ಕನ್ನಡಪ್ರಭ ವಾರ್ತೆ ಪಾವಗಡ

ನಗರದ ಜನತೆಯ ಆಶೀರ್ವಾದದ ಮೇರೆಗೆ ಬರುವ ಪುರಸಭೆ ಚುನಾವಣೆಯಲ್ಲಿ ಪಟ್ಟಣದ 23 ವಾರ್ಡ್ ಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ವಿಶೇಷ ನಿಧಿಯ 17.50ಕೋಟಿ ರು. ವೆಚ್ಚದ ಎರಡನೇ ಹಂತವಾಗಿ ಗುರುವಾರ ಪುರಸಭಾ ವ್ಯಾಪ್ತಿಯಲ್ಲಿ ಗುಟ್ಟಹಳ್ಳಿ ರೈನ್‌ಗೇಜ್‌, ಎಂಇಆರ್‌ ಲೇಔಟ್‌,ಶ್ರೀನಿವಾಸ ನಗರ,ಭೋವಿ ಕಾಲೋನಿ ಸೇರಿದಂತೆ ನಗರದ 6 ರಿಂದ 23 ವಾರ್ಡ್ ಗಳಲ್ಲಿ ಸಿಸಿರಸ್ತೆ, ಚರಂಡಿ ನಿರ್ಮಾಣ ಹಾಗೂ ಇತರೆ 4ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದರು. ನಗರದ ಜನತೆಗೆ ವಸತಿ ಸೌಲಭ್ಯ ಕಲ್ಪಿಸಲು ಈಗಾಗಲೇ ಸಿಎಂಗೆ 5ಸಾವಿರ ಮನೆಗಳ ಮಂಜೂರಾತಿಗೆ ಮನವಿ ಸಲ್ಲಿಸಿದ್ದು, ಈ ಪೈಕಿ 3ಸಾವಿರ ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಇನ್ನೂ ಸಾವಿರ ಮನೆಗಳ ಮಂಜೂರಾತಿಗೆ ಈಗಾಗಲೇ ವಸತಿ ಸಚಿವರಾದ ಜಮೀರ್‌ ಖಾನ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇಲ್ಲಿನ ಮಾದ್ಯಮದವರು ಸೇರಿದಂತೆ ಅತ್ಯಂತ ಕಡುಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ ಅವರು ಮೂಲಭೂತ ಸಮಸ್ಯೆ ನಿವಾರಣೆಗೆ ಹೆಚ್ಚು ಒತ್ತು ನೀಡಲಾಗಿದೆ.

ತಾಲೂಕಿನಲ್ಲಿ ತಮ್ಮನು ಭರವಸೆಯಿಟ್ಟು ಆಯ್ಕೆ ಮಾಡಿದ್ದಾರೆ.ವಿವಿಧ ಯೋಜನೆ ಅಡಿ,ತಾಲೂಕಿನ ಜನತೆಯ ಒಳತಿಗಾಗಿ ಅಧಿಕಾರ ಬಳಸುತ್ತೇನೆ ಹೊರತು ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಪುರಸಭಾ ಮಾಜಿ ಅಧ್ಯಕ್ಷರಾದ ಸುದೇಶ್ ಬಾಬು,ತುಮುಲ್‌ ನಿರ್ದೇಶಕ ಚಂದ್ರಶೇಖರರೆಡ್ಡಿ, ಮುಖಂಡರಾದ ಎ.ಶಂಕರರೆಡ್ಡಿ, ಪಿ.ಎಚ್‌.ರಾಜೇಶ್, ವೇಲುರಾಜು,ರಾಮಾಂಜಿನಪ್ಪ,ರವಿ,ಆರ್.ಎ.ಹನುಮಂತರಾಯಪ್ಪ, ಮೊಹಮ್ಮದ್ ಇಮ್ರಾನ್,ಆರ್ .ಕೆ.ನಿಸ್ಸಾರ್ ಅಹ್ಮದ್, ಗೊರ್ತಿ ನಾಗರಾಜ್, ಗುಟ್ಟಹಳ್ಳಿ ಅಂಜಪ್ಪ,ನಾಮಿನಿ ಸದಸ್ಯರಾದ ಪಿ.ಎನ್‌.ರಾಮಲಿಂಗಪ್ಪ,ಎಸ್.ಎ. ಗಂಗಾಧರ್, ಬಾಲಸುಬ್ರಮಣ್ಯ,ಷಾಬಾಬು,ಕೋಟಗುಡ್ಡ ಸುರೇಶ್ ಸ್ವಾಮಿ, ರಿಜ್ವಾನ್ ಉಲ್ಲಾ,ಪುರಸಭೆ ಮುಖ್ಯಾಧಿಕಾರಿ ಜಾಫರ್‌ ಷರೀಷ್‌,ಎಂಜಿನಿಯರ್‌ ಹೆಂಜೇಶ್‌ಬಾಬು,ಭೂಸೇನಾ ಅಭಿವೃದ್ದಿ ನಿಗಮದ ಎಇಇ ಸಿಂಧು ಮತ್ತು ಮಹದೇವ್ ಸೇರಿ ಇನ್ನೂ ಅನೇಕ ಮಂದಿ ಮುಖಂಡರು ಮತ್ತು ವಾರ್ಡ್ಗಳ ಕಾರ್ಯಕರ್ತರಿದ್ದರು.


ಬಾಕ್ಸ್‌... ಈ ಬಾರಿಯ ಪುರಸಭೆ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಹಾಗೂ ಹೆಸರು ಕೆಡಿಸಿಕೊಂಡ ಪುರಸಭೆ ಮಾಜಿ ಸದಸ್ಯರಿಗೆ ಮತ್ತೆ ವಾರ್ಡ್‌ನ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ನಿಂದ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜಾತಿವಾರು ಮೀಸಲಾತಿ ಅನ್ವಯ, ಸೂಕ್ತ ಹಾಗೂ ಪ್ರಾಮಾಣಿಕ ವ್ಯಕ್ತಿಗೆ ಕಾಂಗ್ರೆಸ್‌ ಬೆಂಬಲಿಸಿ ಕಣಕ್ಕಿಳಿಸಲಿದ್ದೇವೆ. ಈ ಬಗ್ಗೆ ವಾರ್ಡ್‌ಗಳಿಗೆ ಭೇಟಿ ನೀಡಿ ಮತದಾರ ಹಾಗೂ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿ ಅವರ ಇಚ್ಚೆಯಂತೆ ಸೂಕ್ತ ಅಭ್ಯರ್ಥಿಯನ್ನು ಪುರಸಭೆ ಚುನಾವಣೆಯಲ್ಲಿ ಆಯ್ಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕ ವೆಂಕಟೇಶ್‌ ತಿಳಿಸಿದರು.