ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅವತರಣದ ಶತಮಾನೋತ್ಸವದ ಅಂಗವಾಗಿ ಬಾಬಾರವರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯ ಪ್ರೇಮದ ಸಂದೇಶ ಸಾರಲು ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯು ಆ.2ರಂದು ದಾವಣಗೆರೆ ಜಿಲ್ಲೆಗೆ ಆಗಮಿಸಲಿದೆ ಎಂದು ರಥಯಾತ್ರೆ ಉಸ್ತುವಾರಿ ಜಿಲ್ಲಾ ಸಂಯೋಜಕ ಸಾಯಿನಾಥ ಪ್ರಸಾದ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಜಿಲ್ಲಾ ಘಟಕದಿಂದ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಪುಟ್ಟಪರ್ತಿಯಿಂದ ಬಳ್ಳಾರಿಗೆ ಆಗಮಿಸಿ, ಅಲ್ಲಿಂದ ದಾವಣಗೆರೆಗೆ ರಥಯಾತ್ರೆ ಬರಲಿದ್ದು, ಆ.2ರಂದು ಬೆಳಿಗ್ಗೆ 10.35ಕ್ಕೆ ಜಗಳೂರಿನ ಶ್ರೀ ದೊಡ್ಡ ಮಾರಮ್ಮ ದೇವಸ್ಥಾನದ ಬಳಿ ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷ ವೆಂಕಟರಮಣ ಗೋಸಾವಿ ಜಿಲ್ಲೆಯಲ್ಲಿ ರಥಯಾತ್ರೆಗೆ ಚಾಲನೆ ನೀಡುವರು ಎಂದರು.
ಜಗಳೂರಿನಿಂದ ಹೊರಡುವ ರಥಯಾತ್ರೆ ಆಣಜಿ, ಮೆಳೇಕಟ್ಟೆ, ಆಲೂರುಹಟ್ಟಿ ಮಾರ್ಗವಾಗಿ ದಾವಣಗೆರೆ ತಾ. ಎಲೆಬೇತೂರು ಗ್ರಾಮಕ್ಕೆ ಅದೇ ಮಧ್ಯಾಹ್ನ 1.30ಕ್ಕೆ ಆಗಮಿ ಸಲಿದ್ದು, ನಂತರ ಎಲೆಬೇತೂರಿನ ಶ್ರೀ ಬಸವೇಶ್ವರ ವೃತ್ತದಿಂದ ಹೊರಟು ದಾವಣಗೆರೆ ನಗರ ಪ್ರವೇಶಿಸಲಿದೆ. ವಿಶೇಷ ಶೋಭಾಯಾತ್ರೆಯು ಪಿ.ಬಿ. ರಸ್ತೆಯ ಶ್ರೀ ಕೋದಂಡ ರಾಮ ದೇವಸ್ಥಾನದಿಂದ ಮಧ್ಯಾಹ್ನ 3ಕ್ಕೆ ಪ್ರಾರಂಭವಾಗಿ ಶ್ರೀ ರಾಘವೇಂದ್ರ ಮಠದ ಪಕ್ಕದ ಪಿ.ಜೆ. ಬಡಾವಣೆಯ ಶ್ರೀ ಸತ್ಯಸಾಯಿ ದೇವಸ್ಥಾನಕ್ಕೆ ಆಗಮಿಸಲಿದೆ ಎಂದು ಹೇಳಿದರು.ಶ್ರೀ ಕೋದಂಡರಾಮ ದೇವಸ್ಥಾನದಿಂದ ಹೊರಟು ಗಾಂಧಿ ವೃತ್ತದ ಮಾರ್ಗವಾಗಿ ಶ್ರೀ ರೇಣುಕಾ ಮಂದಿರ ಅಲ್ಲಿಂದ ಅಕ್ಕ ಮಹಾದೇವಿರ ರಸ್ತೆಯ ಮಾರ್ಗವಾಗಿ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಅಲ್ಲಿಂದ ಅರುಣಾ ಚಿತ್ರ ಮಂದಿರದ ಶ್ರೀ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಹೋಗುವ ಮಾರ್ಗದ ಶ್ರೀ ಸತ್ಯಸಾಯಿ ಮಂದಿರದವರೆಗೆ ರಥಯಾತ್ರೆಯು ಸಾಗಲಿದೆ. ನಂತರ ದಿವ್ಯ ಸನ್ನಿಧಿಯ ದರ್ಶನ ಮತ್ತು ಪಾದುಕಾ ನಮಸ್ಕಾರ ಕಾರ್ಯಕ್ರಮ ಸಂಜೆ 5.30ರಿಂದ ರಾತ್ರಿ 8ರವರೆಗೆ ಇರಲಿದೆ. ಸಂಜೆ 6ರಿಂದ ರಾತ್ರಿ 7ರವರೆಗೆ ಶ್ರೀ ಸತ್ಯಸಾಯಿ ಪಾದುಕಾಪೂಜೆ ಮತ್ತು ಭಜನೆ ನಡೆಯಲಿದೆ ಎಂದು ತಿಳಿಸಿದರು.
ಸಂಸ್ಥೆಯ ಜಗನ್ನಾಥ ನಾಡಿಗೇರ, ಪಾಂಡುರಂಗ ರಾವ್, ಮಂಜುಳಾ, ಶುಭಾಷಿಣಿ ನಾಗರಾಜ, ಅನ್ನಪೂರ್ಣ, ಕಿರಣ ಎಸ್.ರಾಯ್ಕರ್ ಇತರರು ಇದ್ದರು.