ಕನ್ನಡಪ್ರಭ ವಾರ್ತೆ, ಮಂಡ್ಯ

ರೈತರ ತೀವ್ರ ವಿರೋಧದ ನಡುವೆಯೂ ಬೆಂಗಳೂರಿನ ಜನರ ದಾಹ ತಣಿಸಲು ಆರನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ನೀರು ಸರಬರಾಜು ಮಂಡಳಿಯಿಂದ ಟೆಂಡರ್ ಪಡೆದಿರುವ ಖಾಸಗಿ ಕಂಪನಿ ಕೆಆರ್‌ಎಸ್‌ನಲ್ಲಿ ಮಂಗಳವಾರ ಮಣ್ಣು ಪರೀಕ್ಷೆ ನಡೆಸಿದೆ. ಕೃಷಿಗೆ ಅಗತ್ಯವಿರುವ ನೀರನ್ನು ಕಸಿಯುತ್ತಿರುವ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಈಗಾಗಲೇ ಐದು ಹಂತದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದೀಗ ಆರನೇ ಹಂತದ ಯೋಜನೆಗೆ ಕೆಆರ್‌ಎಸ್‌ ಜಲಾಶಯದಿಂದಲೇ ನೀರನ್ನು ಹೊತ್ತೊಯ್ಯಲಾಗುತ್ತಿದೆ. ಈ ಕಾರಣದಿಂದ ರೈತರು ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ರೈತರಿಂದ ವಿರೋಧ ವ್ಯಕ್ತವಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ಯೋಜನೆ ಜಾರಿಗೊಳಿಸುವ ಹಠಕ್ಕೆ ಬಿದ್ದಿದೆ.

ಕಳೆದ ವಾರ ಆರನೇ ಹಂತದ ಯೋಜನೆಯ ಸರ್ವೇ ಕಾರ್ಯಕ್ಕೆ ರೈತರು ಅಡ್ಡಿಪಡಿಸಿದ್ದರು. ರೈತರ ವಿರೋಧಕ್ಕೆ ಮಣಿದು ಸರ್ವೇ ಕಾರ್ಯ‌ ಸ್ಥಗಿತಗೊಳಿಸಿ ಅಧಿಕಾರಿಗಳು ವಾಪಸ್‌ ತೆರಳಿದ್ದರು. ಇದೀಗ ಅಣೆಕಟ್ಟೆಯೊಳಗೆ ನಡೆಯುತ್ತಿರುವ ಮಣ್ಣಿನ ಪರೀಕ್ಷೆಗೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಆರ್‌ಎಸ್ ಅಣೆಕಟ್ಟೆಯೊಳಗೆ ಮಣ್ಣು ಪರೀಕ್ಷೆಗೆ ತಂದಿದ್ದ ಯಂತ್ರೋಪಕರಣಗಳನ್ನು ರೈತರು ತೆರವುಗೊಳಿಸಿದರು. ರೈತರ ವಿರೋಧಕ್ಕೆ ಮಣಿದು ಖಾಸಗಿ ಕಂಪನಿಯವರು ಮಣ್ಣು ಪರೀಕ್ಷೆ‌ ಕಾರ್ಯವನ್ನು ರದ್ದುಗೊಳಿಸಿದರು.


ನಾಳೆಯಿಂದ ನಾಲೆಗಳಿಗೆ ನೀರು: ಪಿ.ರವಿಕುಮಾರ್

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಜು.೧೬ರಿಂದ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ತಿಳಿಸಿದ್ದಾರೆ.ಬುಧವಾರ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ನೀರಿನ ಸಂಬಂಧ ಚರ್ಚಿತವಾಗುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀರು ಹರಿಸಬೇಕಾಗುತ್ತದೆ. ರೈತರ ಕಷ್ಟ ಏನೆಂಬುದು ನಮಗೂ ಗೊತ್ತಿದೆ. ಈ ಬಾರಿ ಮಳೆ ಕೊರತೆ ಎದುರಾಗಿದ್ದರಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಿದೆ ಎಂದು ಹೇಳಿದ್ದಾರೆ.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀರು ಹರಿಸುವ ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿಯೊಂದಿಗೂ ಈ ವಿಷಯ ಚರ್ಚಿಸಲಾಗಿದ್ದು ಅವರೂ ಒಪ್ಪಿದ್ದಾರೆ. ಸಿಡಬ್ಲ್ಯೂಎಂಎ ಸಭೆ ಮುಗಿದ ನಂತರ ನಾಲೆಗಳಿಗೆ ನೀರು ಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದರು.