ಕನ್ನಡಪ್ರಭ ವಾರ್ತೆ ರಾಮನಾಥಪುರ
ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಭೈಪ್ ಸಂಸ್ಥೆ ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮುಂತಾದ ಸಂಘ ಸಂಸ್ಥೆಗಳ ವತಿಯಿಂದ ಗಿಡಗಳನ್ನು ನೆಡುವುದು, ಕಾವೇರಿ ನದಿ ದಂಡೆಯಲ್ಲಿರುವ ಗಿಡಗಂಟಿಗಳನ್ನು ತೆಗೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ರಾಮನಾಥಪುರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಎಂ. ಎಸ್. ಸರ್ವಮಂಗಳ ಮಾತನಾಡಿ ಪ್ರತಿಯೊಬ್ಬರು ಸದಾ ಸಮಾಜದ ಹಿತ ಬಯಸುತ್ತಾ ಪರಿಷರ ಸ್ವಚ್ಛತೆಗಾಗಿ ಶ್ರಮಿಸಿ ಶಾಲಾ ಕಾಲೇಜುಗಳ ಮೈಧಾನದ ಸುತ್ತ ನೂರಾರು ಮರಗಿಡಗಳನ್ನು ನೆಟ್ಟಿದ್ದು, ಇದರಿಂದ ಶಾಲಾ ಕಾಲೇಜು ಸ್ವಚ್ಛವಾಗಿ ಕಾಣುತ್ತದೆ ಎಂದು ತಿಳಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಮಾತನಾಡಿ, ಕೊಡಗಿನ ತಲಕಾವೇರಿಯಿಂದ ತಮಿಳುನಾಡು ಅರಬಿ ಸಮುದ್ರದವರೆಗೆ ಕಾವೇರಿ ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಹಿಂದಿನಿಂದಲೂ ಸಾಧುಸಂತರು ಹಾಗೂ ಕಾವೇರಿ ನದಿ ಸಮಿತಿಯವರು ಕಾವೇರಿ ನದಿ ರಕ್ಷಣೆಗಾಗಿ ಆಗ್ರಹಿಸಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಾ ಬಂದಿದ್ದಾರೆ ಎಂದು ಅವರು ಕಾವೇರಿ ನದಿ ಉಳಿಸಲು ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ಜಾರಿಗೆ ತಂದು ಕಾವೇರಿ ಮಲಿನವಾಗದ ರೀತಿ ಸ್ವಚ್ಛತೆ ಕಾಪಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕುಮಾರಸ್ವಾಮಿ ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರು ಹಾಗೂ ಭೈಫ್ ಸಂಸ್ಥೆಯ ಯೋಜನಾ ಸಂಯೋಜಕರಾದ ಗಿರೀಶ್ ಶಂಕರಪ್ಪ ಮತ್ತು ನವೀನ್, ಕಾವೇರಿ ನದಿ ಸ್ವಚ್ಛತಾ ಸಮಿತಿ ಅಧ್ಯಕ್ಷರು ಸಿದ್ದರಾಜು, ಉಪಾಧ್ಯಕ್ಷರು ಆರ್. ಕೆ. ಶ್ರೀನಿವಾಸ್, ಐ.ಬಿ. ಕುಮಾರ್ ಮುಂತಾದವರು ಭಾಗವಹಿಸಿದ್ದರು.