ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕನ್ನಂಬಾಡಿ ಅಣೆಕಟ್ಟೆ ಹಿನ್ನೀರಿನಲ್ಲಿ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ಮಣ್ಣು ಪರೀಕ್ಷೆ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಭೂಮಿ ತಾಯಿ ಹೋರಾಟ ಸಮಿತಿ ಒತ್ತಾಯಿಸಿದರು.ತಾಲೂಕಿನ ಕೆಆರ್ಎಸ್ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುಮನಾ ಅವರನ್ನು ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಹಿರಿಯ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಸದಸ್ಯರು ಭೇಟಿ ಮಾಡಿ ಆಗ್ರಹಿಸಿದರು.
ನಂತರ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿ ನಿಗಮದ ಗಮನಕ್ಕೆ ಬಾರದೆ, ಮಣ್ಣು ಪರೀಕ್ಷೆ ಹೆಸರಿನಲ್ಲಿ ಯಂತ್ರೋಪಕರಗಳನ್ನು ಬಳಸಿ ಕಾನೂನು ಬಾಹಿರದಂತ ವಿದ್ವಂಸಕ ಕೃತ್ಯ ಮಾಡುತ್ತಿದ್ದಾರೆ ಎಂದು ದೂರಿದರು.ಅಣೆಕಟ್ಟೆ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಅಣೆಕಟ್ಟೆ ಭದ್ರತೆಗೆ ದಕ್ಕೆ ತರುವ ಕೃತ್ಯ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದೆ ತಮ್ಮ ಇಲಾಖೆಯಿಂದ ಅದನ್ನು ತಡೆದು ಅವರನ್ನು ಸ್ಥಳದಿಂದ ಕಳುಹಿಸಿಕೊಟ್ಟಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವುದು ತಮ್ಮ ಕರ್ತವ್ಯ. ತಕ್ಷಣ ಸಂಬಂಧಿಸಿದವರ ವಿರುದ್ಧ ದೂರು ನೀಡಬೇಕು. ಜೊತೆಗೆ ಇಂತಹ ಕಾನೂನು ಬಾಹಿರ ಕೆಲಸ ಮತ್ತೆ ನಡೆಯದಂತೆ ಕ್ರಮ ವಹಿಸುವಂತೆ ಆಗ್ರಹಿಸಿದರು.
ನಂತರ ಎಇಇ ಸುಮನ್ನ ಮನವಿ ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಹೊಸಉಂಡವಾಡಿ ಮಹದೇವು, ಕೆಆರ್ಎಸ್ ವಸಂತ, ಕೆಂಗಾರ್ಕೊಪ್ಪಲು ರಾಮಕೃಷ್ಣ, ಚಿಂದಗಿರಿಕೊಪ್ಪಲು ಕೆಂಪೇಗೌಡ ಸೇರಿದಂತೆ ಇತರರು ಇದ್ದರು.ದೇವರಾಜು ಮಾರ್ಕಾಲು ಪ್ರಶಸ್ತಿಗೆ ಆಯ್ಕೆ
ಕನ್ನಡಪ್ರಭ ವಾರ್ತೆ ಮಂಡ್ಯಮೈಸೂರು ಜಿಲ್ಲೆ ಟಿ.ನರಸೀಪುರದ ಬೆಳಕು ಸೇವಾ ಫೌಂಡೇಷನ್ನ ಕೊಡಮಾಡುವ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿಗೆ ಮಂಡ್ಯದ ಅಂತಾರಾಷ್ಟ್ರೀಯ ಚಿತ್ರಕಲಾವಿದ ದೇವರಾಜು ಮಾರ್ಕಾಲು ಅವರು ಆಯ್ಕೆಯಾಗಿದ್ದಾರೆ. ದೇವರಾಜು ಅವರು ಚಿತ್ರಕಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಮೈಸೂರು ವಿ.ವಿ.ಯಲ್ಲಿ ಬಿ.ಎಫ್.ಎ.ಪದವಿ ಪಡೆದ ಜಿಲ್ಲೆಯ ಪ್ರಥಮ ಪದವೀಧರ. ಕಳೆದ ೩೫ ವರ್ಷಗಳಿಂದಲೂ ಚಿತ್ರಕಲೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚಿತ್ರ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ದೇವರಾಜು ಅವರಿಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ಸಾಧನೆಯನ್ನು ಗಮನಿಸಿದ ಕರ್ನಾಟಕ ಸರ್ಕಾರ ಇವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿ ನೇಮಿಸಿ ಕಲಾ ಕ್ಷೇತ್ರದಲ್ಲಿ ಮತ್ತಷ್ಟು ಸೇವೆ ಮಾಡಲು ಅವಕಾಶ ಕಲ್ಪಿಸಿದೆ. ಜು. ೧೯ರಂದು ನಡೆಯಲಿರುವ ಬೆಳಕು ಸೇವಾ ಫೌಂಡೇಷನ್ನ ಮೂರನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದೇವರಾಜು ಅವರ ಕಲಾಸೇವೆಯ ಸಾಧನೆಗಾಗಿ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.