ಅಡಕೆ ಸಮೃದ್ಧಿಗಾಗಿ ಅಂತರ ಬೆಳೆಯಾಗಿ ಕಾಫಿ ಎಂಬ ಮಾಹಿತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಯಲ್ಲಾಪುರನಾವು ರೈತರು ಬೆಳೆದ ಬೆಳೆಗಳಿಗೆ ಉಳಿದ ಸಂಸ್ಥೆಗಳು ಕೊಡುವುದಕ್ಕಿಂತ ಹೆಚ್ಚು ಬೆಲೆ ಕೊಟ್ಟು ಖರೀದಿಸುತ್ತಿದ್ದೇವೆ. ಎಲ್ಲ ರೈತರೂ ತಮ್ಮ ಉತ್ಪನ್ನಗಳನ್ನು ನಮಗೆ ಕೊಡುವ ಮೂಲಕ ಸಂಸ್ಥೆ ಬೆಳೆಸಿದ್ದಾರೆ. ರೈತರು ಮುಂದಿನ ದಿನಗಳಲ್ಲಿ ಅಡಕೆಯೊಂದಿಗೆ ಉಪ ಉತ್ಪನ್ನ ಬೆಳೆಯುವತ್ತ ಹೆಚ್ಚಿನ ಒಲವು ತೋರಬೇಕು ಎಂದು ಶಿರಸಿಯ ಕದಂಬ ಮಾರ್ಕೆಟಿಂಗ್ ನಿಯಮಿತದ ಅಧ್ಯಕ್ಷ ಶಂಭುಲಿಂಗ ಹೆಗಡೆ ಹೇಳಿದರು.ಗುರುವಾರ ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿ ಹಾಗೂ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಶಿರಸಿಯ ಸಂಯುಕ್ತ ಆಶ್ರಯದಲ್ಲಿ ಉಮ್ಮಚಗಿಯಲ್ಲಿ ನಡೆದ ಅಡಕೆ ಸಮೃದ್ಧಿಗಾಗಿ ಅಂತರ ಬೆಳೆಯಾಗಿ ಕಾಫಿ ಎಂಬ ಮಾಹಿತಿ ಕಾರ್ಯಾಗಾರವನ್ನು ಸಂಘದ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.ಆ ಮೂಲಕ ಹೆಚ್ಚು ಸ್ವಾವಲಂಬಿಗಳಾಗಲು ಸಾಧ್ಯವಾಗುತ್ತದೆ. ಅಲ್ಲದೆ ಕಾಫಿ ರೈತರಿಗೆ ಅತಿ ಹೆಚ್ಚು ಲಾಭ ತರುವ ಬೆಳೆಯಾಗಿದೆ ಎಂದರು.ಕದಂಬದ ವಿಶ್ವೇಶ್ವರ ಭಟ್ಟ, ಪ್ರಗತಿಪರ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ ಹೆಗಡೆ ಹುಳಗೋಳ, ಹಾಸನದ ಭಾರತೀಯ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ನವೀನ್ ಕುಮಾರ್, ಮೂಡಿಗೆರೆ ಗೌಡಳ್ಳಿಯ ಪ್ರಗತಿಪರ ಕೃಷಿಕ ಜಿ.ಎಂ. ಲಕ್ಷ್ಮಣ ಗೌಡ, ಚಿಕ್ಕಮಗಳೂರು ಭಾರತೀಯ ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟರೆಡ್ಡಿ ವೈ.ಬಿ. ಮೊದಲಾದವರು ಮಾತನಾಡಿದರು.

ವ್ಯವಸಾಯ ಸೇವಾ ಸಹಕಾರಿ ಸಂಘ ಉಮ್ಮಚಗಿಯ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ಕಾಫಿ ಮಂಡಳಿ ಕೊಪ್ಪದ ಹಿರಿಯ ಸಂಪರ್ಕಾಧಿಕಾರಿಗಳು ಮತ್ತು ವಿಜ್ಞಾನಿ ಮುಖಾರಿಬ್ ಡಿ.ಎಸ್. ಕಾಫಿ ಬೆಳೆಯ ಬಗ್ಗೆ ಮಾಹಿತಿ ನೀಡುವುದರೊಂದಿಗೆ ರೈತರೊಂದಿಗೆ ಸಂವಾದ ನಡೆಸಿದರು. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಶಿರಸಿಯಲ್ಲಿ ಕಾಫಿ ಮಂಡಳಿಯನ್ನು ತೆರೆಯುವಂತೆ ರೈತರು ಒಕ್ಕೊರಲಿನ ಒತ್ತಾಯ ಮಾಡಿದರು. ವಿ.ಎಸ್.ಎಸ್. ಕಾರ್ಯದರ್ಶಿ ನಾಗೇಂದ್ರ ಗೌಡ ಮತ್ತು ಸಂಘದ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಎಂ.ಜಿ. ಭಟ್ಟ ಸ್ವಾಗತಿಸಿದರು. ಕದಂಬದ ವಿಕಾಸ ಹೆಗಡೆ ಮಾವಿನ ಕೊಪ್ಪ ನಿರ್ವಹಿಸಿದರು. ಉದಯ ಭಟ್ಟ ಕಲ್ಲಳ್ಳಿ ವಂದಿಸಿದರು. ಮಧ್ಯಾಹ್ನ ಪ್ರಗತಿಪರ ಕಾಫಿ ಬೆಳೆಗಾರ ಶ್ರೀಧರ ಭಟ್ಟ ಹೊಸ್ಮನೆಯವರ ತೋಟದಲ್ಲಿ ಕ್ಷೇತ್ರ ಭೇಟಿ ನಡೆಸಲಾಯಿತು.