ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾಜೆ ಬೋಸ್ಲೆ 362ನೇ ಪುಣ್ಯಾರಾಧನೆ ಕಾರ್ಯಕ್ರಮವು ಜ.23ರಂದು ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ಆಯೋಜಿಸಲಾಗಿದೆ ಎಂದು ಸ್ಮಾರಕ ಸಮಿತಿಯ ಅಧ್ಯಕ್ಷ ವೈ.ಮಲ್ಲೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾಜೆ ಬೋಸ್ಲೆ 362ನೇ ಪುಣ್ಯಾರಾಧನೆ ಕಾರ್ಯಕ್ರಮವು ಜ.23ರಂದು ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಅವರ ಸಮಾಧಿ ಸ್ಥಳದಲ್ಲಿ ಆಯೋಜಿಸಲಾಗಿದೆ ಎಂದು ಸ್ಮಾರಕ ಸಮಿತಿಯ ಅಧ್ಯಕ್ಷ ವೈ.ಮಲ್ಲೇಶ್ ಹೇಳಿದರು.

ಪುಣ್ಯಾರಾಧನೆ ಸಂಬಂಧ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮರಾಠ ಬಾಂಧವರ ಜತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಪುಣ್ಯಾರಾಧನೆಯ ನಿಮಿತ್ತವಾಗಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಆ ಸಮಾರಂಭಕ್ಕೆ 5 ಸಾವಿರ ಜನರನ್ನು ಕರೆತರುವ ವ್ಯವಸ್ಥೆಯಾಗಬೇಕು. ಇದು ಸಮಾಜದ ಪ್ರತಿಯೊಬ್ಬರ ಕೆಲಸವಾಗಿದ್ದು ಇಂದಿನ ದಿನಮಾನಗಳಲ್ಲಿ ಸಂಪರ್ಕ ಮಾಧ್ಯಮ ಉತ್ತಮ ವಾಗಿದ್ದು ಮೊಬೈಲ್‌ಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಸಂಪರ್ಕ ಸಾಧಿಸಿ ಜನ ಸೇರಿಸುವ ಕೆಲಸವಾಗಬೇಕು ಎಂದು ಹೇಳಿದರು.

ಸ್ಮಾರಕದ ಅಭಿವೃದ್ದಿಗಾಗಿ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು 5 ಕೋಟಿ ರು. ಅನುದಾನವನ್ನು ನೀಡಿದ್ದು ಶಿವರಾಜ್ ತಂಗಡಗಿ 1 ಕೋಟಿ ರು. ಅನುದಾನ ನೀಡುತ್ತಾರೆ, ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ ಅನುದಾನ ಕೊಡುವುದಾಗಿ ತಿಳಿಸಿದ್ದಾರೆ. ಈಗ ಹಣವನ್ನು ಕೊಡುವಂತಹ ದಾನಿಗಳು ಇದ್ದಾರೆ. ಅದನ್ನು ಪಡೆಯುವಂತಹ ನಾವು ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು.

ಈ ಸಮಾರಂಭವು ಗೋ ಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದ್ದು ಈ ಸಮಾರಂಭಕ್ಕೆ ಸಚಿವರಾದ ಸತೀಶ್ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ, ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈಗಾಗಲೇ ಸ್ಮಾರಕ ಸ್ಥಳದ ಮುಂಭಾಗದಲ್ಲಿ ರಸ್ತೆ ಅಭಿವೃದ್ದಿ ಸೇರಿದಂತೆ ವಿವಿಧ ಕಾಮಗಾರಿಗಳು ಆರಂಭಗೊಂಡಿವೆ. ಸ್ಮಾರಕ ಸ್ಥಳದ ಅಭಿವೃದ್ದಿಗೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗುವುದು ಎಂದರು.

ತಾಲೂಕು ಮರಾಠ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾಜಿರಾವ್ ಮಾತನಾಡಿ ಈ ಸ್ಮರಣೋತ್ಸವವನ್ನು ಕಳೆದ ಹಲವಾರು ವರ್ಷಗಳಿಂದ ಸಮಾಜ ಬಾಂಧವರು ಮಾಡಿಕೊಂಡು ಬರುತ್ತಿದ್ದು ಈ ಸ್ಮರಣೋತ್ಸವವು ಅದ್ಧೂರಿಯಾಗಿ ನಡೆಯಬೇಕು ಎಂದು ತಿಳಿಸುತ್ತ, ಕಳೆದ ವರ್ಷದಲ್ಲಿ ಆದ ಸ್ಮರಣೋತ್ಸವಕ್ಕೆ ಸಂಬಂಧಿಸಿದಂತೆ ಲೆಕ್ಕ-ಪತ್ರಗಳನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ಸ್ಮರಣೋತ್ಸವದ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಮರಾಠ ಸಮಾಜದ ಅಧ್ಯಕ್ಷ ಮಹಾಂತೇಶ್ ಜಾದವ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಯಶವಂತರಾವ್ ಜಾದವ್, ಅಂಬಾಭವಾನಿ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಗೋಪಾಲರಾವ್, ಮ್ಯಾಮ್ ಕೋಸ್ ನ ಮಾಜಿ ಅಧ್ಯಕ್ಷ ಬೀಮ್ ರಾವ್, ಗೌರವ ಅಧ್ಯಕ್ಷ ಎಂ.ಎಂ.ಮಂಜುನಾಥ್ ಜಾದವ್, ವೈ.ಎಂ.ರಾಮಚಂದ್ರರಾವ್, ಬಿ.ಎಂ.ಕುಬೇಂದ್ರೋಜಿರಾವ್, ಸತೀಶ್ ಪವಾರ್, ಅಣ್ಣೋಜಿರಾವ್, ದೇವರಾಜ್, ಲೋಕೇಶ್, ಲೋಹಿತ್ ಇದ್ದರು.