₹101.61 ಕೋಟಿ ಪರಿಹಾರ ಹಣ ರೈತರ ಖಾತೆಗೆ ಜಮೆ: ಡೀಸಿ

| Published : Jun 10 2024, 12:31 AM IST

ಸಾರಾಂಶ

ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ಕಟಾವು, ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ಬೆಳೆ ರಾಶಿನಂತರ ಹಾನಿ ಪ್ರಕರಣಗಳಲ್ಲಿ ಒಟ್ಟಾರೆ 88,644 ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 101.619 ಕೋಟಿ ರು. ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ‌ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ಕಟಾವು, ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ಬೆಳೆ ರಾಶಿನಂತರ ಹಾನಿ ಪ್ರಕರಣಗಳಲ್ಲಿ ಒಟ್ಟಾರೆ 88,644 ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 101.619 ಕೋಟಿ ರು. ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ‌ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಬೆಳೆ ಕಟಾವು ಆಧಾರದ ಮೇಲೆ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸೋಯಾಬೀನ್‌ ಹಾಗೂ ತೊಗರಿ ಬೆಳೆಗಳೆಗೆ ಜಿಲ್ಲೆಯ 69,829 ರೈತರ ಬ್ಯಾಂಕ್ ಖಾತೆಗೆ 94.558 ಕೋಟಿ ರು., ಸ್ಥಳೀಯ ಪ್ರಕೃತಿ ವಿಕೋಪದಡಿ 18,433 ರೈತರ ಬ್ಯಾಂಕ್ ಖಾತೆಗೆ 6.242 ಕೋಟಿ ರು. ವಿಮೆ ಮೊತ್ತ ಹಾಗೂ ಬೆಳೆ ರಾಶಿ ಸಂದರ್ಭದಲ್ಲಿ ಆಗುವ ಹಾನಿ ಘಟಕದಡಿ 382 ರೈತರ ಬ್ಯಾಂಕ ಖಾತೆಗೆ 81.927 ಲಕ್ಷ ರು. ವಿಮೆ ಮೊತ್ತ ಪಾವತಿಸಲಾಗಿದೆ. ಹೀಗೆ ಒಟ್ಟು 88,644 ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 101.619 ಕೋಟಿ ರು. ಬೆಳೆ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ. ಪರಿಹಾರ ಹಣ ಖಾತೆಗೆ ಜಮೆ ಪ್ರಕ್ರಿಯೆ ಕಳೆದೆರಡು ದಿನಗಳಿಂದ ನಿರಂತರ ನಡೆಯುತ್ತಿದ್ದು, ಒಂದೆರಡು ದಿನದಲ್ಲಿ ಉಳಿದ ರೈತರ ಖಾತೆಗೂ ಹಣ ಜಮೆಯಾಗಲಿದೆ ಎಂದು ಹೇಳಿದ್ದಾರೆ.

ಇದರಲ್ಲಿ 281 ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ ಸಂಖ್ಯೆ ಜೋಡನೆಯಾಗದ ಕಾರಣ 35.95 ಲಕ್ಷ ರು. ಪರಿಹಾರ ರೈತರ ಖಾತೆಗೆ ಜಮೆಯಾಗಿರುವುದಿಲ್ಲ. ಇಂತಹ ರೈತರ ವಿವರ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು, ಸಂಬಂಧಪಟ್ಟ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡಿಸಿದಲ್ಲಿ ಬೆಳೆ ವಿಮೆ ಪರಿಹಾರ ಜಮೆಯಾಗಲಿದೆ ಎಂದಿದ್ದಾರೆ.

ಇನ್ನೂ ಕಳೆದ ಡಿಸೆಂಬರ-2023 ಮಾಹೆಯಲ್ಲಿ ಜಿಲ್ಲೆಯಲ್ಲಿ ಮಳೆ ಆಶ್ರಿತ ತೊಗರಿ ಬೆಳೆ ವಿಮೆ ಮಾಡಿಸಿದ 1,20,724 ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 83.63 ಕೋಟಿ ರು. ಮಧ್ಯಂತರ ಪರಿಹಾರ ಜಮೆ ಮಾಡಲಾಗಿತ್ತು. ಒಟ್ಟಾರೆಯಾಗಿ ಕಳೆದ 2023-24ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ 185.259 ಕೋಟಿ ರು. ಪರಿಹಾರ ಜಮೆಯಾಗಿದೆ.

ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,62,071 ರೈತರು, 1,86,850 ಹೆಕ್ಟರ್‌ ಪ್ರದೇಶ ಬೆಳೆ ವಿಮೆ ಯೋಜನೆಯಡಿ ನೊಂದಾಯಿಸಿಕೊಂಡಿದ್ದು, ಇದಕ್ಕಾಗಿ ವಿಮಾ‌ ಸಂಸ್ಥೆಗೆ ವಿಮಾ‌ ಕಂತಿನ ರೂಪದಲ್ಲಿ 160.30 ಕೋಟಿ ರು. ಸಂದಾಯ ಮಾಡಲಾಗಿತ್ತು. ಇದರಲ್ಲಿ ರೈತರ ವಂತಿಕೆ 18.47 ಕೋಟಿ ರು., ರಾಜ್ಯ ಸರ್ಕಾರದ ವಂತಿಕೆ 70.92 ಕೋಟಿ ರು. ಹಾಗೂ ಕೇಂದ್ರ ಸರ್ಕಾರದ ವಂತಿಕೆ 70.92 ಕೋಟಿ ರು. ಸೇರಿದೆ.ನೇರವಾಗಿ ರೈತರ ಖಾತೆಗೆ ಪರಿಹಾರ ಜಮೆ: ಪ್ರಿಯಾಂಕ್‌

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಕೂಡಾ ಹೇಳಿಕೆ ನೀಡಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 88,644 ರೈತರಿಗೆ ರು. 101.619 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು ಆಗಿದೆ ಎಂದಿದ್ದಾರೆ. ಈಗಾಗಲೇ ಡಿಸೆಂಬರ್‌ 2023ರ ಮಾಹೇಯಲ್ಲಿ ಜಿಲ್ಲೆಯಲ್ಲಿ ಮಳೆ ಆಶ್ರಿತ ತೊಗರಿ ಬೆಳೆ ವಿಮೆ ಮಾಡಿಸಿದ 1,20,724 ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರು. 83.63 ಕೋಟಿ ಮಧ್ಯಂತರ ಪರಿಹಾರ ಜಮೆ ಮಾಡಲಾಗಿರುತ್ತದೆ. ಒಟ್ಟಾರೆಯಾಗಿ ಕಲಬುರಗಿ ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬ್ಯಾಂಕ ಖಾತೆಗೆ ನೇರವಾಗಿ ಡಿ.ಬಿ.ಟಿ ಮೂಲಕ ರು. 185.249 ಕೋಟಿ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.