ಸಾರಾಂಶ
ತಾಲೂಕಿನಾದ್ಯಂತ ಬಿತ್ತನೆಗೆ ಯೋಗ್ಯವಾದ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಚನ್ನಗಿರಿ: ತಾಲೂಕಿನಾದ್ಯಂತ ಬಿತ್ತನೆಗೆ ಯೋಗ್ಯವಾದ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ವಾಡಿಕೆಯಂತೆ ಜೂನ್ 16ಕ್ಕೆ 179 ಮಿ.ಮೀ. ಮಳೆ ಆಗಬೇಕಾಗಿತ್ತು. ವಾಸ್ತವವಾಗಿ 246 ಮಿ.ಮೀ ಮಳೆಯಾಗಿದ್ದು, 77 ಮಿ.ಮೀ. ಹೆಚ್ಚುವರಿ ಮಳೆಯಾಗಿದೆ. ಈಗಾಗಲೇ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 100 ಹೆಕ್ಟೇರ್ ಹತ್ತಿ, 55 ಹೆಕ್ಟೇರ್ ಸೋಯಾಬಿನ್, 80 ಹೆಕ್ಟೇರ್ ತೊಗರಿ, 100 ಹೆಕ್ಟೇರ್ ಪ್ರದೇಶದಲ್ಲಿ ಹಲಸಂದೆ ಬಿತ್ತನೆ ನಡೆದಿದೆ. ತಾಲೂಕಿನಲ್ಲಿ ಅಗತ್ಯ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳ ದಾಸ್ತಾನು ಇದೆ ಎಂದಿದ್ದಾರೆ.ತಾಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಇದೆ. ರೈತರು ಈ ಹಿಂದೆ ಎತ್ತುಗಳ ಸಹಾಯದಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದರು. ಪ್ರಸಕ್ತ ದಿನಗಳಲ್ಲಿ ಹಿಂದಿನ ಬೇಸಾಯ ಪದ್ಧತಿ ಕ್ರಮಗಳು ನಶಿಸುತ್ತಿವೆ. ಯಂತ್ರಗಳ ಮೂಲಕ ಜಮೀನುಗಳ ಉಳುಮೆಯಿಂದ ಹಿಡಿದು ಬಿತ್ತನೆ, ಕಳೆ ತೆಗೆಯುವುದು, ಬೆಳೆ ಕಟಾವು, ಒಕ್ಕಣೆಯಂಥ ಎಲ್ಲ ಚಟುವಟಿಕೆಗಳಿಗೆ ರೈತರು ಬಹುಪಾಲು ಯಂತ್ರಗಳನ್ನೇ ಬಳಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ರೈತರು ಕೃಷಿ ಬೇಸಾಯಕ್ಕಾಗಲಿ, ಬೆಳೆಗಳಿಗೆ ಬರಬಹುದಾದ ರೋಗ ಹತೋಟಿ ಕ್ರಮಗಳ ಬಗ್ಗೆ ಔಷಧಿ ಸಿಂಪರಣೆ, ರಸಗೊಬ್ಬರದ ಬಳಕೆ ಇಂತಹ ಕೃಷಿ ಬೆಳೆಗೆ ಸಂಬಂಧಪಟ್ಟಂತೆ ರೈತರಿಗೆ ಮಾಹಿತಿ ನೀಡಲು ಆರು ರೈತ ಸಂಪರ್ಕ ಕೇಂದ್ರಗಳಾದ ಚನ್ನಗಿರಿ ಕಸಬಾ, ಸಂತೆಬೆನ್ನೂರು, ದೇವರಹಳ್ಳಿ, ಪಾಂಡೋಮಟ್ಟಿ, ಬಸವಾಪಟ್ಟಣ, ತ್ಯಾವಣಿಗೆ ಈ ಗ್ರಾಮಗಳಲ್ಲಿ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.- - -
-17ಕೆಸಿಎನ್ಜಿ1:ದೇವರಹಳ್ಳಿ ಜಮೀನಿನಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರು.