ಕನಕಪುರ: ಕನ್ನಡನಾಡಿನ ಹೆಮ್ಮೆಯ ಪುತ್ರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಎನ್‌ಡಿಎ ಮೈತ್ರಿ ಕೂಟದ ಕಾರ್ಯಕರ್ತರು, ಮುಖಂಡರು, ದೇವೇಗೌಡರ ಅಭಿಮಾನಿ ಬಳಗ ನಿಶ್ಚಯಿಸಿರುವುದಾಗಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ.ನಾಗರಾಜು ತಿಳಿಸಿದರು.

ಕಸಬಾ ಹೋಬಳಿಯ ಶಿವನಹಳ್ಳಿ ಬಳಿ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ನಾಡು ಕಂಡ ಅಪರೂಪದ ರಾಜಕಾರಣಿ, ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರ 94ನೇ ಹುಟ್ಟುಹಬ್ಬವನ್ನು ತಾಲೂಕು ಕ್ರೀಡಾಂಗಣದಲ್ಲಿ ಮೈತ್ರಿ ಕೂಟದ ಮುಖಂಡರು, ಕಾರ್ಯಕರ್ತರ ಸಹಕಾರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಸತತ ಮೂರು ದಿನಗಳ ಕಾಲ ಅದ್ಧೂರಿ ಸಮಾರಂಭದಲ್ಲಿ ಆರೋಗ್ಯ ಶಿಬಿರ, ಕ್ರೀಡಾಕೂಟ, ಕಲ್ಯಾಣ ಉತ್ಸವ, ಗಣ್ಯರಿಗೆ ಸನ್ಮಾನ ಸೇರಿದಂತೆ ರಸಮಂಜರಿ ಹಮ್ಮಿಕೊಳ್ಳಲಾಗುವುದು ಎಂದರು.

ರಾಜ್ಯ ಯುವ ಜನತಾದಳ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ದೇವೇಗೌಡರ ಹುಟ್ಟುಹಬ್ಬವನ್ನು ಉತ್ಸವ ರೀತಿಯಲ್ಲಿ ಆಚರಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಿ ಅಂದಿನ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ವರಿಷ್ಠ ಜೆ.ಪಿ.ನಡ್ಡಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಮೈತ್ರಿ ಪಕ್ಷದ ಶಾಸಕರು, ಮಾಜಿ ಸಚಿವರನ್ನು ಆಹ್ವಾನಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ಮಾಜಿ ಅಧ್ಯಕ್ಷ ಸಿದ್ದಮರಿಗೌಡ, ಪಕ್ಷದ ಮುಖಂಡರಾದ ಗೇರಹಳ್ಳಿ ಸಣ್ಣಪ್ಪ, ರಾಜೇಶ್, ಕಬ್ಬಾಳೇಗೌಡ, ತುಂಗಣಿ ರಾಮಕೃಷ್ಣ, ಪುಟ್ಟರಾಜು, ಶಿವಶಂಭುಲಿಂಗೇಗೌಡ, ವಕೀಲ ನಂಜೇಗೌಡ, ಕಾಳೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ನಗರಾಧ್ಯಕ್ಷ ಕೋಟೆ ಮಂಜು, ಶೋಭಾ ಇತರರು ಪಾಲ್ಗೊಂಡಿದ್ದರು.

ಕೆಕೆಪಿ ಸುದ್ದಿ 01:


ಕನಕಪುರದಲ್ಲಿ ಮೈತ್ರಿಕೂಟ ಆಯೋಜಿಸಿದ್ದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಆಚರಣೆ ಹಾಗೂ ಜೆಡಿಎಸ್ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಯಮುತ್ತು, ಬಿ.ನಾಗರಾಜು, ಚಿನ್ನಸ್ವಾಮಿ, ಕೋಟೆ ಮಂಜು ಉಪಸ್ಥಿತರಿದ್ದರು.