ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಕೊರೋನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಫೋಟೋ ಸ್ಟುಡಿಯೋ, ಝೆರಾಕ್ಸ್‌ ಸೆಂಟರ್‌ಗಳಿಗೆ ಎಸ್‌ಐಆರ್‌ ವರವಾಗಿದೆ. ಇದೀಗ ಜನದಟ್ಟಣೆಯಿಂದ ಕೂಡಿದ್ದು ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಹೌದು. ಎಸ್‌ಐಆರ್‌ ಸಾವಿರಾರು ವ್ಯಾಪಾರಸ್ಥರಿಗೆ ದುಡಿಮೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ 3000ಕ್ಕೂ ಹೆಚ್ಚು ಫೋಟೋ ಸ್ಟುಡಿಯೋಗಿದ್ದು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಆರಂಭವಾಗುತ್ತಿದ್ದಂತೆ ಜನರು ಅಗತ್ಯ ದಾಖಲೆ, ಫೋಟೋ ತೆಗೆಸಿಕೊಳ್ಳಲು ಸಿಎಸ್‌ ಸೆಂಟರ್‌, ಫೋಟೋ ಸ್ಟುಡಿಯೋಗೆ ದಾವಿಸುತ್ತಿದ್ದಾರೆ.

ನಿತ್ಯ ₹6000 ವ್ಯಾಪಾರ:


ಈ ಮೊದಲು ದಿನಕ್ಕೆ ₹ 800ರಿಂದ ₹ 1500 ವರೆಗೆ ಆಗುತ್ತಿದ್ದ ವ್ಯಾಪಾರ ಇದೀಗ ₹ 5000ರಿಂದ ₹ 6000ಕ್ಕೇರಿದೆ ಎಂದು ಫೋಟೋ ಸ್ಟುಡಿಯೋದ ಮಹಾಂತೇಶ ಹೇಳಿದರು. ಇನ್ನೂ ಗ್ರಾಮೀಣ ಭಾಗದಲ್ಲಿ ರೈತರು, ಕೂಲಿಕಾರ್ಮಿಕರು ದಿನವೀಡಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳಿ ಬರುತ್ತಾರೆ. ಆ ಬಳಿಕ ಅಗತ್ಯ ದಾಖಲೆ, ಫೋಟೋಗಾಗಿ ಸಿಎಸ್‌ ಸೆಂಟರ್‌, ಫೋಟೋ ಸ್ಟುಡಿಯೋ, ಝೆರಾಕ್ಸ್‌ ಸೆಂಟರ್‌ಗೆ ಬರುತ್ತಿರುವುದರಿಂದ ರಾತ್ರಿ 10 ಗಂಟೆ ವರೆಗೂ ಅಂಗಡಿ ಬಾಗಿಲು ತೆರೆದಿರುತ್ತಿವೆ.

ಎಸ್‌ಐಆರ್ ಪ್ರಕ್ರಿಯೆಗೆ ಪಾಸ್‌ಪೋರ್ಟ್ ಗಾತ್ರದ ಫೋಟೋ ಮಾತ್ರವಲ್ಲದೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ವಿಳಾಸದ ದಾಖಲೆ ಸೇರಿದಂತೆ ವಿವಿಧ ದಾಖಲೆಗಳ ಝೆರಾಕ್ಸ್ ಪ್ರತಿಗಳಿಗಾಗಿ ಝೆರಾಕ್ಸ್ ಅಂಗಡಿಗಳಲ್ಲೂ ಜನದಟ್ಟಣೆ ಹೆಚ್ಚಾಗಿದೆ. ಈ ಮೊದಲು ಅಂಗಡಿಗೆ 20ರಿಂದ 30ರ ವರೆಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಇದೀಗ 100ರ ಗಡಿ ದಾಟಿದೆ. ಕೆಲ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿ ಮರಳಿ ಬಂದ ಉದಾಹರಣೆಗಳು ಇವೆ ಎನ್ನುತ್ತಾರೆ ಗ್ರಾಹಕರ ನೀಲಕಂಠ ಬಡಿಗೇರ.

ಕೊರೋನಾ ಬಳಿಕ ನಮ್ಮ ಸ್ಟುಡಿಯೋಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಫೋಟೋ ತೆಗೆಸಿಕೊಳ್ಳಲು ಬರುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಿಂದ ಕಾಲ ಕಳೆಯುತ್ತಿದ್ದ ಫೋಟೋ ಗ್ರಾಫರ್‌ಗಳಿಗೆ ಎಸ್‌ಐಆರ್‌ ವರವಾಗಿದೆ.

ಕಿರಣ್ ಬಾಕಳೆ, ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ್‌ ಅಸೋಸಿಯೇಶನ್‌ ಗೌರವ ಅಧ್ಯಕ್ಷ