ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆರ್ಥಿಕ ಶಿಸ್ತು ಇಲ್ಲದಿದ್ದರೆ ಸಹಕಾರಿ ಕ್ಷೇತ್ರವ ಮುನ್ನಡೆಸುವುದು ಕಷ್ಟವಾಗಿ ವಿಪರೀತ ನಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತದಿಂದ ಹೋಟೆಲ್ ಐಶ್ವರ್ಯ ಫೋರ್ಟ್ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಸೌಹಾರ್ಧ ಸಹಕಾರಿಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಅನೇಕ ಹಿರಿಯರ ಮಾರ್ಗದರ್ಶನದಿಂದ ಸಂಯುಕ್ತ ಸಹಕಾರಿ ಅತ್ಯುತ್ತಮ ಮಾರ್ಗದಲ್ಲಿ ಮುನ್ನಡೆಯುತ್ತಿದೆ ಎಂದರು.
ಸೌಹಾರ್ಧ ಚಳುವಳಿ ಹುಟ್ಟಿ ಕಳೆದ ವರ್ಷ 25 ತುಂಬಿದ ಪರಿಣಾಮ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಸಂಯುಕ್ತ ಸಹಕಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲು ತೀರ್ಮಾನಿಸಲಾಯಿತು. ಅದರಂತೆ ಚಿತ್ರದುರ್ಗದ ಹಿರಿಯ ಸೌಹಾರ್ಧ ಸಂಯುಕ್ತ ಸಹಕಾರಿಗಳು ಹಾಗೂ ಮರ್ಚೆಂಟ್ ಬ್ಯಾಂಕನ್ನ ನಿಕಟ ಪೂರ್ವ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿರವರಿಗೆ ಸನ್ಮಾನಿಸುತ್ತಿರುವುದು ಹೆಮ್ಮೆಯೆನಿಸುತ್ತದೆ. ನಿಷ್ಟುರವಾಗಿ ಮಾತನಾಡುತ್ತಿದ್ದ ಅವರು ಮರ್ಚೆಂಟ್ ಬ್ಯಾಂಕನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಅವರ ಮಾರ್ಗದರ್ಶನದಂತೆ ನಾವುಗಳು ಮುನ್ನಡೆಯುತ್ತಿದ್ದೇವೆಂದು ಶ್ಲಾಘಿಸಿದರು.ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಗಮದ ನಿರ್ದೇಶಕ ಬಿ.ಹೆಚ್.ಕೃಷ್ಣಾರೆಡ್ಡಿ ಮಾತನಾಡಿ ಸಾಮಾನ್ಯ ಸಭೆಗಿಂತ ಮುಂಚೆ ಪ್ರತಿ ಜಿಲ್ಲೆಗಳಿಗೆ ಹೋಗಿ ಸಹಕಾರಿಗಳ ಸಭೆ ನಡೆಸಿ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ ಸಂವಾದ ನಡೆಸುವುದು ನಮ್ಮ ಪದ್ದತಿ. ಅದರಂತೆ ಚಿತ್ರದುರ್ಗದಲ್ಲಿ ಸಂಪರ್ಕ ಸಭೆ ನಡೆಸಿದ್ದೇವೆ., ಎರಡು ಸಾವಿರ ಪ್ರತಿನಿಧಿಗಳು ಭಾಗವಹಿಸುವ ಸಭೆಯಲ್ಲಿ ಎಲ್ಲಾ ಸಮಸ್ಯೆಗಳ ಕುರಿತು ಚರ್ಚಿಸುವುದು ಕಷ್ಟ. ಹಾಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಸಂಪರ್ಕ ಸಭೆ ನಡೆಸಿ ಸಂವಾದ ಮಾಡಲಾಗುವುದು ಎಂದರು.
ಆಗಸ್ಟ್ ಮೊದಲನೆ ಇಲ್ಲ ಎರಡನೆ ವಾರದಲ್ಲಿ ಸಾಮಾನ್ಯ ಸಭೆ ನಡೆಸಲಾಗುವುದು. ಆಗ ಸಮಸ್ಯೆ ಕುಂದುಕೊರತೆಗಳು ಏನು ಎನ್ನುವುದನ್ನು ತಿಳಿದುಕೊಂಡು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಆರೋಗ್ಯ, ಆಧುನಿಕ ಹಾಗೂ ಸಾವಯವ ಕೃಷಿ ಕುರಿತು ಸಭೆಗಳಲ್ಲಿ ಚರ್ಚಿಸಿದ್ದೇವೆ. ಮೂರು ವರ್ಷಗಳಿಗೊಮ್ಮೆ ಆಡಿಟ್ ಮಾಡಿಸಲಾಗುವುದು. ಆಸ್ತಿಗಳ ಘೋಷಣೆ ಅನಿವಾರ್ಯ. ಬ್ಯಾಲೆಂನ್ಸ್ ಶೀಟ್ ಹೆಲ್ತಿಯಾಗಿರಬೇಕು. ಚಿತ್ರದುರ್ಗ ಕ್ರಿಯಾಶೀಲವಾಗಿದೆ. ಡೆಪಾಸಿಟ್, ಸಾಲದ ಬಡ್ಡಿಯ ಪ್ರಮಾಣವನ್ನು ಕಡಿಮೆಗೊಳಿಸುವ ಕುರಿತು ಚಿಂತನೆಯಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಗಮದ ಪ್ರಾಂತೀಯ ಅಧಿಕಾರಿ ಶ್ರೀಧರ್ ಎಸ್.ಮಾತನಾಡಿ ಇಡಿ ರಾಜ್ಯಾದ್ಯಂತ ಪ್ರವಾಸ ಮಾಡಿ ಹತ್ತು ಹದಿನೈದು ವರ್ಷಗಳಿಂದಲೂ ಸಭೆ ನಡೆಸುತ್ತಿದ್ದೇವೆ. ಇದರಿಂದ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಲು ಸಹಕಾರಿಯಾಗಲಿದೆ. ಸಹಕಾರಿಗಳ ಜೊತೆ ಉತ್ತಮ ಒಡನಾಟವಿಟ್ಟುಕೊಳ್ಳುವುದು ಸಭೆಯ ಉದ್ದೇಶ. ಸಹಕಾರಿ ಕ್ಷೇತ್ರವನ್ನು ಯಾವ ರೀತಿ ಮುನ್ನಡೆಸಿಕೊಂಡು ಹೋಗಬೇಕೆನ್ನುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದೆಂದು ನುಡಿದರು.
ಕರ್ನಾಟಕ ರಾಜ್ಯ ಸೌಹಾರ್ಧ ಸಂಯುಕ್ತ ಸಹಕಾರಿ ನಿಯಮಿತದಜ ದ ನಿರ್ದೇಶಕ ಹಾಗೂ ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ರಘುರಾಮರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಹಿರಿಯ ಸಹಕಾರಿ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ನಿಗಮದ ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ್, ನಿರ್ದೇಶಕ ವಿಜಯ್ ಸಿ.ಪಿ, ಜಿಲ್ಲಾ ಸೌಹಾರ್ಧ ಸಹಕಾರಿಗಳ ಒಕ್ಕೂಟ ದ ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಶಶಿಕುಮಾರ್ ಎಸ್.ಸ್ವಾಗತಿಸಿದರು.