ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮೃಗಾಲಯದಲ್ಲಿದ್ದ 1.7 ವರ್ಷದ ಹೆಣ್ಣು ಜಿರಾಫೆ ಶಿವಾನಿಯನ್ನು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ಕುಮಾರ್ ತಿಳಿಸಿದ್ದಾರೆ.ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆಯ ಮೇರೆಗೆ ಈ ಹೆಣ್ಣು ಜಿರಾಫೆಯನ್ನು ಸಾಗಾಣಿಕೆ ಮಾಡಲಾಗಿದೆ. ಒತ್ತಡಮುಕ್ತ ಹಾಗೂ ಸುಲಲಿತ ಸಾಗಾಣಿಕೆ ಅನುವಾಗುವಂತೆ ಶಿವಾನಿ ಜಿರಾಫೆಗೆ ಕಳೆದ ಕೆಲವು ವಾರಗಳಿಂದ ಕ್ರೇಟ್ ನ ಒಳ ಹೋಗುವಂತೆ ತರಬೇತಿ ನೀಡಲಾಗಿತ್ತು. 13.5 ಅಡಿ ಎತ್ತರ ಇರುವ ಶಿವಾನಿ ಜಿರಾಫೆಯು 2022ರ ಜು. 4 ರಲ್ಲಿ ಭರತ ಮತ್ತು ಬಬ್ಲಿ ಜಿರಾಫೆಗಳಿಗೆ ಜನಿಸಿದ್ದು, ಫೆ. 27ರ ಬೆಳಗ್ಗೆ 7.30ರ ವೇಳೆಗೆ ಮೈಸೂರು ಮೃಗಾಲಯದಿಂದ ಪ್ರಯಾಣ ಬೆಳಸಿದ ಜಿರಾಫೆಯನ್ನು ಬನ್ನೇರುಘಟ್ಟ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್, ಸಹಾಯಕ ನಿರ್ದೇಶಕ ಡಾ. ಜೆ.ಎಲ್. ಶ್ರೀನಿವಾಸ್, ಡಾ. ಕೆ.ವಿ.ಮದನ್, ವಲಯ ಅರಣ್ಯಾಧಿಕಾರಿಗಳಾದ ವಿ. ಮುನಿರಾಜು ಮತ್ತು ದಿನೇಶ್, ಪಶುವೈದ್ಯಾಧಿಕಾರಿ ಡಾ. ಎಂ.ಎಸ್. ರೋಷನ್ ಕೃಷ್ಣ, ಪ್ರಾಣಿಪಾಲಕರು ಮತ್ತು ಸಂಬಂಧಿಸಿದ ಸಿಬ್ಬಂದಿಗಳೊಂದಿಗೆ ಕಳುಹಿಸಿಕೊಡಲಾಗಿದೆ. 200 ಕಿ.ಮೀ ದೂರ ಪ್ರಯಾಣಿಸಿ ಜಿರಾಫೆಯು ಮಂಗಳವಾರ ಮಧ್ಯಾಹ್ನ 12ಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ತಲುಪಿದೆ.