ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಗೆ ಶುಕ್ರವಾರ ಬೆಳಗ್ಗೆ ಬೆಳಗಾವಿಯಲ್ಲಿ ಚಾಲನೆ ದೊರೆಯಿತು. ಮೂರು ದಿನಗಳ ಕಾಲ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಸಂಘದ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಮುಖ ಪದಾಧಿಕಾರಿಗಳು ಆಗಮಿಸಿದ್ದಾರೆ.

ಸಭೆಯಲ್ಲಿ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಎಲ್ಲಾ ಸಹ ಸಹಕಾರ್ಯವಾಹರು, ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸದಸ್ಯರು, ವಿವಿಧ ವಿಭಾಗಗಳ ಪ್ರಮುಖರು ಹಾಗೂ ಸಹ ಪ್ರಮುಖರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ದೇಶದ 46 ಸಂಘಟನಾ ಪ್ರಾಂತಗಳ ಪ್ರಾಂತ ಪ್ರಚಾರಕರು ಮತ್ತು ಸಹ ಪ್ರಾಂತ ಪ್ರಚಾರಕರು ಭಾಗವಹಿಸಿದ್ದಾರೆ. ಸಂಘ ಪ್ರೇರಿತ ವಿವಿಧ ಸಂಘಟನೆಗಳ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.ಸಭೆಯಲ್ಲಿ 2026ರ ಮಾರ್ಚ್ ನಂತರ ವಿವಿಧ ಹಂತಗಳಲ್ಲಿ ನಡೆದ ತರಬೇತಿ ವರ್ಗಗಳ ವರದಿಗಳನ್ನು ಮಂಡಿಸಿ, ಅವುಗಳ ಅನುಭವ, ಸ್ವಯಂಸೇವಕರ ಸಿದ್ಧತೆ ಹಾಗೂ ಶಾಖಾ ಮಟ್ಟದಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ. ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ದೇಶಾದ್ಯಂತ ಕೈಗೊಂಡಿರುವ ಶಾಖಾ ವಿಸ್ತರಣಾ ಕಾರ್ಯಗಳ ಪ್ರಗತಿಯನ್ನೂ ಪರಿಶೀಲಿಸಲಾಗುತ್ತದೆ. ಹೊಸದಾಗಿ ಆರಂಭಗೊಂಡ ಶಾಖೆಗಳ ಕಾರ್ಯಕ್ಷಮತೆಯ ಮೌಲ್ಯಮಾಪನದ ಜೊತೆಗೆ, ಮುಂದಿನ ದಿನಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಹೊಸ ಶಾಖೆಗಳನ್ನು ಆರಂಭಿಸುವ ಕುರಿತು ಕಾರ್ಯತಂತ್ರ ರೂಪಿಸಲಾಗುತ್ತದೆ.ಶತಮಾನೋತ್ಸವ ವರ್ಷದ ಅಂಗವಾಗಿ ಇದುವರೆಗೆ ನಡೆದ ಕಾರ್ಯಕ್ರಮಗಳು, ಜನಸಂಪರ್ಕ ಅಭಿಯಾನಗಳು ಹಾಗೂ ಸಂಘಟನಾ ಚಟುವಟಿಕೆಗಳ ಪರಿಶೀಲನೆಯೂ ಸಭೆಯ ಪ್ರಮುಖ ಅಂಶವಾಗಿದೆ. ಉಳಿದಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಿನ ಕಾರ್ಯಯೋಜನೆ ರೂಪಿಸುವ ಸಾಧ್ಯತೆಯಿದೆ. 2026ರ ವಿಜಯದಶಮಿವರೆಗೆ ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಗಳ ರೂಪುರೇಷೆಗಳಿಗೂ ಸಭೆಯಲ್ಲಿ ಅಂತಿಮ ಸ್ಪರ್ಶ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರ 2026-27ರ ರಾಷ್ಟ್ರವ್ಯಾಪಿ ಪ್ರವಾಸ ವೇಳಾಪಟ್ಟಿ, ವಿವಿಧ ಪ್ರಾಂತಗಳ ಭೇಟಿ, ಸಂಘಟನಾ ಸಭೆಗಳು, ಸ್ವಯಂಸೇವಕರೊಂದಿಗೆ ಸಂವಾದ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಕುರಿತೂ ಚರ್ಚಿಸಿ ಅಂತಿಮಗೊಳಿಸುವ ನಿರೀಕ್ಷೆಯಿದೆ.ದೇಶದ ಎಲ್ಲ ಸಂಘಟನಾ ಪ್ರಾಂತಗಳ ಪ್ರತಿನಿಧಿಗಳು ಹಾಗೂ ಸಂಘದ ಉನ್ನತ ನಾಯಕತ್ವ ಒಂದೇ ವೇದಿಕೆಯಲ್ಲಿ ಭಾಗವಹಿಸಿರುವ ಬೆಳಗಾವಿಯ ಈ ಸಭೆ, ಸಂಘದ ಮುಂದಿನ ಸಂಘಟನಾ ದಿಕ್ಕು ಮತ್ತು ಶತಮಾನೋತ್ಸವ ಕಾರ್ಯಕ್ರಮಗಳ ಅಂತಿಮ ಹಂತದ ಕಾರ್ಯತಂತ್ರ ರೂಪಿಸುವ ಮಹತ್ವದ ಸಮಾಲೋಚನಾ ವೇದಿಕೆಯಾಗಿ ಪರಿಗಣಿಸಲಾಗಿದೆ.