ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಜಾತ್ಯತೀತ ಜನತಾದಳ ಪಕ್ಷವು ಹಿಂದಿನಿಂದಲೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದೆ. ಇದರಿಂದಾಗಿಯೇ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಜನರ ಹೃದಯದಲ್ಲಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.ತಾಲೂಕಿನ ಸಾರಂಗಿ ಗ್ರಾಮದ ಕೆರೆ ಏರಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯ 70 ಲಕ್ಷ ರು.ಗಳ ಅನುದಾನದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಜೆಡಿಎಸ್ ಪಕ್ಷದ ಮೇಲೆ ಜನ ಇಟ್ಟಿರುವ ನಂಬಿಕೆ ಮತ್ತು ವಿಶ್ವಸವೇ ನನ್ನನ್ನು ಕ್ಷೇತ್ರದ ಶಾಸಕನನ್ನಾಗಿ ಮಾಡಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಾರಂಗಿ ತಾಲೂಕಿನ ಮಾದರಿ ಗ್ರಾಮಗಳಲ್ಲಿ ಒಂದು ಪ್ರಮುಖ ಗ್ರಾಮ. 35 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಸರ್ಕಾರಿ ಆಸ್ಪತ್ರೆಯನ್ನು ಜೆಡಿಎಸ್ ಶಾಸಕರಾಗಿದ್ದ ಮಾಜಿ ಸ್ಪೀಕರ್ ಕೃಷ್ಣ ಅವರು ನೀಡಿದ್ದಾರೆ ಎಂದರು.ಕೆರೆಕಟ್ಟೆಗಳು ನಮ್ಮ ರೈತರ ಜೀವನಾಡಿಯಾಗಿವೆ. ಅವುಗಳನ್ನು ಹಿರಿಯರು ನಿರ್ಮಿಸಿ ರಕ್ಷಣೆ ಮಾಡಿಕೊಂಡು ಬಂದಿದ್ದು, ಹಾಗಾಗಿ ನಾವೂ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಳ್ಳದೇ ಉಳಿಸಿಕೊಳ್ಳಬೇಕು. ಕೆರೆಕಟ್ಟೆಗಳಲ್ಲಿ ನೀರು ತುಂಬಿದ್ದರೆ ಭೂಮಿ ಅಂತರ್ಜಲ ಹೆಚ್ಚುತ್ತದೆ. ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ವೃದ್ದಿಯಾಗುತ್ತದೆ. ಇದರಿಂದ ರೈತರಿಗೆ ಬೇಸಾಯ, ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಸಾರಂಗಿ ಗ್ರಾಮದ ಕೆರೆ ಏರಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 70 ಲಕ್ಷ ರು. ಅನುದಾನವನ್ನು ನೀಡಲಾಗಿದೆ. ರೈತರು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು. ಸಾರಂಗಿ ಕೆರೆ ಏರಿ ಮೇಲೆ ಎತ್ತಿನ ಬಂಡಿಗಳು, ರೈತರ ಟ್ರ್ಯಾಕ್ಟರ್ ಗಳು ಓಡಾಡುವ ಕಾರಣ, ಗುತ್ತಿಗೆದಾರರು ಹಾಗೂ ಎಂಜಿನಿಯರ್ ಸ್ಥಳದಲ್ಲಿ ಖುದ್ದು ಹಾಜರಿದ್ದು, ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸದರಿ ಕೆರೆ ಏರಿಗೆ ತಡೆಗೋಡೆ ನಿರ್ಮಿಸಿಕೊಡಲು ಅಗತ್ಯ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದರು.
ಗ್ರಾಮ ದೇವತೆ ಕೆರೆಕೋಡಿಯಮ್ಮ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿದ್ದು, ಇದಕ್ಕೆ ನನ್ನ ಶಾಸಕರ ನಿಧಿ, ವೈಯಕ್ತಿಕ ದೇಣಿಗೆ ನೀಡುತ್ತೇನೆ. ಜೊತೆಗೆ ಕೇಂದ್ರ ಸಚಿವ, ಸಂಸದ ಎಚ್.ಡಿ.ಕುಮಾರಣ್ಣರ ಸಂಸತ್ ನಿಧಿ, ಸೇರಿದಂತೆ ನಮ್ಮ ಪಕ್ಷದ ಹಾಗೂ ಜಿಲ್ಲೆಯ ವಿವಿಧ ವಿಧಾನ ಪರಿಷತ್ ಸದಸ್ಯರುಗಳ ಅನುದಾನ ಕೊಡಿಸುವ ಭರವಸೆ ನೀಡಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಕೊರಟೀಕೆರೆ ದಿನೇಶ್, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ಸಾಮಿಲ್ ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಸ್ನೇಕ್ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯರಾದ ರಮೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಮೆಣಸ ಮಧು, ಮುಖಂಡರಾದ ಬೇಲದಕೆರೆ ನಂಜೇಗೌಡ, ಕಿಕ್ಕೇರಿ ಕಾಯಿ ಮಂಜೇಗೌಡ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೋಜ್ ಕುಮಾರ್, ಜೂನಿಯರ್ ಎಂಜಿನಿಯರ್ ಸುಪ್ರಿತ್ ಕುಮಾರ್ ಸೇರಿದಂತೆ ಸಾರಂಗಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.