ಸಾರಾಂಶ
ಬರವಣಿಗೆಯು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಬರವಣಿಗೆಯು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿ- ಜನಾಂಗದವರಿಗೂ ಬರವಣಿಗೆಯ ಶಕ್ತಿ ಸಿಗಲಿದೆ. ಅಂತಹ ದೊಡ್ಡ ಶಕ್ತಿ ಬರವಣಿಗೆಗೆ ಇದೆ. ಜಗತ್ತಿನ ಎಲ್ಲಾ ಕ್ರಾಂತಿಗಳಿಗೂ ಬರವಣಿಗೆಯೇ ಪ್ರೇರಣೆ ಆಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ್ ತಿಳಿಸಿದರು.ನಗರದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಡಾ. ರಾಗೌ ಗುರುಗಳು ಮತ್ತು ಮಣಿ ಪ್ರಕಾಶನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಬಿ. ವೆಂಕಟೇಶ್ ಅವರ ‘ಹೊಸ ಪಲ್ಲವ’ ಹಾಗೂ ಪ್ರೊ.ಎಸ್.ಬಿ. ತೇಜ ಅವರ ‘ಬುವಿ ನೀಡಿದ ಅರಿವು’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬರವಣಿಗೆ ಎನ್ನುವುದು ವೈಯಕ್ತಿಕವಾಗಿ ಖುಷಿ ನೀಡುವುದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ಖುಷಿ ನೀಡಲಿದೆ ಎಂದರು.
ನನ್ನ ಬರವಣಿಗೆಯೂ ರಾಜಕೀಯ ಕ್ಷೇತ್ರದಲ್ಲಿ ನನಗೆ ವೇದಿಕೆ ಸೃಷ್ಟಿಸಿದ್ದು, ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಆ ಮೂಲಕ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಬಾಲ್ಯದಿಂದಲ್ಲೂ ರೂಢಿಸಿಕೊಂಡ ಓದುವ ಹವ್ಯಾಸ, ಪೋಷಕರು ನೀಡಿದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಈ ಮಟ್ಟಿಗೆ ಬರಲು ಕಾರಣವಾಗಿದೆ ಎಂದು ಅವರು ಹೇಳಿದರು.ವಿದ್ಯೆ ಎಂಬುದು ನಿಮ್ಮ ಕೈಯಲ್ಲಿದೆ. ಯಾವ ರೀತಿ ದುಡಿಸಿಕೊಳ್ಳುತ್ತಿರಿ, ಒಲಿಸಿಕೊಳ್ಳುತ್ತಿರಿ ಅದರಂತೆ ವಿದ್ಯೆಯು ಪರಿಶ್ರಮದಿಂದ ಒಲಿಯಲಿದೆ. ಮಕ್ಕಳಿಗೆ ವಿದ್ಯೆ ಕೊಟ್ಟರೆ, ಅದರ ಬಲದಿಂದ ಅವರು ಜೀವನ ರೂಪಿಸಿಕೊಳ್ಳುತ್ತಾರೆ. ಮಕ್ಕಳನ್ನು ಓದಿಗೆ ಹಚ್ಚಬೇಕು. ನನ್ನ ಮೂಲ ನಿಷ್ಠೆ, ಕೃತಜ್ಞತೆ ಬರವಣಿಗೆ ಮೇಲಿದೆ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು ಎಂದರು.
ಕೃತಿಗಳ ಕುರಿತು ಸಾಹಿತಿ ಪ್ರೊ.ಸಿ. ನಾಗಣ್ಣ ಮಾತನಾಡಿದರು. ಬಾದಾಮಿ ಸಿದ್ದರಾಮೇಶ್ವರ ಮಠದ ಶ್ರೀ ಮಂಜುನಾಥ ಸ್ವಾಮೀಜಿ, ಹಿರಿಯ ಸಾಹಿತಿ ಡಾ. ರಾಗೌ, ವಿದ್ಯಾಶ್ರಮ ಪದವಿ ಕಾಲೇಜು ಪ್ರಾಂಶುಪಾಲೆ ಎ.ಎಂ. ಖುಷಿ, ಹಿರಿಯ ಪ್ರಾಧ್ಯಾಪಕ ಡಾ.ಬಿ.ಎಸ್. ಸುಬ್ರಹ್ಮಣ್ಯ, ಮಣಿ ಪ್ರಕಾಶನದ ಮಂಜೇಗೌಡ, ಲೇಖಕರಾದ ಪ್ರೊ.ಕೆ.ಬಿ. ವೆಂಕಟೇಶ್, ಪ್ರೊ.ಎಸ್.ಬಿ. ತೇಜ ಇದ್ದರು.