ಸಾರಾಂಶ
ಕರ್ನಾಟಕದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಉಡಾನ್ ಯೋಜನೆಯಡಿ ಒಟ್ಟು ಏಳು ಸ್ಥಳಗಳನ್ನು ಗುರುತಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ಶಿವಮೊಗ್ಗ : ಪ್ರವಾಸಿಗರನ್ನು ಸೆಳೆಯಲು ಸಿಗಂದೂರು ಸಮೀಪ ಲಿಂಗನಮಕ್ಕಿ ಜಲಾಶಯದ ಹಿನ್ನೀರು ಭಾಗದಲ್ಲಿ ವಾಟರ್ ಏರೋಡ್ರೋಮ್ ಸ್ಥಾಪಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಯೋಜನೆ ಹಾಕಿಕೊಂಡಿದೆ.
ಕರ್ನಾಟಕದ 7 ಕಡೆ ಉಡಾನ್ ಯೋಜನೆ ಅಡಿ ವಾಟರ್ ಏರೋ ಡ್ರೋಮ್ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ. ಉಡುಪಿಯ ಬೈಂದೂರು, ಸೂಪ ಡ್ಯಾಮ್ನ ಗಣೇಶಗುಡಿ, ಕಬಿನಿ ಹಿನ್ನೀರು, ಕಾರವಾರದ ಕಾಳಿ ನದಿ ಸೇತುವೆ ಸಮೀಪ, ಉಡುಪಿಯ ಮಲ್ಪೆ, ಮಂಗಳೂರು ಮತ್ತು ಸಿಗಂದೂರು ಸಮೀಪ ವಾಟರ್ ಏರೋ ಡ್ರೋಮ್ ಸ್ಥಾಪನೆಗೆ ಯೋಜಿಸಲಾಗಿದೆ.
ಏನಿದು ವಾಟರ್ ಏರೋ ಡ್ರೋಮ್?:
ನೀರಿನ ಮೇಲೆ ವಿಮಾನಗಳು ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಲು ನಿರ್ದಿಷ್ಟ ಸ್ಥಳ ಗುರುತಿಸಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ. ಇದನ್ನು ವಾಟರ್ ಏರೋ ಡ್ರೋಮ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ವಿಸ್ತಾರವಾದ ನದಿಗಳು, ಜಲಾಶಯಗಳ ಹಿನ್ನೀರು ಭಾಗ, ಕರಾವಳಿ ಪ್ರದೇಶಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಿಸಲಾಗುತ್ತದೆ. ಉಡಾನ್ 5.5 ಯೋಜನೆ ಅಡಿ ವಾಟರ್ ಏರೋಡ್ರೋಮ್ಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಮಿನಿಸ್ಟರ್:
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಸಭೆಯಲ್ಲಿ, ರಾಜ್ಯ ವಿಮಾನಯಾನ ಸೇವೆಗಳ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರುಳಿಧರ್ ಮೊಹೋಲ್ ಉತ್ತರ ನೀಡಿದ್ದಾರೆ. ಈ ವೇಳೆ ಉಡಾನ್ ಯೋಜನೆಯಡಿ ವಾಟರ್ ಏರೋಡ್ರೋಮ್ಗಳ ಸ್ಥಾಪನೆ ಕುರಿತು ಪ್ರಸ್ತಾಪಿಸಿದ್ದಾರೆ.
ಉಡಾನ್ ಯೋಜನೆ ಅಡಿ ಕರ್ನಾಟಕದಲ್ಲಿ ಒಟ್ಟು 9 ವಿಮಾನ ನಿಲ್ದಾಣಗಳಿವೆ. ಈ ಪೈಕಿ ಬೀದರ್, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ. ಬಳ್ಳಾರಿ ಮತ್ತು ಕೋಲಾರದಲ್ಲಿ 20 ಸೀಟ್ಗಿಂತಲು ಕಡಿಮೆ ಸಾಮರ್ಥ್ಯದ ಸಣ್ಣ ವಿಮಾನಗಳ ಹಾರಾಟಕ್ಕೆ ಟೆಂಡರ್ ಪೂರ್ಣಗೊಂಡಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾಗ ಒದಗಿಸಬೇಕಿದೆ. ರಾಜ್ಯದಲ್ಲಿ ವಾಟರ್ ಏರೋಡ್ರೋಮ್ಗಳಿಗೆ ಸ್ಥಾಪನೆಗೆ ಯೋಜಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕಬಿನಿ ಮತ್ತು ಮಂಗಳೂರಿನಲ್ಲಿ ವಾಟರ್ ಏರೋಡ್ರೋಮ್ಗೆ ಒಪ್ಪಂದ ಪತ್ರ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರುಳಿಧರ್ ಮೊಹೋಲ್ ಉತ್ತರಿಸಿದ್ದಾರೆ.