ಸಾರಾಂಶ
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಎಲ್ಲಾ ಭಾರತೀಯರನ್ನು ಒಂದೇ ರೀತಿ ಕಾಣುವ ಪಕ್ಷ ಭಾರತೀಯ ಜನತಾ ಪಕ್ಷ ಎಂದು ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ಪಟ್ಟಿದ್ದಾರೆ.ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆಯಲ್ಲಿ ನಡೆದ ಎಸ್ ಸಿ ಮೋರ್ಚ ಘಟಕ ರಚನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಭಾರತೀಯ ಜನತಾ ಪಕ್ಷವನ್ನು ಬ್ರಾಹ್ಮಣರ ಪಕ್ಷ ಎಂದು ಆರೋಪಿಸುತ್ತಿದ್ದಾರೆ. ಆದರೆ ಬಿಜೆಪಿ ಅವಧಿಯಲ್ಲಿ ಡಾ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದರು, ಅಲ್ಲದೆ ದ್ರೌಪದಿ ಮುರ್ಮು, ರಾಮನಾಥ್ ಕೋವಿಂದ್ ಎಸ್ ಟಿ ಯಾಗಿದ್ದರು ಅವರನ್ನೂ ರಾಷ್ಟ್ರಪತಿ ಮಾಡಿರುವುದು ಬಿಜೆಪಿ ಪಕ್ಷ ಮಾತ್ರವಾಗಿದ್ದು , ಕಾಂಗ್ರೆಸ್ ಸರ್ಕಾರವು ದಲಿತರನ್ನು ಓಟ್ ಬ್ಯಾಂಕ್ ಗಾಗಿ ಬಳಸುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರವು ಅಭಿವೃದ್ಧಿಯನ್ನು ಮಾಡದೆ ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡುವತ್ತ ಗಮನ ಹರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ಕೆ ಲೋಕೇಶ್ ಮಾತನಾಡಿ, ಡಾ ಅಂಬೇಡ್ಕರ್ ರವರ ಪ್ರಯತ್ನದಿಂದಲೇ ದಲಿತರು ಉದ್ಯೋಗ, ರಾಜಕಾರಣ, ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಗಿದೆ. ರಾಜಕೀಯವಾಗಿ ದಲಿತರ ಮತವನ್ನು ಪಡೆಯಲು ಅಂಬೇಡ್ಕರ್ ಹೆಸರಿನಲ್ಲಿ ಎಲ್ಲೆಡೆ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ರವರಿಗೆ ಅವಮಾನ, ಅನ್ಯಾಯ ಮಾಡಿರುವುದನ್ನು ಮರಮಾಚಿ ಇಂದು ಅಂಬೇಡ್ಕರ್ ಹೆಸರಿನಲ್ಲಿ ಮತ ಯಾಚಿಸುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಅಲ್ಲದೆ ರೈತ ನಾಯಕ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರಿಗೆ ಅಧಿಕಾರ ತಪ್ಪಿಸಿದ ಕಾಂಗ್ರೆಸ್ ಸರ್ಕಾರವು ದೇಶಕ್ಕಾಗಿ ಬದುಕಿದ ಮಹಾತ್ಮರನ್ನು ಕಡೆಗಾಣಿಸಿದ್ದಾರೆ. ಆದರೆ ಮಹಾನ್ ವ್ಯಕ್ತಿಗಳನ್ನು ಜಗತ್ತಿಗೆ ಗುರುತಿಸುವ ಏಕೈಕ ಪಕ್ಷ ಬಿಜೆಪಿ ಎಂದರು. ಭಾರತೀಯ ಜನತಾ ಪಕ್ಷದಲ್ಲಿ ಒಂದೇ ಜಾತಿ, ಒಂದೇ ಧರ್ಮ ಅದು ಬಿಜೆಪಿ ಪಕ್ಷ ಎಂಬೂದಾಗಿದೆ ಎಂದರು.ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ರವಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಅವ್ಯವಹಾರದಿಂದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಯವರನ್ನು ಮತ ಬ್ಯಾಂಕ್ ಗೆ ಬಳಸುತ್ತಾರೆ ಆದರೆ ಪರಿಶಿಷ್ಟ ಜಾತಿಯವರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ನಡುವೆ ಪರಿಶಿಷ್ಟ ಜಾತಿಯ ನಿಗಮಗಳನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಶಕ್ತಿ ಕೇಂದ್ರ ಪ್ರಮುಖ್ ಬೆಳ್ಳಿಯಪ್ಪ, ಗ್ರಾ.ಪಂ ಸದಸ್ಯರಾದ ದಮಯಂತಿ, ಸುಜಾತ ಸೇರಿದಂತೆ ಇನ್ನಿತರರು ಇದ್ದರು.;Resize=(128,128))