ಸಾರಾಂಶ
-ಡಾ.ಫ.ಗು.ಹಳಕಟ್ಟಿ ಜಯಂತಿ
-ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಹಳಕಟ್ಟಿ: ರಮೇಶ್ ಬಾಬು ಅಭಿಮತಕನ್ನಡಪ್ರಭ ವಾರ್ತೆ ರಾಮನಗರ
ಡಾ.ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯದ ಅನರ್ಘ್ಯ ರತ್ನ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಹೇಳಿದರು.
ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ ಉದ್ಪಾಟಿಸಿ ಮಾತನಾಡಿ, ಡಾ.ಫ.ಗು.ಹಳಕಟ್ಟಿಯವರದು ವೈವಿಧ್ಯಮಯ ವ್ಯಕ್ತಿತ್ವ. ಶಿಕ್ಷಣ, ಸಾಹಿತ್ಯ ಮತ್ತು ಸಹಕಾರ ಕ್ಷೇತ್ರಗಳಿಂದ ಅವರ ಬಾಳು ಬಂಗಾರವಾಯಿತು ಎಂದು ಹೇಳಿದರು.ಕನ್ನಡ ಮತ್ತು ಕರ್ನಾಟಕ ಜೀವನದ ಉಸಿರಾಗಿತ್ತು. ಕರ್ನಾಟಕದ ಮ್ಯಾಕ್ಸ್ ಮುಲ್ಲರ್ ಎಂಬ ಕೀರ್ತಿಗೆ ಭಾಜನರಾದರು. ಶರಣರ ಜೀವನ ಮೌಲ್ಯಗಳನ್ನು ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.ಒಂದು ವೇಳೆ ಹಳಕಟ್ಟಿಯವರು ಶರಣ ಸಾಹಿತ್ಯದ ಕಡೆಗೆ ಲಕ್ಷ್ಯ ಹರಿಸದೇ ಇದ್ದರೆ ಇಂದು ನಮಗೆ ಶಿವಶರಣರ ವಚನಗಳು ದೊರಕುತ್ತಿರಲಿಲ್ಲ. ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದತ್ತ ವಾಲಿದರು. ವಕೀಲ ವೃತ್ತಿ ಪ್ರಾರಂಭಿಸಿದ ಬಳಿಕ ಆ ಹಂಬಲ ಹೆಚ್ಚಾಗಿ ಸಾಹಿತ್ಯ ರಚನೆಗೆ ತೊಡಗಿದರು. ತಾಡವೊಲೆ ಹಸ್ತಪ್ರತಿ ಸಂಗ್ರಹಿಸತೊಡಗಿದರು ಎಂದರು.
ಸಾಹಿತ್ಯ ಸೇವೆ ಮೆಚ್ಚಿ 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕನ್ನಡಿಗರು ಅವರನ್ನು ಸನ್ಮಾನಿಸಿದರು. ಜನ ವಚನ ಪಿತಾಮಹ ಎಂದು ಪ್ರೀತಿಯಿಂದ ಕರೆದರು. ಕೇಂದ್ರ ಸರ್ಕಾರ ರಾವ್ ಬಹದ್ದೂರ್ ಪದವಿ ನೀಡಿ ಗೌರವಿಸಿತು. 1956ರಲ್ಲಿ ಗೌರವ ಡಿಲಿಟ್ ಪದವಿ ಇತ್ತು ಸನ್ಮಾನಿಸಿತು. ಮೈಸೂರು ರಾಜ್ಯಪಾಲರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ವಿಜಾಪುರಕ್ಕೆ ಹೋದಾಗ ಹಳಕಟ್ಟಿಯವರ ಮನೆಗೆ ಹೋಗಿ ಹೂ-ಹಣ್ಣು ಸಮರ್ಪಿಸಿ ನಮಸ್ಕರಿಸಿ ಬಂದರು ಎಂದು ಹೇಳಿದರು.ಈ ವೇಳೆ ಆರಕ್ಷಕ ನಿರೀಕ್ಷಕ ಕೆ.ಎ.ಕೃಷ್ಣ, ಶಿಕ್ಷಣ ಇಲಾಖೆಯ ಸಹಾಯಕ, ಯೋಜನಾ ಸಮನ್ವಯಾಧಿಕಾರಿ ಸುರೇಶ್, ಕನ್ನಡ ಸಂಘಟನೆಯ ರಾಜೇಂದ್ರ ಮತ್ತಿತರರು ಇದ್ದರು.