ಸಾರಾಂಶ
ಮುಂದಿನ ಬಾರಿಯೂ ನೀವೇ ಮುಖ್ಯಮಂತ್ರಿ ಎಂದು ಕೂಗಿದ ಅಭಿಮಾನಿಗೆ, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನೋಡೋಣ, ನಿಮ್ಮ ಆಸೆ, ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಚಾಮರಾಜನಗರ : ಮುಂದಿನ ಬಾರಿಯೂ ನೀವೇ ಮುಖ್ಯಮಂತ್ರಿ ಎಂದು ಕೂಗಿದ ಅಭಿಮಾನಿಗೆ, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನೋಡೋಣ, ನಿಮ್ಮ ಆಸೆ, ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಲಕ್ಷ್ಮಮ್ಮ ಸೊಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶನಿವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ನೀವು ಮೂರನೇ ಬಾರಿ ಮುಖ್ಯಮಂತ್ರಿಯಾಗುತ್ತೀರಿ ಎಂದು ಅಭಿಮಾನಿಯೊಬ್ಬರು ಕೂಗಿದಾಗ ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಸಿಎಂ ತಿಳಿಸಿದರು. ಜನರ ಅಭಿಮಾನ ಬಹಳ ಮುಖ್ಯ. ಜನರ ಪ್ರೀತಿ ಅಭಿಮಾನವನ್ನು ಗಳಿಸದೇ ಹೋದರೆ ರಾಜಕೀಯದಲ್ಲಿ ಉಳಲಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಭಾಗದಲ್ಲಿ ರಾಚಯ್ಯನವರು ಬಹಳ ಎತ್ತರದ ರಾಜಕಾರಣಿ. ನಾನು ರಾಜಕೀಯವಾಗಿ ಬೆಳೆಯಲು ಅವರ ಸಹಾಯವೂ ಇದೆ ಎನ್ನುವುದನ್ನು ಮೆರೆಯಲು ಸಾಧ್ಯವಿಲ್ಲ ಎಂದು ಬಿ.ರಾಚಯ್ಯನವರನ್ನು ಸ್ಮರಿಸಿದರು.
ಮುಖ್ಯಮಂತ್ರಿ ಸ್ಥಾನ ಇನ್ನೂ ಗಟ್ಟಿಯಾಯಿತು: ಮೊದಲು ಮೈಸೂರು ಜಿಲ್ಲೆಗೆ ಸೇರಿದ್ದ ಚಾಮರಾಜನಗರವನ್ನು ದಿ.ಬಿ.ರಾಚಯ್ಯನವರ ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಎಂಬ ಜಿಲ್ಲೆಗಳಾದವು. ನಾನು ಡಿಸಿಎಂ ಆಗಿದ್ದ ಸಂದರ್ಭದಲ್ಲಿ ಹೊಸ ಜಿಲ್ಲೆಯನ್ನು ಘೋಷಣೆ ಮಾಡಿದೆವು.
ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಕೆಲವು ಶಾಸಕರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ಅವರು ಜಿಲ್ಲೆಗೆ ಭೇಟಿ ನೀಡದಂತೆ ಮಾಡಿದ್ದರು. ಚಾಮರಾಜನಗರಕ್ಕೆ ಭೇಟಿ ನೀಡಿದರೇ ಸಿಎಂ ಅಧಿಕಾರ ಕಳೆದುಕೊಳುತ್ತಾರೆ ಎಂಬ ಕಳಂಕ ಜಿಲ್ಲೆಯ ಮೇಲೆ ಹೊರಿಸಲಾಗಿದೆ. ನಾನು ರಾಚಯ್ಯನವರು ಇಲ್ಲಿಗೆ ಬಂದು ಹೊಸ ಜಿಲ್ಲೆಯನ್ನು ಉದ್ಘಾಟನೆ ಮಾಡಿದೆವು. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ. ರಾಚಯ್ಯ ಹಾಗೂ ನಾನು ಮೌಢ್ಯವನ್ನು ನಂಬುತ್ತಿರಲಿಲ್ಲವಾದ್ದರಿಂದ ಇಲ್ಲಿಗೆ ಬಂದೇ ಘೋಷಣೆ ಮಾಡಿದೆವು ಎಂದರು.
ಜೆ.ಎಚ್.ಪಟೇಲರು ಹಾಗೂ ವಾಟಾಳ್ ನಾಗರಾಜ್, ಮಹದೇವಪ್ರಸಾದ್ ಅವರು ಮಹದೇಶ್ವರಬೆಟ್ಟಕ್ಕೆ ತೆರಳಿ ಘೋಷಣೆ ಮಾಡಿದರು. ಅದಾದ ನಂತರ 20 ಸಾರಿಯಾದರೂ ಚಾಮರಾಜನಗರಕ್ಕೆ ನಾನು ಆಗಮಿಸಿದ್ದೇನೆ. ಮುಖ್ಯಮಂತ್ರಿ ಸ್ಥಾನ ಹೋಗುವ ಬದಲು ಅದು ಇನ್ನೂ ಗಟ್ಟಿಯಾಯಿತು ಎಂದರು.
ಸುಸಜ್ಜಿತ ಶಾಲೆಗೆ ಸಿಎಂ ಮೆಚ್ಚುಗೆವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ. ಜಾತಿಯಿಂದ ಯಾರೂ ಪ್ರತಿಭಾವಂತರಾಗುವುದಿಲ್ಲ. ಎಲ್ಲರಲ್ಲಿಯೂ ಪ್ರತಿಭೆಯಿದ್ದು ಅದು ಹೊರಬರಲು ಅವಕಾಶಗಳು ಸಿಗಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
₹2 ಕೋಟಿ ವೆಚ್ಚ ಮಾಡಿ ನಿರ್ಮಾಣವಾಗಿರುವ ಶಾಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮರಿಸ್ವಾಮಿ ಸ್ವಂತ ಶ್ರಮದಿಂದ ಐಪಿಎಸ್ ಆಗಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ದೊರಕುವಂತೆ ಮಾಡಿದ್ದಾರೆ. ಸ್ವಾತಂತ್ಯ್ರಕ್ಕೂ ಮುನ್ನ ಶೂದ್ರರು, ದಲಿತರಿಗೆ ಅವಕಾಶಗಳೇ ಇರಲಿಲ್ಲ. ಅಂಬೇಡ್ಕರ್ ಅವರು ಕಷ್ಟಪಟ್ಟು ವಿದ್ಯಾವಂತರಾದರು. ಶಿಕ್ಷಣ ಪ್ರಬಲವಾದ ಅಸ್ತ್ರ ಶಿಕ್ಷಣದಿಂದ ವಂಚಿತರಾದವರು ಸ್ವಾಭಿಮಾನದಿಂದ, ಗೌರವದಿಂದ ಬದುಕುವುದು ಕಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ವಿದ್ಯಾವಂತರಾಗಲೇಬೇಕು ಎಂದು ಕರೆ ನೀಡಿದರು.
ಶಾಲಾ ನಿರ್ಮಾಣ ಕಾರ್ಯದಲ್ಲಿ ತೊಡಗಿದವರಿಗೆ ಅಭಿನಂದನೆ:
ಮರಿಸ್ವಾಮಿಯವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರ್ಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಸತ್ತೇಗಾಲ ಗ್ರಾಮದ ಗ್ರಾಮಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯ ಪಡೆದು ಶಾಲೆ ನಿರ್ಮಾಣ ಮಾಡಿರುವುದನ್ನು ಸಿಎಂ ಮೆಚ್ಚಿದರು.
ಚಾ.ನಗರದಲ್ಲಿ ಒಟ್ಟು 1102 ಪ್ರಾಥಮಿಕ ಶಾಲೆಗಳಿದ್ದು ಈ ಪೈಕಿ 805 ಸರ್ಕಾರಿ ಶಾಲೆಗಳಿವೆ. ಸರ್ಕಾರವೇ ಎಲ್ಲವನ್ನೂ ಅಭಿವೃದ್ಧಿ ಪಡೆಸುವುದು ಕಷ್ಟವಾಗುತ್ತದೆ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ. ನಾವು ಓದಿದ ಶಾಲೆ ಹೊಸದಾಗಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿರುವಾಗ ಈ ಕೆಲಸ ಮಾಡಿದವರಿಗೆ ಆಗುವ ಖುಷಿ, ಸಮಾಧಾನ ಬೇರೆಯಾರಿಗೂ ಆಗಲು ಸಾಧ್ಯವಿಲ್ಲ. ಮರಿಸ್ವಾಮಿ ಹಾಗೂ ಅವರ ಕುಟುಂಬದವರಲ್ಲದೇ ಶಾಲಾ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ 63 ಜನರನ್ನು ಸಿಎಂ ಈ ವೇಳೆ ಅಭಿನಂದಿಸಿದರು.
ಗುರಿ ಇಟ್ಟುಕೊಂಡು ಸಾಧನೆ ಮಾಡಿ:ನಾವು ವಿದ್ಯಾರ್ಥಿಗಳಾಗಿದ್ದಾಗ ಬರಿಗಾಲಿನಲ್ಲಿ ಶಾಲೆಗೆ ತರಳುತ್ತಿದ್ದೆವು. ಹಿಂದೆ ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಶೂ, ಸಾಕ್ಸ್ ಹಾಗೂ ಸಮವಸ್ತ್ರವನ್ನು ಹಾಕಿಕೊಳ್ಳಬೇಕೆಂದು ಶೂಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದ್ದೆ. ಈಗ ಹಾಲು, ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಬಾಳೆಹಣ್ಣು, ಸಮವಸ್ತ್ರ, ಪುಸ್ತಕವನ್ನು ಕೊಡುತ್ತಿದ್ದೇವೆ. ಹಾಗಾಗಿ ಮಕ್ಕಳು ಓದಬೇಕು. ವಿದ್ಯೆಯಿಂದ ವಂಚಿತರಾಗಬಾರದು. ಮಕ್ಕಳಿಗೆ ಆರ್ಥಿಕವಾಗಿ ತೊಂದರೆಯಾಗಬಾರದು ಎಂದು ಗೃಹಲಕ್ಷ್ಮಿ ಕಾರ್ಯಕ್ರಮವನ್ನು ಜಾರಿ ಮಾಡಿದ್ದೇವೆ.
ಜನರಲ್ಲಿ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು ಎಂದು ₹30 ಸಾವಿರ ಕೋಟಿಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದೆ. ಗ್ಯಾರಂಟಿಗಳಿಗೆ ₹56 ಸಾವಿರ ಕೊಟಿ ವೆಚ್ಚ ಮಾಡಲಾಗುತ್ತಿದೆ ಎಂದರು.ನಾನು ಓದದೇ ಹೋಗಿದ್ದರೆ ಸಿಎಂ ಆಗಲು ಸಾಧ್ಯವಾಗುತ್ತಿರಲಿಲ್ಲ. ರಾಚಯ್ಯನವರು ಕಾನೂನು ಓದಿದ್ದರಿಂದ ಸಚಿವರು ಹಾಗೂ ರಾಜ್ಯಪಾಲರಾದವರು. ಮರಿಸ್ವಾಮಿಯವರು ಓದಿದ್ದರಿಂದ ಐಪಿಎಸ್ ಅಧಿಕಾರಿಯಾದರು. ಅದಕ್ಕೆ ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ಜೀವನದಲ್ಲಿ ಗುರಿಯಿಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ಆರ್ಥಿಕ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳುಗೃಹಲಕ್ಷ್ಮಿ ಹಣದಿಂದ ಬಂಗಾರದಂತಹ ಬೆಳೆ ಬೆಳೆದಿರುವ ಬಗ್ಗೆ ಪತ್ರಿಕಾ ತುಣುಕನ್ನು ಸಿಎಂ ಪ್ರಸ್ತಾಪಿಸಿ, ₹1 ಕೋಟಿ 22 ಲಕ್ಷ ಕುಟುಂಬದ ಯಜಮಾನಿಯರಿಗೆ ತಿಂಗಳಿಗೆ ₹2 ಸಾವಿರಗಳನ್ನು ಕೊಡಲಾಗುತ್ತಿದೆ. 5 ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಮೂಲಕ ಉಚಿತವಾಗಿ ಕೊಡುವ ಕೆಲಸವನ್ನು ಸಿದ್ದರಾಮಯ್ಯ ಜಾರಿಮಾಡಿದ್ದು ಎಂದರು.
ಅಕ್ಕಿಗೆ 34 ರು.ಗಳನ್ನು ಕೊಡುತ್ತೇವೆ ಎಂದಾಗ ನರೇಂದ್ರ ಮೋದಿ ನಿರಾಕರಿಸಿದರು. ಪ್ರತಿ ವ್ಯಕ್ತಿಗೆ 34 ರು.ಗಳಂತೆ 170 ರು.ಗಳನ್ನು ನೀಡಲಾಗುತ್ತಿದೆ. ₹4.50 ಕೋಟಿ ಜನರಿಗೆ ಈ ಸೌಲಭ್ಯ ತಲುಪಿಸಲಾಗುತ್ತಿದೆ. ₹1 ಕೋಟಿ 62 ಲಕ್ಷ ಜನರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ನಾನು ಹಳ್ಳಿಯಲ್ಲಿ ಹುಟ್ಟಿ ಕಷ್ಟ ಗೊತ್ತಿರುವುದರಿಂದ ಈ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಸತ್ತೇಗಾಲ ಪಟ್ಟಣ ಪಂಚಾಯಿತಿ ರಚನೆಗೆ ಸಿಎಂ ಭರವಸೆನಮ್ಮ ಬಜೆಟ್ ₹3 ಲಕ್ಷದ 71 ಸಾವಿರ ಕೋಟಿ. ಅದರಲ್ಲಿ ₹1.20 ಲಕ್ಷ ಕೋಟಿಗಳನ್ನು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಸತ್ತೇಗಾಲದಲ್ಲಿ 14 ಮತಗಟ್ಟೆಗಳಿದ್ದು ಪಟ್ಟಣ ಪಂಚಾಯಿತಿ ಮಾಡಲು ಮನವಿ ಸಲ್ಲಿಸಿದ್ದಾರೆ. ಇದನ್ನು ಮಾಡಿಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಧನಗೆರೆ ಜಾಗೀರ್ದಾರ್ ಅಣೆಕಟ್ಟೆಗೆ ನೀರು ಒದಗಿಸುವ ಜೊತೆಗೆ ಬೇಸಿಗೆ ಬೆಳೆಗೆ ನೀರು ಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ನೀರಿದ್ದರೆ ಮಾಡಿಕೊಡುವ ಭರವಸೆ ನೀಡಿದರು.
ಈ ಬಾರಿ ಮಳೆ ಉತ್ತಮವಾಗಿದ್ದು ಎಲ್ಲೆಡೆ ಬಿತ್ತನೆಯಾಗಿದೆ. ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಪ್ರತಿ ವರ್ಷ ಮಳೆ ಉತ್ತಮವಾಗಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಸಿಎಂ ತಿಳಿಸಿದರು.ಜಿಲ್ಲಾ ಉಸ್ತುವರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ, ಪ್ರಾಥಮಿಕ ಶಿಕ್ಷಣ, ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ. ಶಾಸಕರಾದ ಎಂ.ಆರ್.ಮಂಜುನಾಥ್, ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ, ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ನರೇಂದ್ರ, ನಂಜುಂಡಸ್ವಾಮಿ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಪಂ ಮಾಜಿ ಸದಸ್ಯ ಆರ್.ಬಾಲರಾಜು, ಗ್ರಾಪಂ ಅಧ್ಯಕ್ಷ ಕೆಂಪರಾಜು, ಎಸ್ಡಿಎಂಸಿ ಅಧ್ಯಕ್ಷ ಶಾಂತರಾಜು, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾರೋತ್, ಎಸ್ಪಿ ಬಿ.ಟಿ. ಕವಿತಾ, ಸಿಸಿಎಫ್ ಹೀರಾಲಾಪ ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೋಲೀಸ್ ಮಹಾನಿರ್ದೇಶಕ ಮರಿಸ್ವಾಮಿ, ವೇದವತಿ ಉಪಸ್ಥಿತರಿದ್ದರು.