ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು/ಉಡುಪಿ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಶನಿವಾರದ ಮಳೆ ಭಾನುವಾರವೂ ಮುಂದುವರಿದಿದ್ದು, ಅನೇಕ ಕಡೆಗಳಲ್ಲಿ ಭಾರೀ ಹಾನಿ ಸಂಭವಿಸಿದೆ.ಉಡುಪಿ ಜಿಲ್ಲಾದ್ಯಂತ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಹಾಗೂ ಒಂದರಿಂದ ಹತ್ತನೇ ತರಗತಿವರೆಗಿನ ಶಿಕ್ಷಣ ಸಂಸ್ಥೆಗಳಿಗೆ (ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ) ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಂಗಳೂರು, ಬಂಟ್ವಾಳ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ ತಾಲೂಕುಗಳ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಜೂ. ೧೮ರ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜೂ. ೧೮ರವರೆಗೂ ಭಾರೀ ಗಾಳಿ ಮಳೆಯಾಗುವ ಸಾಧ್ಯತೆಯಿದ್ದು, ಗಾಳಿಯು ಗಂಟೆಗೆ ೪೦-೫೦ ಕಿ.ಮೀ. ವೇಗದಲ್ಲಿ ಬೀಸಲಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಬಾನುವಾರ ಕೂಡ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ ಉಡುಪಿ ನಗರದದಾದ್ಯಂತ ರಸ್ತೆಗಳಲ್ಲಿ ನೀರು ಹರಿಯಿತು. ಮಳೆಯಿಂದಾಗಿ ಪ್ರಮುಖ ರಸ್ತೆಗಳಾದ ಉದ್ಯಾವರ, ಬೈಪಾಸ್ ರಸ್ತೆ, ಕಿನ್ನಿಮೂಲ್ಕಿ, ಸರ್ವಿಸ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಮಣಿಪಾಲ, ಇಂದ್ರಾಳಿ, ಸಿಟಿ ಬಸ್ ನಿಲ್ದಾಣ, ಬನ್ನಂಜೆ ರಸ್ತೆಗಳಲ್ಲಿ ಅಲ್ಲಲ್ಲಿ ನೀರು ನಿಂತಿತ್ತು. ಉಡುಪಿ ಜಿಲ್ಲೆಯ ಕಾರ್ಕಳ - 74.9, ಕುಂದಾಪುರ - 44.4, ಉಡುಪಿ - 77.9, ಬೈಂದೂರು - 58.6, ಬ್ರಹ್ಮಾವರ - 56.2, ಕಾಪು - 88.1, ಹೆಬ್ರಿ - 48.6 ಮಿ .ಮೀ ಮಳೆ ಸುರಿದಿದೆ.
ದಕ್ಷಿಣ ಕನ್ನಡ ವರದಿ:ಮಂಗಳೂರಿನ ಕದ್ರಿ ಶಿವಭಾಗ್ ಹಾಗೂ ಕಂಕನಾಡಿಯಲ್ಲಿ ಬೃಹತ್ ತಡೆಗೋಡೆಗಳು ಉರುಳಿಬಿದ್ದು ಆತಂಕದ ಪರಿಸ್ಥಿತಿ ಉದ್ಭವಿಸಿದ್ದರೆ, ಹತ್ತಾರು ಮನೆಗಳಿಗೆ ಹಾನಿ ಉಂಟಾಗಿದೆ. ಹಲವು ಮರಗಳು, ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.
ಮಂಗಳೂರಿನಲ್ಲಿ ಶನಿವಾರದ ಕೃತಕ ಪ್ರವಾಹ ಬಳಿಕ ಹತೋಟಿಗೆ ಬಂದಿದ್ದರೂ, ಭಾನುವಾರ ಬೆಳಗ್ಗೆ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಜಿಲ್ಲಾದ್ಯಂತ ಶನಿವಾರ ರಾತ್ರಿಯಿಡೀ ನಿರಂತರ ಮಳೆಯಾಗಿದ್ದರೂ ಮಳೆಯ ತೀವ್ರತೆ ಕೊಂಚ ಕಡಿಮೆ ಇದ್ದುದರಿಂದ ಆತಂಕದ ಪರಿಸ್ಥಿತಿ ಉದ್ಭವಿಸಿಲ್ಲ. ಮಧ್ಯಾಹ್ನ ಬಳಿಕ ಮಳೆ ಮಾಯವಾಗಿದ್ದು ಜನ ನಿಟ್ಟುಸಿರುಬಿಡುವಂತಾಯಿತು. ಜಿಲ್ಲೆಯ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಗ್ರಾಮೀಣ ಪ್ರದೇಶದ ಕೆಲವೆಡೆ ಕೃಷಿ ಜಮೀನು, ತೋಟಗಳಿಗೆ ನೀರು ನುಗ್ಗಿದೆ. ಸೋಮವಾರವೂ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಅಪಾರ್ಟ್ಮೆಂಟ್ ತಡೆಗೋಡೆ ಕುಸಿತ:ಮಳೆಯಬ್ಬರಕ್ಕೆ ಮಂಗಳೂರಿನ ಕದ್ರಿ ಶಿವಭಾಗ್ ಬಳಿಯ ಅಪಾರ್ಟ್ಮೆಂಟ್ ಹಿಂಬದಿಯ ಬೃಹತ್ ಕಾಂಕ್ರಿಟ್ ತಡೆಗೋಡೆ ಕುಸಿದು ಅಪಾರ್ಟ್ಮೆಂಟ್ನ 2 ಮನೆಗಳಿಗೆ ಹಾನಿಯಾಗಿದೆ. ಬೃಹತ್ ಗುಡ್ಡಕ್ಕೆ ಅಡ್ಡಲಾಗಿ ಕಾಂಕ್ರೀಟಿನಿಂದ ಭಾರೀ ತಡೆಗೋಡೆ ನಿರ್ಮಿಸಲಾಗಿತ್ತು. ನಿರಂತರ ಮಳೆಯಿಂದ ಗುಡ್ಡ ಶಿಥಿಲಗೊಂಡು ತಡೆಗೋಡೆಯನ್ನು ಸೀಳಿ ಭಾರೀ ಪ್ರಮಾಣದ ಕಲ್ಲು- ಮಣ್ಣು ಅಪಾರ್ಟ್ಮೆಂಟ್ ನೆಲ ಅಂತಸ್ತಿಗೆ ನುಗ್ಗಿತ್ತು. ಈ ವೇಳೆ ಎರಡು ಫ್ಲ್ಯಾಟ್ಗಳ ಬಾಲ್ಕನಿ, ಕಿಟಕಿಯಿಂದ ಭಾರೀ ಮಣ್ಣು ಮನೆಯೊಳಗೆ ಹೋಗಿದೆ. ಎಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ನೆಲ ಅಂತಸ್ತಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಕಾರಿಗೂ ಹಾನಿ ಸಂಭವಿಸಿದೆ.ಈ ಗುಡ್ಡ ಮತ್ತಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ. ತಡೆಗೋಡೆಯ ಮೇಲ್ಭಾಗದಲ್ಲಿರುವ ಮನೆ ಕೂಡ ಅಪಾಯಕ್ಕೆ ಸಿಲುಕಿದೆ.
ತಪ್ಪಿದ ಭಾರೀ ಅನಾಹುತ:ನಗರದ ಕಂಕನಾಡಿ ಬಳಿಯ ಖಾಸಗಿ ಆಸ್ಪತ್ರೆಯ ಆಳೆತ್ತರದ ತಡೆಗೋಡೆ ಭಾನುವಾರ ಬೆಳಗ್ಗೆ ರಸ್ತೆಗೆ ಕುಸಿದಿತ್ತು. ಅದರ ರಭಸಕ್ಕೆ ಎದುರು ಮನೆಯ ಕಂಪೌಂಡ್ ಗೇಟ್ ಕಿತ್ತು ಬಂದಿದ್ದು, ವಿದ್ಯುತ್ ಕಂಬ ಮುರಿದಿದೆ. ತಡೆಗೋಡೆ ಬಿದ್ದಾಗ ಭಾರೀ ನೀರು ಮನೆಗಳಿಗೆ ನುಗ್ಗಿತ್ತು. ಮನೆ ಮಾಲೀಕ ಜೋಕಿ ಡಿಸೋಜ ಅವರ ಕುಟುಂಬ ಚರ್ಚ್ಗೆ ಹೋಗಲು ಅಣಿಯಾಗುತ್ತಿತ್ತು. ಅಷ್ಟರೊಳಗೆ ತಡೆಗೋಡೆ ಬಿದ್ದಿದ್ದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ.
ತಡೆಗೋಡೆ ಬೀಳುವ ಮೊದಲು ಮೂರ್ನಾಲ್ಕು ವಾಹನಗಳು ಅದೇ ರಸ್ತೆಯಲ್ಲಿ ಹಾದು ಹೋಗಿದ್ದು, ಕೆಲವೇ ಸೆಕೆಂಡುಗಳ ಕಾಲ ತಡವಾಗಿದ್ದರೂ ಪ್ರಾಣಾಪಾಯ ಆಗುವ ಸಾಧ್ಯತೆ ಇತ್ತು. ತಡೆಗೋಡೆ ಬಿದ್ದ ಸಿಸಿ ಟಿವಿ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕೃತಿ ವಿಕೋಪದ ಭೀಕರತೆಯನ್ನು ಅನಾವರಣಗೊಳಿಸಿದೆ.ಮನೆಗಳಿಗೆ ಹಾನಿ:
ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹತ್ತಾರು ಮನೆಗಳಿಗೆ ಹಾನಿ ಸಂಭವಿಸಿದೆ. ಬಜಾಲ್ ಪಕ್ಕಲಡ್ಕ ಎಂಬಲ್ಲಿ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಣ್ಣಗುಡ್ಡೆಯ ಗಾಂಧಿನಗರ, ಅತ್ತಾವರ, ಸುರತ್ಕಲ್, ಬೈಕಂಪಾಡಿ ವ್ಯಾಪ್ತಿಯಲ್ಲಿ ಮರಗಳು ಉರುಳಿ ಕೆಲವೆಡೆ ಸಂಚಾರಕ್ಕೆ ಅಡ್ಡಿಯಾಗಿತ್ತು.ನಗರದ ಬಟ್ಟಗುಡ್ಡೆಯಿಂದ ಸರ್ಕ್ಯೂಟ್ ಹೌಸ್ ಕಡೆ ಹೋಗುವ ರಸ್ತೆ ಪಕ್ಕ ಸರ್ಕ್ಯೂಟ್ ಹೌಸ್ನ ಧರೆ ಕುಸಿದಿದೆ. ಇಲ್ಲಿ ನಾಲ್ಕೈದು ವರ್ಷಗಳ ಹಿಂದೆ ಧರೆ ಕುಸಿದಿದ್ದಾಗ ಜಲ್ಲಿ ತುಂಬಿದ ಚೀಲಗಳನ್ನಿರಿಸಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಅದರ ಬಳಿಕ ಶಾಶ್ವತ ಕಾಮಗಾರಿ ನಡೆಸದೆ ಇದ್ದುದರಿಂದ ಮತ್ತೆ ಕುಸಿದಿದೆ.
ಮತ್ತೆ ಮನೆಗಳಿಗೆ ನುಗ್ಗಿದ ನೀರು:ನಿರಂತರ ಮಳೆಯಿಂದ ಬೆಳಗ್ಗೆ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ಮಾಲೆಮಾರ್ನಲ್ಲಿ ಅನೇಕ ಮನೆಗಳು ಜಲಾವೃತಗೊಂಡಿದ್ದರೆ, ಭಗವತಿನಗರ, ಅತ್ತಾವರ, ಪಾಂಡೇಶ್ವರದಲ್ಲೂ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ಮಳೆ ಕಡಿಮೆಯಾದ ಬಳಿಕ ನೀರು ಇಳಿದಿದೆ. ಭಾನುವಾರ ಮಧ್ಯಾಹ್ನದಿಂದ ಸಂಜೆವರೆಗೆ ಬಿಡುವು ನೀಡಿದ ಮಳೆ ಬಳಿಕ ಮತ್ತೆ ಆರಂಭಗೊಂಡಿತ್ತು.
ಪ್ರವಾಹ ನೀರಿನಲ್ಲಿ ಸಾಗಿದ ಶಾಸಕ ಕಾಮತ್:ಕೃತಕ ಪ್ರವಾಹದಿಂದ ಭಾರೀ ಅವಾಂತರ ಸೃಷ್ಟಿಯಾದ ಶನಿವಾರ ಶಾಸಕ ವೇದವ್ಯಾಸ ಕಾಮತ್ ಅವರು ಸೊಂಟಮಟ್ಟ ನೀರಿನಲ್ಲಿ ಸಾಗಿಕೊಂಡು ಪ್ರವಾಹ ಪ್ರದೇಶಗಳನ್ನು ವೀಕ್ಷಿಸಿದರು. ಲುಂಗಿ ಉಟ್ಟುಕೊಂಡ ಶಾಸಕರು ಪ್ರವಾಹ ಪ್ರದೇಶಗಳಲ್ಲಿ ಸಾಗುತ್ತಿದ್ದರೆ ಅಧಿಕಾರಿಗಳು ಅವರನ್ನು ಅನಿವಾರ್ಯವಾಗಿ ಹಿಂಬಾಲಿಸಬೇಕಾಯಿತು.
-------------ಮತ್ತಷ್ಟು ಅಪಾಯಕಾರಿಯಾದ ಕೆತ್ತಿಕಲ್ ಗುಡ್ಡಕಾಮಗಾರಿ ಅವ್ಯವಸ್ಥೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು- ಗುರುಪುರ ನಡುವಿನ ಕೆತ್ತಿಕಲ್ ಗುಡ್ಡ ಕುಸಿಯುತ್ತಲೇ ಇದ್ದು ಭಾರೀ ಅಪಾಯಕಾರಿಯಾಗಿ ಪರಿಣಮಿಸಿದೆ. ಮಳೆ ಮುಂದುವರಿದರೆ ಮೇಲ್ಭಾಗದಲ್ಲಿರುವ 9 ಮನೆಗಳು ನೆಲಸಮವಾಗುವ ಭೀತಿ ಮಾತ್ರವಲ್ಲದೆ, ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೂ ಸಂಚಕಾರ ಬರುವ ಅಪಾಯವಿದೆ.ಶನಿವಾರ ರಾತ್ರಿ ಕೆತ್ತಿಕಲ್ ಗುಡ್ಡ ಕುಸಿಯಲು ಆರಂಭವಾಗಿದ್ದು, ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಪೂರ್ತಿ ಮಣ್ಣಿನಿಂದ ಆವೃತವಾಗಿ ಆ ಬದಿಯ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರಸ್ತೆ ವಿಭಾಜಕದ ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿವೆ. ಕುಸಿದ ಮಣ್ಣನ್ನು ಪೂರ್ತಿಯಾಗಿ ತೆರವುಗೊಳಿಸಿದರೆ ಮಣ್ಣು ಜಾರಿ ಇನ್ನಷ್ಟು ಅನಾಹುತಕ್ಕೆ ಕಾರಣವಾಗಬಹುದು ಎಂಬ ಉದ್ದೇಶದಿಂದ ಕುಸಿದ ಮಣ್ಣನ್ನು ಹಾಗೆಯೇ ಇರಿಸಲಾಗಿದೆ, ಅಗತ್ಯ ಇರುವ ಕಡೆಗಳಲ್ಲಿ ಮಣ್ಣು ತೆರವು ಕಾರ್ಯ ನಡೆದಿದೆ ಎಂದು ಮಂಗಳೂರು ತಹಸೀಲ್ದಾರ್ ತಿಳಿಸಿದ್ದಾರೆ.