ಕುಂದಾಪುರ: ಇಲ್ಲಿನ ಸಾಲಿಗ್ರಾಮದಲ್ಲಿ ಮನೆಯೊಂದರ ಅಸುರಕ್ಷಿತ ಮತ್ತು ಅನಾರೋಗ್ಯ ಪರಿಸರದಲ್ಲಿ ಪ್ರಾಣಿಗಳನ್ನು ಅಕ್ರಮವಾಗಿ ಸಾಕಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೇಟಾ (ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್)ದ ಕಾರ್ಯಕರ್ತರು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಸಾಲಿಗ್ರಾಮದ ಮನೆಗೆ ತೆರಳಿ ಕಾರ್ಯಾಚರಣೆ ನಡೆಸಿದರು.ಇಲ್ಲಿನ ಪ್ರಾಣಿ ಪ್ರೇಮಿ ಸುಧೀಂದ್ರ ಐತಾಳ್ ನಡೆಸುತ್ತಿರುವ ಈ ಕೇಂದ್ರದಲ್ಲಿ ಅನಾರೋಗ್ಯ ಪೀಡಿತ ಹಾಗೂ ಗಾಯಗೊಂಡ ನಾಯಿ, ಬೆಕ್ಕುಗಳಿಗೆ ಆಶ್ರಯ ನೀಡಲಾಗುತ್ತಿತ್ತು. ಆದರೆ ಕೇಂದ್ರದಲ್ಲಿ ಸೂಕ್ತ ನಿರ್ವಹಣೆ ಹಾಗೂ ಸ್ವಚ್ಛತೆ ಕೊರತೆ ಇದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪರಿಶೀಲನಾ ಕಾರ್ಯಾಚರಣೆ ನಡೆಸಲಾಗಿದೆ.ಪೇಟಾ ಕಾರ್ಯಕರ್ತರ ಜೊತೆಗೆ ಸಾಲಿಗ್ರಾಮ ಪಪಂ ಪೌರ ಸಿಬ್ಬಂದಿ, ಆರೋಗ್ಯ ಅಧಿಕಾರಿ ಹಾಗೂ ಕೋಟ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ಕೆಲವು ನಾಯಿ ಮತ್ತು ಬೆಕ್ಕಿನ ಮರಿಗಳನ್ನು ಪೇಟಾ ಸಿಬ್ಬಂದಿ ರಕ್ಷಣೆ ಮಾಡಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಈ ಹಿಂದೆ ಕೂಡ ಇದೇ ಪ್ರಾಣಿ ಸಂರಕ್ಷಣಾ ಕೇಂದ್ರದ ಮೇಲೆ ಪೇಟಾ ದಾಳಿ ನಡೆಸಿ ಹಲವು ಪ್ರಾಣಿಗಳನ್ನು ವಶಕ್ಕೆ ಪಡೆದಿತ್ತು.