ಬ್ಯಾಡಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕೃಷಿ ನೀತಿ ವಿರೋಧಿಸಿ ಕೃಷಿ ಪರಿಕರ (ಔಷಧಿ, ಗೊಬ್ಬರ ಬೀಜ) ವಿತರಕರ ಸಂಘದ ತಾಲೂಕು ಘಟಕದ ಸದಸ್ಯರು ಏ. 27 ರಂದು ಔಷಧಿ, ಗೊಬ್ಬರ ಬೀಜ ಮಾರಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ. ರಾಷ್ಟ್ರಮಟ್ಟದ ಕೃಷಿಪರಿಕರ ಮಾರಾಟಗಾರರ ಸಂಘದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸುವ ಕುರಿತು ತಾಲೂಕಿನಲ್ಲಿಯೂ ಕೃಷಿ ಪರಿಕರ ಮಾರಾಟ ಸಂಘವು ಪ್ರತಿಭಟನೆ ಹಮ್ಮಿಕೊಂಡಿದ್ದು, ಸ್ಥಳೀಯ ತಹಸೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದರು.
ಡಿಎಪಿ ಜೊತೆಗೆ ಒತ್ತಾಯಪೂರ್ವಕವಾಗಿ ಇನ್ನಿತರ ಉತ್ಪಾದನೆಗಳನ್ನು ಲಿಂಕ್ ಮಾಡಿ ಮಾರಾಟ ಮಾಡುತ್ತಿದ್ದು ಇದು ಸಾಧ್ಯವಾಗದ ಇದಕ್ಕೊಪ್ಪದ ರೈತರು ವಿತರಕರ ಜೊತೆಗೆ ಸಂಘರ್ಷಕ್ಕಿಳಿಯುತ್ತಿದ್ದಾರೆ, ಕಳಪೆ ಬೀಜ ಮಾರಾಟ ಮಾಡಿದಲ್ಲಿ ನೇರವಾಗಿ ಮಾರಾಟ ಹಕ್ಕು ಪಡೆದಿರುವ ಕಂಪನಿಗಳ ಬದಲಾಗಿ ವಿತರಕರ ವಿರುದ್ಧ ಮೊಕದ್ದಮೆ ಹೂಡಲಾಗುತ್ತಿದ್ದು, ಇದರಿಂದ ಬೀಜಗಳ ಮಾರಾಟವೇ ದುಸ್ತರವಾಗಿದೆ. ವಿತರಕರಿಗೆ ಗೋಡೌನ್ ಡಿಲೆವರಿ ಕೊಡದೇ ಸ್ಪಾಟ್ ಡಿಲೆವರಿ ನೀಡಲಾಗುತ್ತಿದ್ದು, ಇದರಿಂದ ಸುಮಾರು 45ರಿಂದ 75 ರು. ಗಳವರೆಗೆ ಪ್ರತಿ ಚೀಲಕ್ಕೆ ಹೆಚ್ಚಿನ ದರಕ್ಕೆ ಮಾರಾಟ ಮಾಡಬೇಕಾಗುತ್ತದೆ. ಇಲ್ಲಿಯೂ ಸಹ ರೈತರಿಂದ ತಕರಾರು ಎದುರಿಸಬೇಕಾಗುತ್ತಿದೆ. ಅಷ್ಟಕ್ಕೂ ಗೊಬ್ಬರ ಮಾರಾಟ ಮಾಡಿದ ಡೀಲರ್ಗಳಿಗೆ ಶೇ. 8ರಷ್ಟು ಲಾಭಾಂಶವನ್ನು ಸರಿದೂಗಿಸುತ್ತಿಲ್ಲ, ಇದರ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲವೆಂದು ಆರೋಪಿಸಿದರು.ದಾಳಿ ಬದಲು ತಪಾಸಣೆ ಎಂಬ ಪದ ಬಳಕೆಗೆ ಆಗ್ರಹ: ಅಧಿಕಾರಿಗಳು ವಿತರಕರ ಅಂಗಡಿಗಳನ್ನು ಪರಿಶೀಲಿಸಿದಾಗ ದಾಳಿ ಎಂಬ ಪದ ಬಳಕೆ ಮಾಡುವ ಮೂಲಕ ನಮ್ಮನ್ನು ಸಮಾಜದಲ್ಲಿ ತಪ್ಪಿತಸ್ಥರು ಎಂಬ ಮನೋಭಾವನೆ ಮೂಡುವಂತೆ ಮಾಡುತ್ತಾರೆ. ಇದರ ಬದಲಾಗಿ ತಪಾಸಣೆ ಎಂಬ ಪದವನ್ನು ಬಳಕೆ ಮಾಡುವಂತೆ ಆಗ್ರಹಿಸಿದ್ದಾರಲ್ಲದೇ ಯಾವುದೇ ಕಾರಣಕ್ಕೂ ತಪಾಸಣೆ ಮಾಡಿದ ಅಂಗಡಿಗಳನ್ನು ಮಾಧ್ಯ ಮಗಳಿಗೆ ನೀಡಬಾರದು, ಅಧಿಕಾರಿಗಳು ಸ್ಯಾಂಪಲ್ ಪಡೆಯುವ ನೆಪದಲ್ಲಿ ದೊಡ್ಡಮಟ್ಟದ ಬೀಜಗಳನ್ನು ಕೊಂಡೊಯ್ಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಪಡೆದಂತಹ ಸ್ಯಾಂಪಲ್ ಬೀಜದ ಮೊತ್ತವನ್ನು ವಿತರಕರಿಗೆ ಅಧಿಕಾರಿಗಳು ಭರಿಸುವಂತಾಗಬೇಕು. ಎಫ್ಐಡಿ ಮೇಲೆ ಮಾರಾಟ ಮಾಡುವುದನ್ನು ಹಿಂಗಾರಿಗೂ ವಿಸ್ತರಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಶಶಿಧರ ದೊಡ್ಮನಿ, ರಮೇಶ ಮಲ್ಲಾಡದ, ಯಲ್ಲಪ್ಪ ಕಾಕೋಳ, ಉಮೇಶ ಕುಲಕರ್ಣಿ, ಶಂಭು ಬ್ಯಾಡಗಿ, ಹನುಮಂತ ದೇಸೂರ ಹನುಮಂತ ಗುಂಡೇನಹಳ್ಳಿ ಸೇರಿದಂತೆ ಇನ್ನಿತರರಿದ್ದರು.