ಸಾರಾಂಶ
-ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆ ಕುರಿತು ಅರಿವು ಕಾರ್ಯಕ್ರಮ
------ಕನ್ನಡ ಪ್ರಭವಾರ್ತೆ ಮೊಳಕಾಲ್ಮುರು
ಸುರಕ್ಷಿತ ಮತ್ತು ಸಮತೋಲಿತ ಆಹಾರ ಸೇವನೆಯ ಮೂಲಕ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಬೇಕೆಂದು ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಹೇಳಿದರು.ತಾಲೂಕಿನ ದೇವಸಮುದ್ರ ಹೋಬಳಿಯ ವೆಂಕಟಾಪುರ ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಅಪೌಷ್ಟಿಕತೆ ನಿವಾರಣೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌಷ್ಟಿಕ ಆಹಾರ ಸೇವನೆಯಿಂದ ದೇಹದ ಸಮತೋಲನವನ್ನು ಕಾಪಾಡಲಿದೆ. ರಕ್ತ ಹೀನತೆ ಮತ್ತು ದೇಹಕ್ಕೆ ಎದುರಾಗುವಂತ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ. ಪ್ರತಿಯೊಬ್ಬರು ಸೊಪ್ಪು, ತರಕಾರಿ ಸೇರಿದಂತೆ ಅಗತ್ಯ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ಅಪೌಷ್ಟಿಕತೆಯನ್ನು ನಿವಾರಣೆ ಮಾಡಬೇಕೆಂದು ತಿಳಿಸಿದರು.ಅಪೌಷ್ಟಿಕತೆ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಅಗತ್ಯವಾಗಿದೆ. ಪೌಷ್ಟಿಕ ಆಹಾರ ಮಹತ್ವವನ್ನು ತಿಳಿಸಬೇಕು. ಅದರಲ್ಲೂ ಗರ್ಭಿಣಿ ಮಹಿಳೆಯರು ಅತಿ ಹೆಚ್ಚು ಜಾಗೃತರಾಗಬೇಕು.
ಅಪೌಷ್ಟಿಕತೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ನಾನಾ ಸಮಸ್ಯೆಗಳಿಗೆ ಕಾರಣವಾಗಲಿದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಂಡು ಆರೋಗ್ಯವಂತರಾಗಿ ಬಾಳಬೇಕು. ಅಪೌಷ್ಟಿಕತೆ ನಿವಾರಣೆಗೆ ಯೋಜನೆಯಿಂದ ಸಿಗುವಂತ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ವೈದ್ಯ ಚನ್ನಬಸಪ್ಪ ಮಾತನಾಡಿ, ಅಪೌಷ್ಟಿಕತೆಯಿಂದಾಗಿ ಅನೇಕ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಕ್ತ ಹೀನತೆ ಉಂಟಾಗಿ ಗರ್ಭಿಣಿ ಮಹಿಳೆಯರು ಮತ್ತಷ್ಟು ಸಮಸ್ಯೆಗೆ ಕಾರಣರಾಗಲಿದ್ದಾರೆ. ಹಾಗಾಗಿ, ಪ್ರತಿಯೊಬ್ಬರು ಸಮತೋಲನ ಆಹಾರ ಸೇವನೆ ಮಾಡಬೇಕೆಂದು ತಿಳಿಸಿದ ಅವರು ಬಿ.ಪಿ. ಶುಗರ್, ಥೈರಾಯ್ಡ್ , ಕ್ಯಾಲ್ಸಿಯಂ, ರಕ್ತ ಹೀನತೆ, ಹಿಮೋಗ್ಲೋಬಿನ್ ಕೊರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಹಿಳೆಯರಿಗೆ ಮಾಹಿತಿ ನೀಡಲಾಯಿತು.
ಇದೆ ವೇಳೆ 80 ಜನರಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಲಾಯಿತು.ಸಂದರ್ಭದಲ್ಲಿ ವೈದ್ಯ ಅಣ್ಣಪ್ಪ, ವಲಯ ಮೇಲ್ವಿಚಾರಕ ರಮೇಶ್, ಮುಖಂಡ ಗೋವಿಂದರೆಡ್ಡಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅಂಬಿಕಾ, ಸೇವಾ ಪ್ರತಿನಿಧಿ ರೇಖಾ, phsc ಅನಿತಾ ಸ್ಥಳೀಯ ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿ, ಮಮತಾ, ನಾಗರತ್ನ ಇದ್ದರು.