ಕನ್ನಡಪ್ರಭ ವಾರ್ತೆ ದಾಂಡೇಲಿ

ಈ ನಾಡಿನ ಜೀವಪರ ಬರಹಗಾರ, ಹಿರಿಯ ಸಾಹಿತಿ ದೇವನೂರು ಮಹಾದೇವ ಅವರಿಗೆ ಪ್ರಸಕ್ತ ಸಾಲಿನ ಪಂಪ ಪ್ರಶಸ್ತಿಯ ಗೌರವ ಒಲಿದಿರುವುದು ಅಭಿಮಾನ ಮತ್ತು ಹೆಮ್ಮೆಯ ಸಂಗತಿ. ಅದನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.ಆದಿಕವಿ ಪಂಪ ''ಮನುಷ್ಯ ಕುಲಂ ತಾನೊಂದೇ ವಲಂ'' ಎಂದಿದ್ದರು. ದೇವನೂರು ಮಹಾದೇವ ಅವರು ಕೂಡ ಇದೇ ನಿಲುವಿನ ಬರಹಗಾರರು. ಹಾಗಾಗಿ ಪಂಪ ಪ್ರಶಸ್ತಿಗೆ ದೇವನೂರು ಮಹಾದೇವ ಆಯ್ಕೆಯಾಗಿರುವುದು ಅರ್ಥಪೂರ್ಣವಾಗಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಪಂಪ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನೀಡುಬಹುದು ಎಂದು ಬರುತ್ತಿರುವ ಸುದ್ದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಾಸರೆ ಅವರು ಪಂಪ ನಡೆದಾಡಿದ ಈ ನಾಡಿನ ಮೊದಲ ರಾಜಧಾನಿ ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿ ಪ್ರದಾನ ಮಾಡುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.ನಾಡಿನಲ್ಲಿ ಸರಕಾರ ಈ ವರ್ಷ ಕೂಡಾ ಅನೇಕ ಉತ್ಸವಗಳನ್ನ ನಡೆಸಿದೆ. ಕೋಟಿ ಕೋಟಿ ರು. ಖರ್ಚು ಮಾಡಿದೆ. ಆದರೆ ಈ ಬಾರಿಯ ಕದಂಬೋತ್ಸವವನ್ನು ಬನವಾಸಿಯಲ್ಲಿ ನಡೆಸದಿರುವ ಬಗ್ಗೆ, ಸರಕಾರ ಅದಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳದೇ ಇರುವ ಬಗ್ಗೆಅಸಮಾಧಾನ ವ್ಯಕ್ತಪಡಿಸಿ, ಈಗಲೂ ಕೂಡ ಬನವಾಸಿಯಲ್ಲಿ ಕದಂಬೋತ್ಸವ ಆಚರಿಸಲು ಸಮಯವಿದೆ. ಸರಕಾರ ತಕ್ಷಣ ಕದಂಬೋತ್ಸವ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆ ಕದಂಬೋತ್ಸವದಲ್ಲಿಯೇ ಪ್ರಸಕ್ತ ಸಾಲಿನ ಪಂಪ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬಿಸಿಲಿನ ನೆಪವನ್ನೋ ಅಥವಾ ಇನ್ಯಾವುದೋ ಕಾರಣವನ್ನು ನೀಡಿ ಬನವಾಸಿಯಲ್ಲಿ ಈ ಬಾರಿಯ ಕದಂಬೋತ್ಸವ ನಡೆಸಲಾಗದು ಎಂಬ ಕಾರಣವನ್ನು ಸರ್ಕಾರ ನೀಡುವುದಾದರೆ ಅದು ಅರ್ಥರಹಿತವಾದುದು. ಒಂದೊಮ್ಮೆ ಕದಂಬೋತ್ಸವ ನಡೆಸದೇ ಇದ್ದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಬನವಾಸಿಯಲ್ಲಿಯೇ ಒಂದು ಅರ್ಥಪೂರ್ಣವಾದ ಕನಿಷ್ಠ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿಯಾದರೂ ಅಲ್ಲಿಯೇ ಪಂಪ ಪ್ರಶಸ್ತಿ ಪುರಸ್ಕೃತರಾದ ದೇವನೂರು ಮಹಾದೇವ ಅವರನ್ನು ಕರೆಯಿಸಿ ಪ್ರಶಸ್ತಿಯನ್ನು ಪ್ರದಾನ ಮಾಡುವಂತಾಗಬೇಕು. ಆ ಮೂಲಕ ಪಂಪ ನಡೆದಾಡಿದ ನೆಲ ಬನವಾಸಿ, ಈ ನಾಡಿನ ಮೊದಲ ರಾಜಧಾನಿ ಬನವಾಸಿಯ ಅಸ್ಮಿತೆಯನ್ನ ಎತ್ತಿ ಹಿಡಿಯುವಂತಾಗಬೇಕು ಎಂದು ಅವರು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.