ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹಿರಿಯೂರು ತಾಲೂಕಿನ ಐಮಂಗಲದಲ್ಲಿರುವ ಬಸವ ಹರಳಯ್ಯ ಸ್ವಾಮೀಜಿ ಮೇಲಿನ ಹಲ್ಲೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದು ಮಂಗಳವಾ ಆದಿ ಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಜಾತಿ ನಿಂಧನೆ ಮಾಡಿ, ಹಲ್ಲೆ ನಡೆಸಿರುವ ಆರೋಪಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಲಾಯಿತು.
ಮಾದಿಗ ಸಮಾಜದ ಸ್ವಾಮೀಜಿಯವರ ಮೇಲೆ ಜಾಗದ ವಿಚಾರವಾಗಿ ಹಿರಿಯೂರು ತಾಲೂಕು ಆದಿರಾಳು ಗ್ರಾಮದ ಸಿದ್ದೇಶ್ವರ ಮತ್ತು ಆಕಾಶ್, ಶಿವಪ್ರಕಾಶ್ ಮತ್ತು ಇವರ ಕುಟುಂಬದವರು ಆಗಾಗ್ಗೆ ಮಠಕ್ಕೆ ಬಂದು ಜಾತಿನಿಂಧನೆ ಮಾಡಿ ಗಲಾಟೆ ಮಾಡುತ್ತಿದ್ದಾರೆ. ಜುಲೈ 5ರಂದು ರಾತ್ರಿ 8-30ರ ಸಮಯದಲ್ಲಿ ಬಸವ ಹರಳಯ್ಯ ಸ್ವಾಮೀಜಿಯವರ ಮಠಕ್ಕೆ ಎರಡು ಬೈಕ್ಗಳಲ್ಲಿ ಬಂದ ಸಿದ್ದೇಶ್ವರ ಸಂಗಡಿಗರು ಅಕ್ರಮವಾಗಿ ಪ್ರವೇಶಿಸಿ ಸ್ವಾಮೀಜಿಯವರ ಮೇಲೆ ಜಾತಿ ನಿಂಧನೆ ಮಾಡಿ, ಹೊಡೆದು ಹಲ್ಲೆ ಮಾಡಿರುತ್ತಾರೆ. ಬಿಡಿಸಲು ಬಂದ ಚಾಲಕ ಭೀಮರಾಜ್ ಇವರಿಗೂ ಹಲ್ಲೆ ಮಾಡಿದ್ದು ಇಬ್ಬರಿಗೂ ರಕ್ತಗಾಯಗಳಾಗಿರುತ್ತವೆ.ನಂತರ ಐಮಂಗಲ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ ಠಾಣೆಯಲ್ಲಿಯೇ ಪೊಲೀಸರ ಸಮ್ಮುಖದಲ್ಲಿ ಸ್ವಾಮೀಜಿಗಳ ಮೇಲೆ ಚಪ್ಪಲಿ ಕಾಲಿನಿಂದ ಹೊಡೆದು ಹಲ್ಲೆ ಮಾಡಿ, ಜಾತಿನಿಂಧನೆ ಮಾಡಿದ್ದಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹೀನ ಕೃತ ವೆಸಗಿದ ಆರೋಪಿಗಳನ್ನು ಕೂಡಲೇ ರೌಡಿಪಟ್ಟಕ್ಕೇರಿಸಿ ಗಡಿಪಾರು ಮಾಡಬೇಕು. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಈ ಆರೋಪಿಗಳಿಗೆ ಯಾವುದೇ ಜಾಮೀನು ನೀಡದಂತೆ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ, ಗೃಹ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕೂಡಲೇ ಕ್ರಮ ವಹಿಸಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹಿಸಿದರು.
ಒಬ್ಬ ಹಿಂದೂ ಸ್ವಾಮೀಜಿಗೆ ಈ ರೀತಿ ಅಪಮಾನ ಮಾಡಿದ್ದು ನೋಡಿದರೆ ಯಾರದೋ ದೊಡ್ಡ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಒಬ್ಬ ಸ್ವಾಮೀಜಿ ರಕ್ಷಣೆ ಇಲ್ಲದಂತಾಗಿದೆ. ಯಾವುದೇ ವಿಚಾರವಿರಲಿ ಕುಳಿತು ಮಾತನಾಡಿಕೊಂಡು ಬಗೆಹರಿಸಿಕೊಳ್ಳುವಂತಹ ವಿಷಯವನ್ನು ಜಾತಿನಿಂದನೆ ಮಾಡಿ ಹೆದರಿಸುವುದು, ಹಲ್ಲೆ ಮಾಡುವುದು, ಹೊಡೆಯುವುದ ಮಾಡಲಾಗುತ್ತಿದೆ. ಮಠಕ್ಕೆ ಮತ್ತು ಸ್ವಾಮೀಜಿಯವರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು, ಪೊಲೀಸ್ ಠಾಣೆಯಲ್ಲಿ ಜಾತಿನಿಂಧನೆ ಮಾಡಿ ಸ್ವಾಮೀಜಿ ಮೇಲೆ ಹಲ್ಲೆ ನಡೆಸಲಾಗಿದೆ. ಹಾಗಾಗಿ ಸಿಸಿ ಟಿವಿ ಪುಟೇಜ್ ಪರಿಶೀಲಿಸಿ, ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಮಠದ ಆವರಣದಲ್ಲಿ ಶಾಲೆ ನಡೆಯುತ್ತಿದ್ದು ರಕ್ಷಣೆ ನೀಡುವಂತೆ ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಕೆ.ಟಿ.ಶಿವಕುಮಾರ್, ಡಾ.ಪ್ರಕಾಶ್ ಬಾಣಾವರ, ಕೆ.ಪಿ.ಶ್ರೀನಿವಾಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.