ಸಾರಾಂಶ
ಚನ್ನರಾಯಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗರನವಿಲೆ ಕ್ಷೇತ್ರಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೇಟಿ ನೀಡಿ ಶ್ರೀ ನಾಗೇಶ್ವರ ಸ್ವಾಮಿ ಶ್ರೀ ಸೋಮೇಶ್ವರ ಸ್ವಾಮಿ ಹಾಗೂ ಶ್ರೀ ಪಾರ್ವತಿ ದೇವಿಗೆ ಪೂಜೆ ಸಮರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿಚನ್ನರಾಯಪಟ್ಟಣ ತಾಲೂಕಿನ ಇತಿಹಾಸ ಪ್ರಸಿದ್ಧ ನಾಗರನವಿಲೆ ಕ್ಷೇತ್ರಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೇಟಿ ನೀಡಿ ಶ್ರೀ ನಾಗೇಶ್ವರ ಸ್ವಾಮಿ ಶ್ರೀ ಸೋಮೇಶ್ವರ ಸ್ವಾಮಿ ಹಾಗೂ ಶ್ರೀ ಪಾರ್ವತಿ ದೇವಿಗೆ ಪೂಜೆ ಸಮರ್ಪಣೆ ಮಾಡಿದರು. ಬಳಿಕ ಶಿವ ಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದ್ದು ವಿಶೇಷವಾಗಿತ್ತು. ನಂತರ ಆಶೀರ್ವಚನ ನೀಡಿದ ಜಗದ್ಗುರುಗಳು, ಮನುಷ್ಯ ದೇಹ ದೊರೆತಾಗ ಉನ್ನತ ಮಟ್ಟದ ಸಾಧನೆಯನ್ನು ಮಾಡಬೇಕು ಎಂದರು. ಪ್ರತಿಯೊಬ್ಬ ಮನುಷ್ಯರೂ ಜೀವನದಲ್ಲಿ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮಲ್ಲಿ ಧರ್ಮಪ್ರಜ್ಞೆ ಅವಶ್ಯಕವಾಗಿರಬೇಕೆಂದು ತಿಳಿಸಿದರು.
ದೇವರು ಮತ್ತು ಧರ್ಮದಲ್ಲಿ ನಮಗೆ ಅಚಲವಾದ ನಂಬಿಕೆ ಇರಬೇಕು. ದೇಹ ಮತ್ತು ಮನಸುಗಳನ್ನು ನಾವು ಭಗವಂತನಿಗೆ ಅರ್ಪಣೆ ಮಾಡಿಕೊಳ್ಳಬೇಕು. ಆಗ ಮಾತ್ರ ದೈವಿಕ ಕೃಪೆ ಒದಗಿ ಬರಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು. ನಮಗೆ ವೈಚಾರಿಕತೆ ಬೇಕು ಆದರೆ ಅದು ಎಂದೂ ತನ್ನ ಚೌಕಟ್ಟನ್ನು ಮೀರಬಾರದು. ಭಾರತೀಯ ಸನಾತನ ಧರ್ಮ ಸಂಸ್ಕೃತಿ, ಕಲೆ ಆಚಾರ ಮತ್ತು ವಿಚಾರಗಳಿಗೆ ನಾವು ಬದ್ಧರಾಗಿದ್ದುಕೊಂಡು ಬದುಕುವುದೇ ಪ್ರಮುಖ ಧ್ಯೇಯವಾಗಬೇಕು. ಆಗ ಮಾತ್ರ ನಾವು ಬದುಕಿನಲ್ಲಿ ಎತ್ತರಕ್ಕೆ ಏರಲು ಸಾಧ್ಯ ಎಂದರು. ನಾಸ್ತಿಕತೆ ಎಂಬುದು ಎಂದಿಗೂ ನಮ್ಮ ಹತ್ತಿರ ಸುಳಿಯಬಾರದು ಭಗವಂತನ ಸನ್ನಿಧಿಗೆ ಬಂದಾಗ ಜೀವನವನ್ನು ಸಾರ್ಥಕ ಮಾಡಿ ಕೊಡು ಎಂದು ಬೇಡಬೇಕು. ಗುರುಗಳ ಸಮ್ಮುಖದಲ್ಲಿ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಸಲಹೆ ನೀಡಿದರು. ಗ್ರಾಮದ ಪ್ರಮುಖರು ಮತ್ತು ಮುಖಂಡರು ಹಾಜರಿದ್ದರು.