ಬೇಲೂರು: ಪ್ರತಿಯೊಬ್ಬರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಟ 10 ಸಸಿಗಳನ್ನು ನೆಟ್ಟು ಪೋಷಿಸಿ ಪರಿಸರಕ್ಕೆ ಹಾಗೂ ಮುಂದಿನ ಭವಿಷ್ಯಕ್ಕೆ ಕೊಡುಗೆ ಸಲ್ಲಿಸುವುದು ಪ್ರಜ್ಞಾವಂತರ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಹೇಳಿದರು. ಪಟ್ಟಣದ ಹೊಸನಗರ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸಂಭ್ರಮದಿಂದ ಪರಿ, ಸಮಾಜದ ಪ್ರತಿಯೊಬ್ಬ ನಾಗರಿಕನು ಪರಿಸರವನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕು, ಆ ಮೂಲಕ ನಾವು ಪರಿಸರಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕು. ಹೊಸನಗರ ಸರ್ಕಾರಿ ಶಾಲೆಯ ಪರಿಸರ ಉತ್ತಮವಾಗಿದ್ದು, ಇಲ್ಲಿಯ ಶಿಕ್ಷಕರ ಮಕ್ಕಳ ಬಾಂಧವ್ಯ ಉತ್ತಮವೆಂದು ತಿಳಿದುಬಂದಿದ್ದು, ಮಾನ್ಯ ಶಾಸಕರು ಸಹ ಈ ಶಾಲೆಯ ಬಗ್ಗೆ ಪ್ರಶಂಸೆಯ ನುಡಿಗಳನ್ನು ಆಡಿದ ಬಗ್ಗೆ ಸ್ಮರಿಸಿದರು. ಪೋಷಕರು ಸರ್ಕಾರಿ ಶಾಲೆಯ ಉಳಿವಿಗೆ ಬೆಂಬಲಿಸಬೇಕೆಂದರು. ಮುಖ್ಯ ಶಿಕ್ಷಕರಾದ ಕಿರಣ್ ಕುಮಾರ್‌ ಬಿ ಮಾತನಾಡಿ, ಪರಿಸರ ನಮಗೇನು ನೀಡಿದೆ ಎಂಬುದಕ್ಕಿಂತ ನಾವು ಪರಿಸರಕ್ಕೆ ಏನು ನೀಡುತ್ತೇವೆ ಎಂಬುದು ಅತಿ ಮುಖ್ಯವಾಗುತ್ತದೆ. ಹಾಗಾಗಿ ಎಲ್ಲರೂ ಸ್ವಚ್ಛ ಪರಿಸರವನ್ನು ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಬೇಕು. ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡದೆ ಮುಂದಿನ ಪೀಳಿಗೆಗೂ ಸ್ವಚ್ಛ ಪರಿಸರವನ್ನು ಉಳಿಸುವುದು ಜವಾಬ್ದಾರಿ ನಾಗರೀಕನ ಕರ್ತವ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪೋಷಕರು ಜನಪ್ರತಿನಿಧಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸದಸ್ಯರು ಸಹಕಾರ ನೀಡಿದಲ್ಲಿ ಗುಣಾತ್ಮಕ ಬೋಧನೆ ಮತ್ತು ಕಲಿಕೆಯೊಂದಿಗೆ ಹೊಸನಗರ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ನಿರ್ಮಾಣ ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ನಿಕಟ ಪೂರ್ವ ಅಧ್ಯಕ್ಷರಾದ ಮೀನಾಕ್ಷಿ , ಸಿಆರ್‌ಪಿ ಮೋಕ್ಷ , ಇಸಿಒ ನಾಗಮ್ಮ, ಶಿಕ್ಷಕಿಯರಾದ ಯಶೋಧ, ರಮಾಮಣಿ, ಮಮತಾ, ಸತ್ಯಮ್ಮ ಹಾಗೂ ಪಾಲಕರಾದ ಲಕ್ಷ್ಮೀ, ಶಾಜೀಯ, ಸೆಲ್ವಿ, ಪರ್ವೀನ್ ತಾಜ್‌ ಪಾಲ್ಗೊಂಡಿದ್ದರು.