ಶೃಂಗೇರಿ ಮುಂದುವರಿದ ಮಳೆಯ ಆರ್ಭಟ: ತುಂಬಿ ಹರಿಯುತ್ತಿರುವ ನದಿಗಳು

| Published : Jun 10 2024, 12:31 AM IST

ಶೃಂಗೇರಿ ಮುಂದುವರಿದ ಮಳೆಯ ಆರ್ಭಟ: ತುಂಬಿ ಹರಿಯುತ್ತಿರುವ ನದಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ: ತಾಲೂಕಿನಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಭಾನುವಾರವೂ ಎಡಬಿಡದೆ ಭಾರೀ ಮಳೆ ಸುರಿಯಿತು. ಶನಿವಾರ ರಾತ್ರಿಯಿಂದ ಆಬ್ಬರಿಸಲಾರಂಭಿಸಿದ ಮಳೆರಾಯ ಭಾನುವಾರ ಸಂಜೆ ಯವರೆಗೂ ಬಿಡುವು ನೀಡದೇ ಸುರಿದ ಪರಿಣಾಮ ತುಂಗಾ ನದಿ ಸಹಿತ ಉಪನದಿಗಳೆಲ್ಲ ಮೈದುಂಬಿ ಹರಿಯುತ್ತಿವೆ.

ಶೃಂಗೇರಿ: ತಾಲೂಕಿನಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಭಾನುವಾರವೂ ಎಡಬಿಡದೆ ಭಾರೀ ಮಳೆ ಸುರಿಯಿತು. ಶನಿವಾರ ರಾತ್ರಿಯಿಂದ ಆಬ್ಬರಿಸಲಾರಂಭಿಸಿದ ಮಳೆರಾಯ ಭಾನುವಾರ ಸಂಜೆ ಯವರೆಗೂ ಬಿಡುವು ನೀಡದೇ ಸುರಿದ ಪರಿಣಾಮ ತುಂಗಾ ನದಿ ಸಹಿತ ಉಪನದಿಗಳೆಲ್ಲ ಮೈದುಂಬಿ ಹರಿಯುತ್ತಿದೆ.

ಮೇ ತಿಂಗಳ ಎರಡನೇ ವಾರದಿಂದ ಆರಂಭಗೊಂಡ ಮಳೆ ಆಗಾಗ ಬಿಡುವು ನೀಡಿ ಸುರಿಯುತ್ತಿದ್ದರೂ ಕಳೆದ ನಾಲ್ಕೈದು ದಿನಗಳಿಂದ ಬಿಡುವಿಲ್ಲದೇ ಅಬ್ಬರಿಸುತ್ತಿದೆ. ಬಿಸಿಲ ಧಗೆಯಲ್ಲಿ ಬತ್ತಿಹೋಗಿದ್ದ ಕೆರೆ, ಕಾಲುವೆಗಳು, ಹಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಶನಿವಾರದಿಂದ ಮಳೆಯ ಚಿತ್ರಣವೇ ಬೇರೆಯಾಗಿದೆ.

ತುಂಗಾನದಿ ಉಗಮ ಸ್ಥಳವಾದ ಪಶ್ಚಿಮಘಟ್ಟಗಳ ತಪ್ಪಲಿನ ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಬಿಸಿಲಿನ ತಾಪದಿಂದ ಕಾಲುವೆಯಂತೆ ಹರಿಯುತ್ತಿದ್ದ ಮಲೆನಾಡ ಜೀವನದಿ ತುಂಗೆ ಕಳೆದೆರೆಡು ದಿನಗಳಿಂದ ಮೈದುಂಬಿ ಹರಿಯುತ್ತಿದೆ. ಈಗಾಗಲೇ ನೀರಿನ ಮಟ್ಟ ಹೆಚ್ಚಳ ವಾಗುತ್ತಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯಲಿದೆ.

ಕೃಷಿ ಚಟುವಟಿಕೆಗಳು, ಅಡಕೆ ತೋಟಗಳಲ್ಲಿ ಔಷಧ ಸಿಂಪಡಣೆ ಕಾರ್ಯ ಕಳೆದ ಕೆಲದಿನಗಳಿಂದ ಭರದಿಂದ ನಡೆಯುತ್ತಿತ್ತು. ಆದರೆ ಕಳೆದೆರೆಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷಿ ಚಟುವಟಿಕೆ ಗಳಿಗೆ ಹಿನ್ನೆಡೆಯಾಗಿದೆ. ಕಳೆದ ಬಾರಿ ಜೂನ್‌ ತಿಂಗಳು ಕಳೆದರೂ ಮಳೆಯಾಗಿರಲಿಲ್ಲ. ಆದರೆ ಈ ಬಾರಿ ಮೇ ಎರಡನೇ ವಾರದಿಂದಲೇ ಮಳೆ ಆರಂಭಗೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ಮಳೆ ಪ್ರಮಾಣ ಜಾಸ್ತಿಯಾಗಿದೆ.

ಮಳೆ ಆರ್ಭಟದ ನಡುವೆಯೂ ಶೃಂಗೇರಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಶ್ರೀಮಠ, ನರಸಿಂಹವನ, ಶೃಂಗೇರಿ ಪಟ್ಟಣ, ಬಸ್‌ನಿಲ್ದಾಣ ಎಲ್ಲೆಡೆ ಪ್ರವಾಸಿಗರ ದಂಡೇ ಕಂಡುಬರುತ್ತಿದೆ. ವಾರದ ಕೊನೆ ದಿನವಾದ ಭಾನುವಾರ ಪಟ್ಟಣದಲ್ಲಿ ಜನಸಾಗರವೇ ಕಂಡುಬಂದಿತು. ಶನಿವಾರ ಹಾಗೂ ಭಾನುವಾರ ರಜೆ ಇದ್ದರಿಂದ ಶೃಂಗೇರಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿತ್ತು. ಭಾನುವಾರ ಸಂಜೆ ವರೆಗೂ ಮಳೆಯ ಆರ್ಭಟ ಮುಂದುವರೆದಿತ್ತು.

9 ಶ್ರೀ ಚಿತ್ರ 1-ಶೃಂಗೇರಿ ಶ್ರೀಮಠದ ಆವರಣದಲ್ಲಿ ಮಳೆಯ ನಡುವೆಯೂ ಭಕ್ತಗಣ ಗಿಜಿಗುಡುತ್ತಿರುವ ನೋಟ