ಪೋಷಕರ, ಶಿಕ್ಷಕರ ಮಹಾಸಭೆಯಲ್ಲಿ ಸಯ್ಯದ್ ಮೋಸಿನ್ಕನ್ನಡಪ್ರಭ ವಾರ್ತೆ ಹೊಸದುರ್ಗ
ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಪೋಷಕರು, ವಿಶೇಷವಾಗಿ ತಾಯಂದಿರು ಹೆಚ್ಚಿನ ಜವಾಬ್ದಾರಿಯಿಂದ ಮಕ್ಕಳ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಯ್ಯದ್ ಮೋಸಿನ್ ಹೇಳಿದರು.ತಾಲೂಕಿನ ಶ್ರೀರಾಂಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆಯಲ್ಲಿ ನಡೆದ 2026–27ನೇ ಸಾಲಿನ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ ಯನ್ನುದ್ದೇಶಿಸಿ ಮಾತನಾಡಿದರು.
ಮಗು ಉದ್ಧಾರವಾಗುವುದಕ್ಕೂ, ಹಾಳಾಗುವುದಕ್ಕೂ ತಾಯಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮಕ್ಕಳ ತಪ್ಪುಗಳನ್ನು ಕಂಡ ತಕ್ಷಣ ತಿದ್ದುವ ಕೆಲಸವನ್ನು ಪೋಷಕರು ಮಾಡಬೇಕು. ತಾಯಿ ಮನಸ್ಸು ಮಾಡಿದರೆ ಮಕ್ಕಳಿಂದ ಯಾವುದೇ ಸಾಧನೆ ಸಾಧ್ಯ. ಪರೀಕ್ಷೆ ಸಮಯದಲ್ಲಿ ಮಕ್ಕಳನ್ನು ಹಬ್ಬ-ಜಾತ್ರೆಗಳಿಗೆ ಕರೆದುಕೊಂಡು ಹೋಗದೆ ಓದಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು. ಮೊಬೈಲ್ ಬಳಸುವುದರಿಂದ ಮಕ್ಕಳು ಹಾಳಾಗುವುದಿಲ್ಲ. ಅದರ ಬಳಕೆಯ ಬಗ್ಗೆ ಪೋಷಕರು ನಿರಂತರ ಗಮನಹರಿಸಬೇಕು. ಪ್ರತಿ ತಿಂಗಳು ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಿ ಎಂದು ಸಲಹೆ ನೀಡಿದರು.ಸಂಪನ್ಮೂಲ ವ್ಯಕ್ತಿ ನವೀನ್ ಕುಮಾರ್ ಮಾತನಾಡಿ, ಪೋಷಕರೇ ಮಕ್ಕಳ ಭವಿಷ್ಯ ರೂಪಿಸುವ ನಿಜವಾದ ನಾಯಕರು. ಪ್ರತಿಭೆ ಎಂಬ ಪ್ರವಾಹಕ್ಕೆ ಸೂಕ್ತ ದಿಕ್ಕು ತೋರಿಸಿ ಅದನ್ನು ಸರಿಯಾದ ಮಾರ್ಗದಲ್ಲಿ ಹರಿಯುವಂತೆ ಮಾಡುವ ಜವಾಬ್ದಾರಿ ಪೋಷಕರದ್ದು. ಮಕ್ಕಳ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಅರಿತು ಅವರನ್ನು ಉತ್ತಮ ದಾರಿಯಲ್ಲಿ ಮುನ್ನಡೆಸಬೇಕು ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಿಆರ್ಪಿ ರಘು, ಉಪಪ್ರಾಂಶುಪಾಲ ಸತೀಶ್ ಭಂಡಾರಿ, ಸಹ ಶಿಕ್ಷಕ ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.