ಹಾನಗಲ್ಲ: ವಿಜ್ಞಾನ ವಿಷಯಗಳನ್ನು ಮಕ್ಕಳಿಗೆ ಅನುಭವವೇದ್ಯ ಮಾಡುವುದು ಮುಖ್ಯವಾಗಿದೆಯೇ ಹೊರತು, ಕೇವಲ ಪುಸ್ತಕೀಯ ಜ್ಞಾನದಿಂದ ನಿಜವಾದ ವಿಜ್ಞಾನ ಅರ್ಥವಾಗದು ಎಂದು ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸಂಟ್ ಜೇಸನ್ ತಿಳಿಸಿದರು. ಪಟ್ಟಣದ ಲೋಯಲಾ ವಿಕಾಸ ಕೇಂದ್ರದಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ ಮಕ್ಕಳಿಗಾಗಿ ವಿಜ್ಞಾನ ಪ್ರಯೋಗಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದಲಾದ ಕಾಲಕ್ಕೆ ಶೈಕ್ಷಣಿಕ ರೀತಿಯೂ ಬದಲಾಗಿದೆ. ಎಂತಹದ್ದೇ ಬದಲಾವಣೆ ಬಂದರೂ ಕೂಡ ಬಾಲ್ಯದಿಂದಲೇ ಮಕ್ಕಳನ್ನು ಉತ್ತಮ ಓದು, ವೈಜ್ಞಾನಿಕ ಸತ್ಯಗಳ ಅರಿವು, ಸಾಮಾಜಿಕ ವಾಸ್ತವಗಳನ್ನು ಪರಿಚಯಿಸುವ ಕೆಲಸವಾಗಬೇಕು. ಕೇವಲ ಅಂಕಪಟ್ಟಿಯ ಪಾಸು ಪೇಲು ಆಗದೇ, ಮಕ್ಕಳ ಮನಸ್ಸಿನಲ್ಲಿ ಜ್ಞಾನದ ಜಾಗೃತಿ ಮೂಡಬೇಕು. ಕಾಲ ಕಾಲಕ್ಕೆ ಪ್ರಯೋಗಶೀಲ ಮನಸ್ಸನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಬೇಕು ಎಂದರು. 5 ತಂಡಗಳಲ್ಲಿ 38 ವಿದ್ಯಾರ್ಥಿಗಳೂ ವಿಜ್ಞಾನದ ಹಲವು ಪ್ರಯೋಗಗಳನ್ನು ಗುಂಪಾಗಿ ಪ್ರಯೋಗ ಮಾಡುವ ಮೂಲಕ ಖುಷಿ ಹಂಚಿಕೊಂಡರು. ಶಬ್ದ, ಭೂಕಂಪನ, ಬೆಂಕಿ ಗಾಳಿಯ ಜೊತೆ ಆಮ್ಲಜನಕ, ಬೆಳಕಿನ ಪ್ರತಿಬಿಂಬ, ಆಮ್ಲ ಪ್ರತ್ಯಾಮ್ಲಗಳ ಪ್ರಯೋಗ, ಸಾಂದ್ರತೆ, ಒತ್ತಡ, ಆಕರ್ಷಣೆ ಸೇರಿದಂತೆ ವಿವಿಧ ವೈಜ್ಞಾನಿಕ ಚಲನವಲನಗಳನ್ನು ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳೇ ಮಾಡಿ ಅನುಭವ ಪಡೆದರು. ಗೀತಾ ಬಿಸಗಣ್ಣನವರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪುಸ್ತಕದ ಓದು ಹಾಗೂ ಪ್ರಯೋಗದಲ್ಲಿನ ತಿಳುವಳಿಕೆ, ವಿಜ್ಞಾನ ಒಂದು ರಾಸಾಯನಿಕ ಹಾಗೂ ಸಹಜವಾದ ವಾತಾವರಣದಲ್ಲಿ ಬದಲಾಗುವ ಕ್ರಿಯೆ, ಇದನ್ನು ಅರಿಯುವಾಗಿನ ಎಚ್ಚರಿಕೆ, ಪ್ರಯೋಗಶೀಲತೆಯಲ್ಲಿ ಜ್ಞಾನದ ಆಕರ್ಷಣೆಗಳ ಕುರಿತು ಚರ್ಚಿಸಿದರು.