ಕುಕನೂರು:ನಾಡಿನ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಲಿಂ.ಪಂಡಿತ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದೆ. ಅವರು ಸಂಗೀತ ಕ್ಷೇತ್ರದ ಕಲಾವಿದರಿಗೆ ಆರಾಧ್ಯ ದೈವವಾಗಿದ್ದಾರೆ ಎಂದು ಶ್ರೀಪಂಚಾಕ್ಷರಿ ಸಂಗೀತ ಪಾಠಶಾಲೆಯ ಅಧ್ಯಕ್ಷ ಹಾಗೂ ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಹೇಳಿದರು.
ಪಟ್ಟಣದ ಎಂಟನೇ ವಾರ್ಡ್ನ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀಪಂಚಾಕ್ಷರಿ ಸಂಗೀತ ಪಾಠಶಾಲೆ ಹಾಗೂ ಕಲಾವಿದರಿಂದ ಜರುಗಿದ ಪಂಡಿತ್ ಪುಟ್ಟರಾಜ ಗವಾಯಿಗಳ 112ನೇ ಜಯಂತಿ ಪ್ರಯುಕ್ತ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,ಲಕ್ಷಾಂತರ ಅಂಧ ಅನಾಥ ಮಕ್ಕಳಿಗೆ ಊಟ ವಸತಿಯೊಂದಿಗೆ ಸಂಗೀತದ ಜ್ಞಾನ ನೀಡಿ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ದಾರಿದೀಪವಾದವರು. ಆಡು ಮುಟ್ಟದ ಸೊಪ್ಪಿಲ್ಲ, ಪುಟ್ಟರಾಜ್ ಗವಾಯಿಗಳು ನುಡಿಸದ ವಾದ್ಯಗಳಿಲ್ಲ.ಸಕಲ ವಾದ್ಯ ನುಡಿಸಿ ಪರಿಣಿತಿ ಹೊಂದಿದವರು ಗವಾಯಿಗಳು. ಹಲವಾರು ಪುರಾಣ, ನಾಟಕ ರಚಿಸಿದ್ದಾರೆ.ಪುಟ್ಟರಾಜ ಗವಾಯಿಗಳಿಗೆ ಭಾರತ ರತ್ನ ಪ್ರಶಸ್ತಿ ಸರ್ಕಾರ ನೀಡಬೇಕು ಎಂದರು.ಜನಪದ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಹನಾಯಿ ಕಲಾವಿದ ದೊಡ್ಡ ಯಮನೂರಪ್ಪ ಭಜಂತ್ರಿ, ಶ್ಯಾವಮ್ಮ ಭಜಂತ್ರಿ, ಬಸವರಾಜ ಕಿತ್ತೂರು, ನಾಗರಾಜ ಭಜಂತ್ರಿ, ಮುಕುಂದ ಭಜಂತ್ರಿ, ಚಂದ್ರಶೇಖರ ಕಿತ್ತೂರು, ಅಮರ ಹಿರೇಮನಿ, ಮಹೇಶ ಶಿರೂರು, ಶ್ರೀಕಾಂತ್ ಭಜಂತ್ರಿ,ಹುಲ್ಲೇಶ ಭಜಂತ್ರಿ, ಜಾನಕಿ ಭಜಂತ್ರಿ ಇತರರಿದ್ದರು.