ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ಡಾ.ರಾಜ್‌ಕುಮಾರ್‌ ಕಲಾ ಮಂದಿರ(ಪುರಭವನ)ದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ 60 ಪೌರಕಾರ್ಮಿಕ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ನಗರಸಭೆ ಪರಿಸರ ವಿಭಾಗದ ಅಭಿಯಂತರ ಈರಣ್ಣ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಗರಸಭೆ ಮಾಜಿ ಸದಸ್ಯೆ ಪ್ರಮೀಳಾ ಮಹದೇವ್‌, ಮಹಿಳೆಯರ ಆತ್ಮಗೌರವವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಬೇಕು. ಪುರುಷ ಪ್ರಧಾನ ವ್ಯವಸ್ಥೆ ಇಂದಿಗೂ ಮಹಿಳೆಗೆ ಸಮಾನ ಅವಕಾಶಗಳನ್ನು ನೀಡುವಲ್ಲಿ ವಿಫಲವಾಗಿದೆ. ಕಾರ್ಮಿಕ ವರ್ಗದ ಮಹಿಳೆಯರ ಹೋರಾಟದ ಗೆಲವಿನ ಧ್ಯೋತಕವಾಗಿ ಮಹಿಳಾ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್‌ ಮಾತನಾಡಿ, ಲಿಂಗಾಧಾರಿತ ಸಮಾನತೆಯ ಆಶಯಗಳು ಈಡೇರಬೇಕಾದರೆ ಎಲ್ಲ ಹಂತಗಳಲ್ಲಿ ಜಾಗೃತಿ ಅಗತ್ಯ. ವರ್ಗಾಧಾರಿತವಾಗಿ ಭಿನ್ನತೆಗಳು ಉಲ್ಬಣಿಸುತ್ತಿದ್ದು, ಮಹಿಳೆಯರ ಸಮಷ್ಠಿ ಪ್ರಜ್ಞೆಗೆ ಸವಾಲಾಗಿದೆ. ಪೌರಕಾರ್ಮಿಕ ಮಹಿಳೆಯರ ಸಮರ್ಪಣಾ ಮನೋಭಾವ ನಗರ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ದುಡಿಯುವ ವರ್ಗದ ಆಶಯಗಳು ಈಡೇರಿದಾಗ ಮಾತ್ರ ಸಂಭ್ರಮ ಅರ್ಥ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್, ಮುಂಚೂಣಿ ಸ್ಥಾನಗಳಲ್ಲಿರುವ ಮಹಿಳೆಯರನ್ನು ಎಲ್ಲ ಹಂತಗಳಲ್ಲಿ ಗುರ್ತಿಸಲಾಗುತ್ತದೆ. ಆದರೆ ನೆಲಮೂಲದ ಕಾರ್ಮಿಕರನ್ನು ಗೌರವಿಸುವ ಮೂಲಕ ಸಂಘಟನೆ ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದರು.

ಸಂಘಟನಾ ಕಾರ್ಯದರ್ಶಿ ಅರವಿಂದ್, ರಾಜ್ಯ ಮುಖಂಡ ಪಿ.ವಾಸು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಧಮ್ಮ, ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ತಾಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಸಂಘಟನಾ ಕಾರ್ಯದರ್ಶಿ ಶಿವಾನಂದ್, ಕಾರ್ಯಧ್ಯಕ್ಷ ಪ್ರದೀಪ್ ಕುಮಾರ, ಉಪಾಧ್ಯಕ್ಷ ಅಂಬರೀಶ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ರೆಡ್ಡಿ, ಸಾಸಲು ಲಕ್ಷ್ಮಿನಾರಾಯಣ, ಶಿವಶಂಕರಪ್ಪ, ಪ್ರಕಾಶ್, ಕಮಲಾಕ್ಷಿ, ಗಂಗಮ್ಮ ಭಾಗವಹಿಸಿದ್ದರು.