ಸಾರಾಂಶ
- ಶಿಕ್ಷಕರು, ಅಧ್ಯಾಪಕರು, ವಿದ್ಯಾರ್ಥಿಗಳಿಗೆ ತಪ್ಪದ ಕಿರಿಕಿರಿ । ಅವ್ಯವಸ್ಥೆಗೆ ಆಕ್ರೋಶ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಟಿ.ಬಿ. ವೃತ್ತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ಆವರಣ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಆವರಣದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡಬಿಡದೇ ಸುರಿದ ಮಳೆಯಿಂದಾಗಿ ನೀರು ನಿಂತು ಕೆರೆಯಂತಾಗಿದೆ. ಇದರಿಂದ ಮಕ್ಕಳು, ಶಾಲಾ -ಕಾಲೇಜಿಗೆ ತೆರಳಳು ಪರದಾಡುವಂತಾಗಿದೆ.ಹಲವಾರು ದಿನಗಳಿಂದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಮಳೆ ಬಂದರೆ ಹೀಗೆ ನೀರು ನಿಲ್ಲುತ್ತಿದೆ. ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕಾಲೇಜಿ ಪ್ರಾಂಶುಪಾಲುರು ಮತ್ತು ಶಾಲಾ ಕಾಲೇಜಿನ ಶಾಲಾಭಿವೃದ್ಧಿ ಸದಸ್ಯರು ಈ ಅವ್ಯವಸ್ಥೆ ನೋಡಿಯೂ, ನೋಡದಂತೆ ಜಾಣಗುರುಡು ಪ್ರದರ್ಶಿಸುತ್ತಿದ್ದಾರೆ.
ಶಾಲಾ- ಕಾಲೇಜು ಆವರಣದಲ್ಲಿ ನೀರು ನಿಂತು ಕೆರೆಯಂತೆ ಕಾಣುತ್ತಿದೆ. ಈ ಕೊಳಚೆ ನೀರನ್ನು ಹೊರಹಾಕಲು ಇದೂವರೆಗೂ ಸ್ಥಳೀಯ ಆಡಳಿತವಾಗಲಿ, ಇಲಾಖೆಯವರಾಗಲಿ ಯಾವುದೇ ಕ್ರಮಗಳ ಕೈಗೊಂಡಿಲ್ಲ ಎಂದು ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಪತ್ರಿಕೆ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದೀಗ ಪ್ರಾಥಮಿಕ ಶಾಲೆ ಮಕ್ಕಳಿಗೆ ದಸರಾ ರಜೆ ಇದೆ. ಆದ್ದರಿಂದ ಶಾಲೆ ಪ್ರಾರಂಭವಾಗಿಲ್ಲ. ಶಾಲೆ ಆರಂಭದ ದಿನಗಳೂ ಸಮೀಪಿಸಿವೆ. ಆದರೆ ಪದವಿ ಕಾಲೇಜು ಇರುವುದರಿಂದ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಓಡಾಡುವುದು ಕಷ್ಟವಾಗಿದೆ.
ಸರ್ಕಾರ ಡೆಂಘೀ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳ ತಡೆಯಲು ಮನೆ, ಕಟ್ಟಡ, ಖಾಲಿ ಜಾಗಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದು ಬೊಬ್ಬೆ ಹೊಡೆದುಕೊಳ್ಳುತ್ತದೆ. ಇಲಾಖೆಗಳ ಅಧಿಕಾರಿಗಳೂ ಸಹ ಹಲವಾರು ಜನಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಆದರೆ, ಇಲ್ಲಿ ನೀರು ನಿಂತಿರುವುದು ಯಾರಿಗೂ ಕಾಣುತ್ತಿಲ್ಲ. ಸಾಂಕ್ರಾಮಿಕ ರೋಗಗಳು ಹರಡುವ ಅಪಾಯ ಎಲ್ಲರಲ್ಲೂ ಕಾಡುತ್ತಿದೆ.ಅ.21ರಿಂದಲೇ ಶಾಲೆ ಆರಂಭವಾಗುತ್ತದೆ. ಈ ಹಿನ್ನೆಲೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯ, ಶಿಕ್ಷಕರು ನಾವು ಸೇರಿ ಶಾಸಕರಿಗೆ ಈ ಜಾಗದ ಅಭಿವೃದ್ಧಿಗೆ ಹಾಗೂ ಶಾಲಾ ಕಾಲೇಜಿನ ಆವರಣವು ತುಂಬಾ ತಗ್ಗಿನಿಂದ ಕೂಡಿದ್ದು, ಈ ಪ್ರದೇಶವನ್ನು ಸೂಕ್ತವಾಗಿ ಎತ್ತರಿಸಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಈ ಪ್ರದೇಶ ಪುರಸಭೆ ವ್ಯಾಪ್ತಿಗೆ ಬರುತ್ತದೆ. ಕಾರಣ ಪುರಸಭೆ ಅಧಿಕಾರಿಗಳಿಗೂ ಸಮಸ್ಯೆ ತಿಳಿಸಲಾಗಿದೆ. ಅವರು ಈ ತಗ್ಗು ಪ್ರದೇಶದಲ್ಲಿನ ನೀರು ಹೊರಹಾಕಿ, ತಗ್ಗು ಪ್ರದೇಶವನ್ನು ಎತ್ತರಗೊಳಿಸಲು ಕನಿಷ್ಠ ₹50 ಸಾವಿರ ಬೇಕಾಗಬಹುದು ಎಂದು ತಿಳಿಸಿದ್ದಾರೆ. ಈ ಪ್ರದೇಶದ ಪಕ್ಕದಲ್ಲೇ ಬಿಇಒ ಕಚೇರಿ ಸಹ ಇದೆ. ಕಾಲೇಜಿನ ಪ್ರಾಂಶುಪಾಲರು, ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಸಮಿತಿ, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಶಾಲಾ- ಕಾಲೇಜುಗಳ ಮುಖ್ಯಸ್ಥರು ಸೇರಿ ಆದಷ್ಟು ಬೇಗ ಈ ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.- - - -18ಎಚ್.ಎಲ್.ಐ1:
ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಆವರಣ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಆವರಣದಲ್ಲಿ ಮಳೆನೀರು ಸಂಗ್ರಹವಾಗಿರುವುದು.