ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಹುಬ್ಬಳ್ಳಿಯ ಕೆಎಂಸಿಆರ್ಐನ ಬಹುವಿಭಾಗೀಯ ಸಂಶೋಧನಾ (ಎಂಆರ್ಯು) ಘಟಕ ಈ ಹಿಂದೆ ಧಾರವಾಡ ಜಿಲ್ಲೆಯಾದ್ಯಂತ ಸಂಶೋಧನಾ ಅಧ್ಯಯನ ಕೈಗೊಂಡಿತ್ತು. ಬಳಿಕ, ಇದೇ ಅಧ್ಯಯನದ ಆಧಾರದ ಮೇಲೆ ಕೆಎಂಸಿಆರ್ಐ, ಕೇಂದ್ರ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆ ಜೊತೆ ಜಂಟಿಯಾಗಿ ದೇಶದ 13 ರಾಜ್ಯ ಹಾಗೂ ಕರ್ನಾಟಕದ 25 ಜಿಲ್ಲೆಗಳಲ್ಲಿ ಈ ಸಂಬಂಧ ಸಂಶೋಧನಾ ಅಧ್ಯಯನ ನಡೆಸಿದ್ದು, ಅಧ್ಯಯನದ ವೇಳೆ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ದೇಶದಲ್ಲಿ ಈ ರೀತಿಯ ಅಧ್ಯಯನ ನಡೆದಿದ್ದು ಇದೇ ಮೊದಲು ಎಂಬುದು ವಿಶೇಷ.
ಮಕ್ಕಳು ಆಟೋಟಗಳಿಂದ ದೂರ ಇರುವುದರಿಂದ ಕಾಣಿಸಿಕೊಳ್ಳುವ ಬೊಜ್ಜು, ಹದಿಹರೆಯದ ವಯಸ್ಸಿನಲ್ಲೇ ಧೂಮಪಾನ-ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುವುದು ಹೃದಯಾಘಾತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂಬ ಸಂಗತಿ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ.13 ರಾಜ್ಯ, ರಾಜ್ಯದ 25 ಜಿಲ್ಲೆ ಆಯ್ಕೆ:
ಅಧ್ಯಯನದ ವೇಳೆ ರಾಜ್ಯದ 25 ಜಿಲ್ಲೆ, ದೇಶದ 13 ರಾಜ್ಯಗಳ 8 ರಿಂದ 30ರ ಪ್ರಾಯದ 347 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದವರೂ ಇದ್ದಾರೆ. ಇವರೆಲ್ಲರ ಹೃದಯದ ರಕ್ತನಾಳದ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಚಯಾಪಚಯ ವೈಪರೀತ್ಯ ಮತ್ತು ರಕ್ತನಾಳಗಳ ಒಳಪದರ ಹಾನಿಯ ಆರಂಭಿಕ ಲಕ್ಷಣಗಳು ಇವರಲ್ಲಿ ಕಂಡು ಬಂದಿವೆ. ಇವೆಲ್ಲ ಹೃದಯಾಘಾತಕ್ಕೆ ಕಾರಣವಾಗುವ ಪ್ರಕ್ರಿಯೆಗಳಾಗಿವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ.70ರಷ್ಟು ಮಕ್ಕಳು ಹೃದಯದ ಸಮಸ್ಯೆಗೆ ತುತ್ತಾಗುವ ಸಂಭವವಿರುವುದು ಬಯಲಾಗಿದೆ. ಬದಲಾದ ಜೀವನ ಶೈಲಿ, ಆಟೋಟಗಳಿಂದ ದೂರ ಉಳಿದಿದ್ದರಿಂದ ಬೊಜ್ಜು ಕಾಣಿಸಿಕೊಳ್ಳುವುದು, ಆಲ್ಕೋಹಾಲ್, ಧೂಮಪಾನ, ತಂಬಾಕು, ಜಂಕ್ ಫುಡ್ ಸೇವನೆಯಿಂದ ಅವರಲ್ಲಿನ ಎಂಡೋಥೀಲಿಯಂ, ಅಂದರೆ ಅಪಧಮನಿಯ ಒಳಪದರು ಹಾಳಾಗುತ್ತಿರುವುದು ಕಂಡು ಬಂದಿದೆ. ಹೈಪರ್ಹೋಮೋಸಿಸ್ಟಿನೆಮಿಯಾ ಲಕ್ಷಣದಲ್ಲಿ ಹೆಚ್ಚಳ, ಹೈ-ಸೆನ್ಸಿಟಿವಿಟಿ, ಸಿ-ರಿಯಾಕ್ಟಿವ್ ಪ್ರೊಟಿನ್ (ಎಚ್ ಎಸ್-ಸಿಆರ್ಪಿ) ಹದಿಹರೆಯದವರಲ್ಲಿ ಶೇ.28.24 ಇದ್ದು, ಇದು ಹೃದಯಾಘಾತದ ಆರಂಭಿಕ ಹಂತ ತಲುಪಿದೆ ಎಂದು ಅಧ್ಯಯನ ತಿಳಿಸಿದೆ. ರಕ್ತದ ಒಳಪದರು ಹಾಳಾದರೆ 10-15 ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಮಸ್ಯೆ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚಿರುತ್ತದೆ ಎಂಬುದು ಬೆಳಕಿಗೆ ಬಂದಿದೆ.
8 ರಿಂದ 14 ವರ್ಷದ ಶಾಲಾ ಮಕ್ಕಳು ಹಾಗೂ 18 ರಿಂದ 30 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಎರಡು ಹಂತಗಳಲ್ಲಿ ಅಧ್ಯಯನ ಮಾಡಲಾಗಿದೆ. ಶಾಲಾ ಮಕ್ಕಳಲ್ಲಿ ಶೇ.70ಕ್ಕಿಂತ ಹೆಚ್ಚು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಶೇ.75ಕ್ಕಿಂತ ಹೆಚ್ಚು ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಅಂಶಗಳು ಕಂಡು ಬಂದಿವೆ.ವರದಿ ಸಲ್ಲಿಸಲು ಸಿದ್ಧತೆ:
ಈ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರಕ್ಕೂ ಸಲ್ಲಿಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲಿಯೇ ಜಿಲ್ಲಾಡಳಿತ ಸಭೆ ಕರೆದು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಜತೆ ಚರ್ಚಿಸಿ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದೆ.ಪರಿಹಾರವೇನು?:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಂಸಿಆರ್ಐನ ಎಂಆರ್ಯು ನೋಡಲ್ ಅಧಿಕಾರಿ ಡಾ.ರಾಮ ಕೌಲಗುಡ್, ಇದು ಜೀವನ ಶೈಲಿಯ ಮೇಲೆ ಅವಲಂಬಿತವಾಗಿದ್ದು, ಆಹಾರ ಪದ್ಧತಿ ಬದಲಿಸಬೇಕಿದೆ. ಮಕ್ಕಳ ಚಟುವಟಿಕೆ ಕಡಿಮೆಯಾಗಿದ್ದು, ಮಾನಸಿಕ ಒತ್ತಡಕ್ಕೆ ಕಾರಣವಾಗಲಿದೆ. ಮಕ್ಕಳ ಶಾರೀರಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಅವರಿಗೆ ಮೊಬೈಲ್ ಬಳಕೆ ಮಿತಗೊಳಿಸಬೇಕು. ಮಕ್ಕಳಿಗೆ ಪೋಷಕರು ಅಂಕ ಪಡೆಯಲು ಒತ್ತಡ ಹಾಕುವುದರಿಂದ ಸರಿಯಾದ ನಿದ್ದೆ ಇಲ್ಲದೆ ಇರುವುದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.ಕೋಟ್...
ಈ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿಕ್ಕಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಲು ಒಂದು ಸಂಶೋಧನೆ ಮಾಡಲಾಗಿತ್ತು. ಇದೇ ಅಧ್ಯಯನದ ಆಧಾರದ ಮೇಲೆ ದೇಶಾದ್ಯಂತ ಅಧ್ಯಯನ ಮಾಡಲಾಗಿದೆ. ಶೀಘ್ರದಲ್ಲೇ ಸರ್ಕಾರಕ್ಕೂ ವರದಿ ಸಲ್ಲಿಸಲಾಗುವುದು. ಅಧ್ಯಯನಕ್ಕೆ ಹಲವು ವೈದ್ಯಕೀಯ ಕಾಲೇಜುಗಳು ಸಾಥ್ ನೀಡಿದ್ದವು.-ಡಾ। ರಾಮ ಕೌಲಗುಡ್, ಎಂಆರ್ಯು ನೋಡಲ್ ಅಧಿಕಾರಿ ಕೆಎಂಸಿಆರ್ಐ.