ಕನ್ನಡಪ್ರಭ ವಾರ್ತೆ ಮುಧೋಳ

ಪದವಿ ಶಿಕ್ಷಣ ಪಡೆದುಕೊಳ್ಳುತ್ತಿರುವ ಮಾಧ್ಯಮದ ವಿದ್ಯಾರ್ಥಿಗಳು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಸರು, ವೇತನ, ಗೌರವ ಹಾಗೂ ಉನ್ನತ ಸ್ಥಾನಮಾನ ಪಡೆಯಲು ತಮ್ಮಲ್ಲಿರುವ ವಿಶಿಷ್ಟ ಬರವಣಿಗೆ ಕೌಶಲ್ಯ, ಸೃಜನಶೀಲತೆ ಮತ್ತು ಪ್ರಾಯೋಗಿಕ ಜ್ಞಾನವನ್ನು ಅಭಿವೃದ್ದಿಪಡಿಸಿಕೊಳ್ಳಬೇಕು ಹಾಗೂ ವೃತ್ತಿ ನೈಪುಣ್ಯತೆಯನ್ನು ಹೊಂದಬೇಕು ಎಂದು ಎಸ್.ಆರ್.ಕಂಠಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಮ್.ಆರ್.ಜರಕುಂಟಿ ಸಲಹೆ ನೀಡಿದರು.

ಬಾಗಲಕೋಟ ಬಿವಿವಿ ಸಂಘದ ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಿಂದ ಗುರುವಾರ ಕಾಲೇಜಿನ ಸೆಮಿನಾರ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಕಾರ್ಯಕ್ರಮ-2026ರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಹಾ ವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳಲು ನಮ್ಮ ಸಂಘವು ಕಂಪ್ಯೂಟರ್ ಲ್ಯಾಬ್ ಮತ್ತು ಸ್ಟುಡಿಯೋ ಒದಗಿಸಿದೆ. ವಿದ್ಯಾರ್ಥಿಗಳು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಸ್ಥಾನವನ್ನು ಪಡೆಯಬೇಕು. ಅಲ್ಲದೇ, ಕುಟುಂಬಕ್ಕೆ, ಕಾಲೇಜಿಗೆ ಮತ್ತು ಸಂಸ್ಥೆಗೆ ಒಳ್ಳೆಯ ಹೆಸರು ತರುವಂತೆ ಹೇಳಿದರು.

ಉದ್ಯಮಿ ಚಂದ್ರಶೇಖರ ಪಮ್ಮಾರ ಮಾತನಾಡಿ, ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ವಿಶಿಷ್ಟ ಬರವಣಿಗೆ ಕೌಶಲ್ಯವನ್ನು ಬಳಸಿಕೊಂಡು ಒಳ್ಳೆಯ ಲೇಖನಗಳನ್ನು ಬರೆಯಬೇಕು. ತಮ್ಮಲ್ಲಿರುವ ಅಘಾದ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳಲು ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನದ ಜೊತೆಗೆ ವಿಡಿಯೋ ಎಡಿಟಿಂಗ್ ಮಾಡುವದನ್ನು ಕಲಿತರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭಾಷಾ ಜ್ಞಾನದ ಅವಶ್ಯಕತೆ ಇದ್ದು ಕನಿಷ್ಠ ನಾಲ್ಕೈದು ಭಾಷೆಯಾದರೂ ಬರಬೇಕು. ನಾಗರಿಕ ಪತ್ರಿಕೋದ್ಯಮದಲ್ಲಿ ಪ್ರತಿಯೊಬ್ಬರೂ ಪತ್ರಕರ್ತರಾಗಿದ್ದಾರೆ. ಆದರೆ, ಅವರ್‍ಯಾರು ವೃತ್ತಿ ಪತ್ರಕರ್ತರಲ್ಲ, ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಹೆಸರು ಮತ್ತು ದುಡ್ಡು ಮಾಡಿಕೊಳ್ಳಲು ಉತ್ತಮ ಅವಕಾಶಗಳಿವೆ ಎಂದರು.

ಕಾಲೇಜಿನ ಇಂಗ್ಲೀಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಮ್.ಎಚ್.ಜೋಗಿ ಮಾತನಾಡಿ, ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಆದರೆ ವೃತ್ತಿ ಕೌಶಲ್ಯಗಳನ್ನು ವಿಸ್ತಾರಗೊಳ್ಳುವಲ್ಲಿ ಶ್ರಮವಹಿಸಬೇಕು. ತಮಗೆ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.


ದಾವಣಗೆರೆ ವಿವಿಯ ಸಂಶೋಧನಾರ್ಥಿ ಶಿವಾನಂದ ನೇಗಿನಾಳ ಮಾತನಾಡಿ, ಮಾಧ್ಯಮ ರಂಗ ವಿಶಾಲವಾಗಿದೆ. ಹತ್ತಾರು ಅವಕಾಶಗಳಿದ್ದು ತಮ್ಮ ಆಸಕ್ತಿ, ಅಭಿರುಚಿಗೆ ತಕ್ಕಂತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾಲೇಜಿನ ಐ.ಕ್ಯೂ.ಎ.ಸಿ ಸಂಯೋಜಕ ಪ್ರೊ.ಅಜಯ ಕಡೂರ ವೇದಿಕೆ ಮೇಲಿದ್ದರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಪ್ರೀತಿ ಬಾವಲತ್ತಿ ಮತ್ತು ಸ್ನೇಹಾ ಕರಡಿ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಮಹಾದೇವಿ ಕಾಳವ್ವಗೋಳ, ಶೋಭಾ ಸತ್ತಿಗೇರಿ, ಅನ್ನಪೂರ್ಣ ಅವರಾಧಿ ಮತ್ತು ಬಾಬು ಭಜಂತ್ರಿ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಮಹಾಂತೇಶ ಹಿರೇಮಠ ನಿರೂಪಿಸಿದರು, ವಿದ್ಯಾರ್ಥಿನಿ ಸ್ನೇಹಾ ಕರಡಿ ವಂದಿಸಿದರು.