿ ಇದ್ದರು.