ಸಮುದಾಯದ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಸರ್ಕಾರಿ ಶಾಲಾ, ಕಾಲೇಜುಗಳ ಆಸ್ತಿಗಳ ಸಂರಕ್ಷಣೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಹೇಳಿದ್ದಾರೆ.

- ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಐರಣಿ ಹನುಮಂತಪ್ಪಗೆ ಸನ್ಮಾನ

- - -

ಕನ್ನಡಪ್ರಭ ವಾರ್ತೆ ಹರಿಹರ

ಸಮುದಾಯದ ಪಾಲ್ಗೊಳ್ಳುವಿಕೆ ಇದ್ದಾಗ ಮಾತ್ರ ಸರ್ಕಾರಿ ಶಾಲಾ, ಕಾಲೇಜುಗಳ ಆಸ್ತಿಗಳ ಸಂರಕ್ಷಣೆ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಹೇಳಿದರು.

ನಗರದ ಹೊರವಲಯದ ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಬಳಸಿಕೊಳ್ಳಲಿ ಎಂಬ ಸದುದ್ದೇಶದಿಂದ ದಾನಿಗಳು ಜಮೀನು, ನಿವೇಶನ ಮುಂತಾದ ಆಸ್ತಿಗಳನ್ನು ದೇಶಾದ್ಯಂತ ನೀಡಿದ್ದಾರೆ. ಈ ಆಸ್ತಿಗಳಲ್ಲಿ ಕೆಲವನ್ನು ಬಲಾಢ್ಯರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೆ ಬೆಲೆಬಾಳುವ ಇಂತಹ ಆಸ್ತಿಗಳ ರಕ್ಷಣೆಗೆ ಶಿಕ್ಷಣ ಇಲಾಖೆ ಜೊತೆಗೆ ಸಮುದಾಯದ ಕಾಳಜಿಯೂ ಅಗತ್ಯವಾಗಿದೆ ಎಂದರು.

ಹಿರಿಯರಾದ ಐರಣಿ ಹನುಮಂತಪ್ಪ ಅವರ ಪ್ರಯತ್ನದ ಫಲವಾಗಿ ಗುತ್ತೂರು ಸರ್ಕಾರಿ ಪ್ರೌಢಶಾಲೆ ಹಾಗೂ ಹರಿಹರದ ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆಯ ಕೋಟಿಗಟ್ಟಲೆ ಬೆಲೆಬಾಳುವ ಜಮೀನುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹನುಮಂತಪ್ಪ ಇಂದಿನ ಯುವಜನತೆಗೆ ಆದರ್ಶವಾಗಿದ್ದಾರೆ ಎಂದರು.

ಮುಖ್ಯ ಶಿಕ್ಷಕ ರವಿನಾಯ್ಕ್ ಮಾತನಾಡಿ, ಇಳಿ ವಯಸ್ಸಿನಲ್ಲೂ ಹನುಮಂತಪ್ಪ ಯುವಕರಂತೆ ಸ್ವಂತ ವೆಚ್ಚದಲ್ಲೆ ಶಾಲೆ, ಸ್ಮಶಾನ, ದೇವಸ್ಥಾನಗಳ ಆಸ್ತಿಗಳ ವ್ಯಾಜ್ಯಕ್ಕೆ ಸಂಬಂಧಿಸಿ ದಾವಣಗೆರೆ, ಬೆಂಗಳೂರಿನ ವಕೀಲರನ್ನು ಭೇಟಿ ಮಾಡಿ ಅಗತ್ಯ ದಾಖಲೆ, ಮಾಹಿತಿಗಳನ್ನು ಒದಗಿಸುತ್ತಾರೆ ಎಂದು ಶ್ಲಾಘಿಸಿದರು.

ಐರಣಿ ಹನುಮಂತಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಓದಿಸುವ ಚೈತನ್ಯ ಇಲ್ಲದ ಬಡ ಕುಟುಂಬದವರ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ- ಕಾಲೇಜುಗಳೇ ಆಧಾರವಾಗಿವೆ. ಈ ಶಿಕ್ಷಣ ಸಂಸ್ಥೆಗಳ ಸಂರಕ್ಷಣೆಗೆ ಸಂಘ, ಸಂಸ್ಥೆಗಳು ಮುಂದಾಗಬೇಕು, ಆಗ ಅತಿಕ್ರಮಣ ಮಾಡುವವರು ಹಿಂದಕ್ಕೆ ಸರಿಯುತ್ತಾರೆಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಬಿ.ಜೆ., ಮಾಜಿ ಅಧ್ಯಕ್ಷ ಕರಿಬಸಪ್ಪ, ಶಿಕ್ಷಕರಾದ ಶ್ರೀಧರ್, ರವೀಂದ್ರ, ನಾಗರಾಜ್, ಮಂಜುನಾಥ್ ಆಡಿನ್, ಗಾಯನ ಕಲಾವಿದ ಅಣ್ಣಪ್ಪ ಅಜ್ಜೇರ್ ಹಾಗೂ ವಿದ್ಯಾರ್ಥಿಗಳಿದ್ದರು.

- - -

-12HRR. 01(14009):

ಗುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಐರಣಿ ಹನುಮಂತಪ್ಪ ಅವರನ್ನು ಗೌರಿವಿಸಲಾಯಿತು. ಬಿಇಒ ಡಿ.ದುರುಗಪ್ಪ, ಮುಖ್ಯ ಶಿಕ್ಷಕ ರವಿನಯ್ಕ್ ಇತರರಿದ್ದರು.