ಅಧಿಕಾರಿಗೆ ಲೋಕೋಪಯೋಗಿ ಸಚಿವ ಜಾರಕಿಹೊಳಿ ನಿರ್ದೇಶನ

ಕನ್ನಡಪ್ರಭ ವಾರ್ತೆ ಮೂಡಿಗೆರೆ

ಮೂಡಿಗೆರೆ-ದಂಬದಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಈಗಾಗಲೇ ₹413 ಕೋಟಿ ಬಿಡುಗಡೆಯಾಗಿದ್ದು, ತ್ವರಿತ ಮತ್ತು ಗುಣಮಟ್ಟದ ಕಾಮಗಾರಿ ನಡೆಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಲೋಕೋಪಯೋಗಿ ಇಲಾಖೆ ಸಚಿವ ಜಾರಕಿಹೊಳಿ ನಿರ್ದೇಶಿಸಿದ್ದಾರೆ.

ಶುಕ್ರವಾರ ಮೂಡಿಗೆರೆಗೆ ಆಗಮಿಸಿದ ಸಚಿವರು, ಮೂಡಿಗೆರೆ- ಚಾರ್ಮಾಡಿಘಾಟ್, ಉಜಿರೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು. ಮೂಡಿಗೆರೆ- ದಂಬದಹಳ್ಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಬಗ್ಗೆ ವಿವರ ನೀಡುವಂತೆ ಸೂಚಿಸಿದರು. ರಸ್ತೆ ಪರಿಶೀಲನೆ ವೇಳೆ ನೀಲನಕ್ಷೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆಸಿದರು. ಜತೆಗೆ, ಇಲಾಖೆಯಿಂದ ಕೈಗೊಂಡ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಗಳ ಶಾಸಕರಿಗೆ ಒಂದು ಕ್ಷೇತ್ರಕ್ಕೆ ₹25 ಕೋಟಿ ಯಂತೆ ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆಗೊಳಿಸಿದ್ದು ಆ ಕೆಲಸಗಳು ಪ್ರಗತಿಯಲ್ಲಿವೆ ಎಂದರು.


ಬಹುಜನರ ಬೇಡಿಕೆಯಾದ ಶಿಶಿಲಾ- ಬೈರಾಪುರ ರಸ್ತೆಯ ಬಗ್ಗೆ ಬೆಳೆಗಾರರು ಸಚಿವರ ಗಮನಕ್ಕೆತಂದರು. ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು. ಸಚಿವರು ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್ .ಜೈರಾಂ ಮಾನವ ಮತ್ತು ಆನೆಗಳ ಸಂಘರ್ಷದ ಬಗ್ಗೆ ಶಾಶ್ವತ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು. ಅದಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಈ ಬಗ್ಗೆ ಅರಣ್ಯ ಸಚಿವರನ್ನು ಭೇಟಿ ಮಾಡಿ ದಿನಾಂಕ ನಿಗದಿ ಪಡಿಸಿ ಬೆಳೆಗಾರರೊಂದಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸುವುದಕ್ಕೆ ವ್ಯವಸ್ಥೆ ಮಾಡಲಾ ಗುವುದು ಎಂದು ತಿಳಿಸಿದರು.

ಈ ವೇಳೆ ತಹಸೀಲ್ದಾರ್ ಅಶ್ವಿನಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಕಿರಿಯ ಅಭಿಯಂತರ ಬಿ.ಟಿ.ಚನ್ನಕೇಶವ ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮುಖಂಡರಾದ ಜಿ.ಎಚ್. ಹಾಲಪ್ಪಗೌಡ, ಸುರೇಂದ್ರ,ಎಂ.ಎಸ್.ಅನಂತ್, ಟಿ.ಎಂಸುಬ್ರಹ್ಮಣ್ಯ ಟಿ., ಸಂತೋಷ್ ಮುಗ್ರಹಳ್ಲಿ, ಬೆಟ್ಟಗೆರೆ ಸಂತೋಷ್, ಉಪಸ್ಥಿತರಿದ್ದರು.---ಬಾಕ್ಸ್‌---

ಮಲೆನಾಡಿಗೆ ಹೆಚ್ಚಿನ ಅನುದಾನಕ್ಕೆ ಮನವಿ

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದ ರಸ್ತೆಗಳು ಹಾಳಾಗಿದ್ದು, ದುರಸ್ತಿ ಹಾಗೂ ಅಭಿವೃದ್ಧಿ ಪಡಿಸುವುದಕ್ಕೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಮನವಿ ಮಾಡಿದರು.

--- ಬಾಕ್ಸ್‌--

ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ

ಮೂಡಿಗೆರೆ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಾಗುವ ರಸ್ತೆಯಲ್ಲಿರುವ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಸ್ಕೂಟರ್, ಕ್ಯಾಮರಾ, ಕುರ್ಚಿ, ಕಂಪ್ಯೂಟರ್ ಸೇರಿದಂತೆ ಹಲವು ಪರಿಕರಕ ಮತ್ತು ಅಂದಿನ ಕಾಲದಲ್ಲಿ ಬಳಸುತ್ತಿದ್ದ ಅಡುಗೆ ಕೃಷಿ ಉಪಕರಣಗಳನ್ನು ವೀಕ್ಷಿಸಿ ಮೂಕ ವಿಸ್ಮಿತರಾದರು.