ರಾಜ್ಯದ 19 ಜಿಲ್ಲೆಯ ವಿದ್ಯುತ್‌ ಶಕ್ತಿ ಖಾಸಗಿಗೊಳಿಸಲು ವಿರೋಧ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ದಿ ಟಾಟಾ ಪವರ್‌ ಕಂಪನಿ ಸಲ್ಲಿಸಿರುವ ಅರ್ಜಿಯನ್ನುತಿರಸ್ಕರಿಸುವಂತೆ ಜೂ.18ರಂದು ನಗರದಲ್ಲಿ ರಾಜ್ಯರೈತ ಸಂಘದಿಂದ ಪ್ರತಿಭಟನೆ ನಡೆಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಎ.ಎಂ. ಮಹೇಶ್‌ ಪ್ರಭು ತಿಳಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜೂ.18ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಸೆಸ್ಕಾಂ ಎಇಇಗೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.ಬೆಸ್ಕಾಂ, ಸೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ ಒಟ್ಟು 19 ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಸಮಾನಾಂತರವಾಗಿ ಖಾಸಗಿ ಕಂಪನಿಗೆ ಪರವಾನಗಿ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರು.ರಾಜ್ಯದ ವಿವಿಧ ಸಾರ್ವಜನಿಕ - ವಿದ್ಯುತ್ ವಿತರಣಾ ಕಂಪನಿಯ 19 ಕಂದಾಯ ಜಿಲ್ಲೆಗಳಲ್ಲಿ - ವಿದ್ಯುತ್ ವಿತರಣಾ ಪರವಾನಿಗಿ ಕೋರಿ ದಿ ಟಾಟಾ ಪವರ್‌ - ಕಂಪನಿ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ಪ್ರತಿಯೊಬ್ಬರು ತಿರಸ್ಕಾರ ಮಾಡುವುದರ ಮೂಲಕ ವಿದ್ಯುತ್‌ ಖಾಸಗೀಕರಣವನ್ನು ತಪ್ಪಿಸಬೇಕು ಎಂದರು.ಕಂಪನಿಯ ಪರವಾನಗಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜೂ.23ರ ಒಳಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಾಗಿ ಪ್ರತಿಯೊಬ್ಬರು ಅಂದು ರೈತ ಸಂಘ ನೀಡುವ ಅರ್ಜಿಯನ್ನು ತುಂಬಿ ಕೆಇಬಿ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿದರು.ವಿದ್ಯುತ್ ಸೇವೆಯನ್ನು ಖಾಸಗೀಕರಣ ಮಾಡಿದರೆ ಜನರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಲ್ಲದೇ ಕೃಷಿ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದೆ. ಜನರು ಆರ್ಥಿಕವಾಗಿ ಕುಗ್ಗಲಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಿಂದ ವಿದ್ಯುತ್‌ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕರ್‌, ಪದಾಧಿಕಾರಿಗಳಾದ ಮಹೇಶ್‌ ಕುಮಾರ್‌, ಶಿವಣ್ಣ, ಜಯಣ್ಣ, ಪುಟ್ಟೇಗೌಡ, ಕುಮಾರ್‌ ಇದ್ದರು.---16ಸಿಎಚ್‌ಎನ್2ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್‌ಪ್ರಭು ಮಾತನಾಡಿದರು.