ಮಳೆ ನೀರು ಕೊಯ್ಲು ಪದ್ಧತಿ ಇಂದಿಗೆ ಅನಿವಾರ್ಯ

| Published : Jun 01 2025, 01:34 AM IST

ಸಾರಾಂಶ

ಹಿರಿಯೂರು: ಮಳೆನೀರು ಕೊಯ್ಲು ಪದ್ಧತಿ ಅನಿವಾರ್ಯ ಎಂಬಂತಾಗಿದೆ ಎಂದು ಪ್ರಾಧ್ಯಾಪಕ ಡಾ.ಡಿ.ಧರಣೇಂದ್ರಯ್ಯ ಹೇಳಿದರು.

ಹಿರಿಯೂರು: ಮಳೆನೀರು ಕೊಯ್ಲು ಪದ್ಧತಿ ಅನಿವಾರ್ಯ ಎಂಬಂತಾಗಿದೆ ಎಂದು ಪ್ರಾಧ್ಯಾಪಕ ಡಾ.ಡಿ.ಧರಣೇಂದ್ರಯ್ಯ ಹೇಳಿದರು.

ತಾಲೂಕಿನ ದಿಂಡಾವರ ಗ್ರಾಮದಲ್ಲಿ ನಡೆದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಅಂತರ್ಜಲ ಮಟ್ಟ ಇಂದು ಇಡೀ ರಾಷ್ಟ್ರದಲ್ಲಿ ಅಪಾಯದ ಸ್ಥಿತಿ ತಲುಪಿದೆ. ದಿಂಡಾವರ ಗ್ರಾಪಂ ವ್ಯಾಪ್ತಿಯೂ ಸಹ ಅಂತರ್ಜಲ ಕುಸಿತದ ಪ್ರದೇಶವಾಗಿದೆ. ಅಟಲ್ ಭೂ ಜಲ ಯೋಜನೆಯ ಸಂದೇಶದಂತೆ ಈ ಭಾಗದ ಜನ ಅಂತರ್ಜಲ ಸಂರಕ್ಷಣೆಗೆ ಕೈ ಜೋಡಿಸಬೇಕಾಗಿದೆ. ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಅಂತರ್ಜಲದ ಅತೀ ಬಳಕೆಯನ್ನು ತಡೆಯಬೇಕಿದೆ. ಈ ಭಾಗದ ಜನರು ಅಡಿಕೆ ಬೆಳೆಯ ವ್ಯಾಮೋಹ ತ್ಯಜಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ವ್ಯಾಮೋಹ ಬೆಳೆಸಿಕೊಳ್ಳಬೇಕು. ಬಿದ್ದ ಮಳೆ ನೀರನ್ನು ಒಂದು ಹನಿಯೂ ವ್ಯರ್ಥವಾಗದಂತೆ ಭೂಮಿಯಲ್ಲಿ ಇಂಗಿಸುವ ವಿಧಾನಗಳನ್ನು ಶಿಬಿರಾರ್ಥಿಗಳು ಸಮುದಾಯಕ್ಕೆ ಪ್ರಾತ್ಯಕ್ಷಿಕೆ ಮೂಲಕ ತಲುಪಿಸಬೇಕು ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ.ಸಿದ್ದಲಿಂಗಯ್ಯ ಮಾತನಾಡಿ, ಪ್ರತಿಯೊಬ್ಬರೂ ಪ್ರತಿದಿನವೂ ಯಾವುದಾದರೂ ಒಂದು ಸೇವೆ ಮಾಡಿ ಅದನ್ನು ಬರೆದಿಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ಅಭ್ಯಾಸ ನಿಮ್ಮನ್ನು ಖುಷಿಯಾಗಿಡುತ್ತದೆ. ಸೇವೆಯು ನಿಮ್ಮನ್ನು ಆರೋಗ್ಯವಾಗಿಡುತ್ತದೆ. ನಾವು ದಂಪತಿಗಳು ತುಮಕೂರು ನಗರದಲ್ಲಿ ಒಂದು ಉದ್ಯಾನವನ್ನು ದತ್ತು ಪಡೆದು ಅದರ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಾಪಕರಾದ ಪ್ರೊ.ಕೆ.ಮುರವರ್ಧನ್, ಪ್ರೊ.ಜಗನ್ನಾಥ್, ಪ್ರೊ.ಮಹಮ್ಮದ್ ಸಾದತ್,

ಸಿ.ರಂಗಸ್ವಾಮಿ, ತಿಪ್ಪೇಶ್. ಎಸ್‌ಎಲ್‌ಎನ್ ಮೂರ್ತಿ, ಮಹಾಂತೇಶ್ ಹಾಗೂ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.