ಶಿಗ್ಗಾಂವಿ: ಪೋಷಕರು ತಮ್ಮ ಮಕ್ಕಳ ಅಗತ್ಯತೆಗಳನ್ನು ಅರಿತು, ಶಿಕ್ಷಣದ ಜೊತೆಗೆ ಮಕ್ಕಳ ಜೀವನಕ್ಕೆ ಬೇಕಾದ ಸಂಸ್ಕಾರಯುತ ಮೌಲ್ಯಗಳನ್ನು ಹೇಳಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಪ ನಿರ್ದೇಶಕ ಸುರೇಶ ಹುಗ್ಗಿ ಹೇಳಿದರು. ತಾಲೂಕಿನ ಹಿರೇಮಲ್ಲೂರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ನಡೆದ ಮಾತೃ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಕ್ಕಳಿಗಾಗಿ ತನ್ನೆಲ್ಲಾ ಕೆಲಸವನ್ನು ಬದಿಗಿಟ್ಟು ಸೇವೆ ಮಾಡುವ ಜೀವವಿದ್ದರೆ ಅದು ತಾಯಿಯೊಬ್ಬಳೆ, ಮಕ್ಕಳಿಗೆ ಮನೆಯ ಪಾಠಶಾಲೆಯಾದರೆ ಅದರಲ್ಲಿ ತಾಯಿಯೇ ಮೂಲ ಗುರು ಆಗಿರುವುದರಿಂದ ಮಗುವಿನ ಶಿಕ್ಷಣ, ಸಂಸ್ಕಾರ ರೂಪಿಸುವಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು. ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಕಾರ್ಯಕ್ರಮ ಕುರಿತು ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಸಂಸ್ಥೆಯ ಉಪನ್ಯಾಸಕರಾದ ಬಸವರಾಜ ಯುಎಂ., ರವೀಂದ್ರ ಎಸ್ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಮಕ್ಕಳಿಂದ ತಾಯಂದಿರ ಪಾದಪೂಜೆಯನ್ನು ನೆರವೇರಿಸಲಾಯಿತು. ಶಿಕ್ಷಕ ಎಸ್.ಎಸ್. ಮನಿಯಾರ ಅವರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಾಯಿಂದಿರುಗಳಿಗೆ ಸನ್ಮಾನಿಸಿ ಕಿರು ಕಾಣಿಕೆ ಸಲ್ಲಿಸಿದರು. ಶಾಲೆಯ ಭೂದಾನಿಗಳಾದ ಗಂಗಮ್ಮ ಮರಲಿಂಗಣ್ಣನವರ, ನಾಗಮ್ಮ ಮರಲಿಂಗಣ್ಣನವರ ಅವರನ್ನು ಶಾಲಾ ಸುಧಾರಣಾ ಸಮಿತಿ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಿಂದೂಧರ ಮುತ್ತಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ಗ್ರಾಪಂ ಅಧ್ಯಕ್ಷ ರಾಮನಗೌಡ ಕರಿಗೌಡ್ರ, ತಾಲೂಕು ನೌಕರರ ಸಂಘದ ಅಧ್ಯಕ್ಷ ಅರುಣ ಹುಡೆದಗೌಡ್ರ, ಮಂಜುನಾಥ ಸಲೊಂಕಿ, ಬಿ. ಶ್ರೀನಿವಾಸ್, ಬಿ.ವೈ. ಉಪ್ಪಾರ, ಗುರುರಾಜ ಹುಚ್ಚಣ್ಣನವರ, ಎಚ್. ಡಿ. ಗೋಣಿಗೌಡ್ರ ಸೇರಿದಂತೆ ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು, ಶಾಲೆಯ ಎಸ್ಡಿಎಂಸಿ ಸದಸ್ಯರು, ಗ್ರಾಮದ ಹಿರಿಯರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಾಲಕರು ಮಕ್ಕಳಿಗೆ ಜೀವನ ಮೌಲ್ಯಗಳನ್ನು ತಿಳಿಸಿ-ಸುರೇಶ ಹುಗ್ಗಿ
ಪೋಷಕರು ತಮ್ಮ ಮಕ್ಕಳ ಅಗತ್ಯತೆಗಳನ್ನು ಅರಿತು, ಶಿಕ್ಷಣದ ಜೊತೆಗೆ ಮಕ್ಕಳ ಜೀವನಕ್ಕೆ ಬೇಕಾದ ಸಂಸ್ಕಾರಯುತ ಮೌಲ್ಯಗಳನ್ನು ಹೇಳಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಪ ನಿರ್ದೇಶಕ ಸುರೇಶ ಹುಗ್ಗಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.