ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಳದಲ್ಲಿ ಶುಕ್ರವಾರ ರಾತ್ರಿ ಬ್ರಹ್ಮರಥೋತ್ಸವವು ಕಿಕ್ಕಿರಿದು ಸೇರಿದ್ದ ಭಕ್ತಸ್ತೋಮದ ಮಧ್ಯೆ ಶ್ರದ್ಧಾ ಭಕ್ತಿಯೊಂದಿಗೆ ವೈಭವಯುತವಾಗಿ ನಡೆಯಿತು. ಈ ವೇಳೆ ನಡೆದ ‘ಪುತ್ತೂರು ಬೆಡಿ’ಖ್ಯಾತಿಯ ಸುಡುಮದ್ದು ಪ್ರದರ್ಶನ ಚಿತ್ತಾಕರ್ಷಣೀಯವಾಗಿತ್ತು.

ಪುತ್ತೂರು ಬೆಡಿ ಮತ್ತು ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಭಕ್ತ ಸಾಗರ ದೇವಳದ ಎದುರಿನ ವಿಶಾಲವಾದ ದೇವರಮಾರು ಗದ್ದೆಗೆ ಹರಿದು ಬರಲಾರಂಭಿಸಿದ್ದು, ಸುಡುಮದ್ದು ಪ್ರದರ್ಶನ ಮತ್ತು ಬ್ರಹ್ಮರಥೋತ್ಸವದ ವೇಳೆ ದೇವಳದ ಗದ್ದೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಕಿಕ್ಕಿರಿದು ನೆರೆದಿದ್ದರು.ರಾತ್ರಿ ಉತ್ಸವ ಬಲಿ ನಡೆಯಿತು. ಹೊರಾಂಗಣದಲ್ಲಿ ಉತ್ಸವ ಬಲಿ ನಡೆದ ಬಳಿಕ ದೇವಳದ ಎದುರಿನ ಮುಖ್ಯ ದ್ವಾರದ ಮೂಲಕ ದೇವರ ಹೊತ್ತ ಬ್ರಹ್ಮವಾಹಕರು ದೇವಳದ ಎದುರಿನ ರಥಬೀದಿಯಲ್ಲಿ ವಿದ್ಯುತ್ ದೀಪ, ಹೂವಿನಿಂದ ಭವ್ಯವಾಗಿ ಅಲಂಕೃತಗೊಂಡ ಬ್ರಹ್ಮರಥದ ಬಳಿಗೆ ತೆರಳಿದರು. ಅಲ್ಲಿ ಪ್ರಾರ್ಥನೆ, ಮಾಮೂಲಿನಂತೆ ದೈವದಿಂದ ದೇವರ ಭೇಟಿ, ದೈವದ ಅಭಯ ನುಡಿಯ ಬಳಿಕ ದೇವರು ರಥಾರೂಢರಾದರು. ಈ ವೇಳೆ ಕಿಕ್ಕಿರಿದು ರೆದಿದ್ದ ಭಕ್ತರು ಆರಾಧ್ಯ ದೇವರಾದ ಮಹಾಲಿಂಗೇಶ್ವರ ನಾಮೋದ್ಘೋಷ ಮಾಡಿದ್ದು, ಭಕ್ತರ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. ರಥದಲ್ಲಿ ದೇವರಿಗೆ ಪೂಜೆ ನಡೆದ ಬಳಿಕ ಪುತ್ತೂರು ಬೆಡಿ ಆರಂಭಗೊಂಡಿತು.ಸೇವಾ ರೂಪದಲ್ಲಿ ಬೆಡಿ....ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದಲೇ ಟೆಂಟರ್ ಕರೆದು ಗುತ್ತಿಗೆದಾರರಿಂದ ಸುಡುಮದ್ದು ಪ್ರದರ್ಶನದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಭಕ್ತರೇ ಸೇವಾ ರೂಪದಲ್ಲಿ ಸಿಡಿಮದ್ದು ಪ್ರದರ್ಶನದ ವ್ಯವಸ್ಥೆ ಮಾಡಿದ್ದರು. ಈ ಬಾರಿಯೂ ಭಕ್ತರಿಂದಲೇ ಸೇವಾ ರೂಪದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ವ್ಯವಸ್ಥೆ ಮಾಡಲಾಗಿದ್ದು, ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಹಲವು ಬಗೆಯ ಸುಡುಮದ್ದು ಪ್ರದರ್ಶನ ಚಿತ್ತಾಕರ್ಷಣೀಯವಾಗಿತ್ತು. ಭಾರೀ ಸದ್ದಿನೊಂದಿಗೆ ಸಿಡಿದ ಸುಡುಮದ್ದು ಪುತ್ತೂರಿನ ಬೆಡಿಯ ಖ್ಯಾತಿಯನ್ನು ಹತ್ತೂರುಗಳಿಗೆ ನೆನಪಿಸಿತು. ಸುಡುಮದ್ದು ಪ್ರದರ್ಶನದ ಬಳಿಕ ದೇವಳದ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು.