ಸಮನ್ವಯದಿಂದ ಸೇವೆ ಸಲ್ಲಿಸಿ: ಪರಶುರಾಮ ಘಸ್ತೆ

| Published : Jun 13 2024, 12:46 AM IST

ಸಾರಾಂಶ

ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಲು ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜನರಿಗೆ ನಿರಂತರವಾಗಿ ಕೆಲಸ ಒದಗಿಸಲು ಇಲಾಖೆಗಳು ಸಹಕರಿಸಬೇಕು.

ಹಳಿಯಾಳ: ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನಾಗಲಿ ಅಥವಾ ಕಾಮಗಾರಿಗಳ ಅನುಷ್ಠಾನದ ವಿಷಯದಲ್ಲಿ ಸಮಸ್ಯೆಗಳು ಎದುರಾದಲ್ಲಿ ಅಧಿಕಾರಿಗಳು ಪರಸ್ಪರ ಚರ್ಚಿಸಿ ಸಮನ್ವಯತೆಯಿಂದ ಸೇವೆ ಸಲ್ಲಿಸಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಸೂಚಿಸಿದರು.ಬುಧವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.ಅಭಿವೃದ್ಧಿ ಕಾಮಗಾರಿಗಳಾಗಲಿ ಅಥವಾ ಯಾವುದೇ ಯೋಜನೆಗಳಾಗಲಿ ಅವುಗಳ ಆಡಳಿತಾತ್ಮಕ ಅನುಮೋದನೆ ಸಮಸ್ಯೆ ಎದುರಾದರೆ ಆಯಾ ಇಲಾಖೆಗಳು ಅವುಗಳ ಮಾಹಿತಿಯನ್ನು ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆಯವರು ತಮ್ಮ ಗಮನಕ್ಕೆ ತರಲು ಹೇಳಿದ್ದಾರೆ. ಅದಕ್ಕಾಗಿ ಆಯಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳು ಯಾರ ಪರವಾನಗಿ ಪಡೆಯಬೇಕೆಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಬರೆದು ಶಾಸಕರ ಕಚೇರಿಗೆ ಸಲ್ಲಿಸಬೇಕೆಂದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿಯನ್ನು ಸಮಗ್ರವಾಗಿ ಪಡೆಯಲು ಸಮಯಾವಕಾಶ ದೊರೆಯುವುದರಿಂದ ಶಾಸಕ ಆರ್.ವಿ. ದೇಶಪಾಂಡೆಯವರು ಇನ್ನೂ ಇಲಾಖೆಗಳನ್ನು ಆಯ್ದು ಪ್ರಗತಿ ಪರಿಶೀಲನೆಯನ್ನು ನಡೆಸಲಿರುವುದಾಗಿ ಸೂಚಿಸಿದ್ದು, ಅದಕ್ಕಾಗಿ ಎಲ್ಲ ಇಲಾಖೆಗಳು ತಮ್ಮ ಪ್ರಗತಿಯ ವರದಿಯನ್ನು ಸಿದ್ಧಪಡಿಸಿಕೊಳ್ಳಬೇಕೆಂದರು.ನರೇಗಾ ಬಗ್ಗೆ ಆಸಕ್ತಿ ವಹಿಸಿ:ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸಲು ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜನರಿಗೆ ನಿರಂತರವಾಗಿ ಕೆಲಸ ಒದಗಿಸಲು ಇಲಾಖೆಗಳು ಸಹಕರಿಸಬೇಕು. ಆದಷ್ಟು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚಿನ ಆಸಕ್ತಿ ಕಾಳಜಿ ವಹಿಸಿ ಎಂದರು.ಬಿಇಒ ಪ್ರಮೋದ ಮಹಾಲೆ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 29168 ವಿದ್ಯಾರ್ಥಿಗಳು 1ರಿಂದ 10ನೇ ತರಗತಿಯವರೆಗೆ ದಾಖಲಾತಿಯನ್ನು ಪಡೆದಿದ್ದಾರೆ. ಪಠ್ಯಪುಸ್ತಕಗಳನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈವರೆಗೆ ಶೇ. 65ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ. ಅಲ್ಲದೇ ಈ ವರ್ಷ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶವು ಶೇ. 79.68ರಷ್ಟಾಗಿದೆ ಎಂದರು.

ಪಶು ಸಂಗೋಪನಾ ಇಲಾಖೆಯ ತಾಲೂಕು ಆಡಳಿತಾಧಿಕಾರಿ ಡಾ. ಕೆ. ನದಾಫ್‌ ಮಾತನಾಡಿ, ದುಸಗಿಯಲ್ಲಿರುವ ಜಿಲ್ಲಾ ಗೋಶಾಲೆಗಳಿಗೆ ಇಡೀ ಜಿಲ್ಲೆಯಿಂದ ಜಾನುವಾರುಗಳನ್ನು ತಂದು ಬಿಡುತ್ತಿರುವುದರಿಂದ ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಜಾನುವಾರುಗಳನ್ನು ಸುರಕ್ಷಿತವಾಗಿ ಇಡಲು ಇಲಾಖೆಯು ಕ್ರಮವನ್ನು ಕೈಗೊಂಡಿದೆ ಎಂದರು.

ಲೋಕೋಪಯೋಗಿ ಇಲಾಖೆಯ ಎಇ ಸುಧಾಕರ ಕಟ್ಟಿಮನಿ ಅವರು, ಖೆಲೋ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಾಂಗಣ ಕ್ರೀಡಾಂಗಣದ ಹಾಗೂ ಸಾಂಸ್ಕೃತಿಕ ಭವನದ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

ತಾಲೂಕಿನೆಲ್ಲೆಡೆ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಯಿಂದಾಗಿ ಜಿಲ್ಲಾ ಮುಖ್ಯ ರಸ್ತೆಗಳು ಜಖಂಗೊಂಡಿದ್ದು, ಆದಷ್ಟು ಬೇಗ ಈ ರಸ್ತೆಗಳ ದುರಸ್ತಿ ಕಾರ್ಯವನ್ನು ಇಲಾಖೆಗಳು ಕೈಗೊಳ್ಳಬೇಕೆಂದರು.

ಕೃಷಿ, ತೋಟಗಾರಿಕೆ, ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಜಿಪಂ, ಚಿಕ್ಕನೀರಾವರಿ ಹಾಗೂ ಇತರ ಇಲಾಖೆಗಳು ಪ್ರಗತಿ ವರದಿಯನ್ನು ಮಂಡಿಸಿದವು. ಸಭೆಯ ಅಧ್ಯಕ್ಷತೆಯನ್ನು ತಾಪಂ ಆಡಳಿತಾಧಿಕಾರಿ ಬಿ.ಎಸ್. ಪಾಟೀಲ ವಹಿಸಿದ್ದರು.