ಶ್ರೀರಂಗಪಟ್ಟಣ: ಕಪ್ಪು ಪಟ್ಟಿ ಧರಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ

| Published : Nov 03 2025, 02:03 AM IST

ಶ್ರೀರಂಗಪಟ್ಟಣ: ಕಪ್ಪು ಪಟ್ಟಿ ಧರಿಸಿ ಮುಸ್ಲಿಂ ಮುಖಂಡರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ಬಂದ ಕೋಟ್ಯಂತರ ರು. ಅನುದಾನ ದುರ್ಬಳಕೆ ಮಾಡಿಕೊಂಡಿರುವುದಾಗಿಯೂ ಗಂಭೀರವಾಗಿ ಆರೋಪ ಮಾಡಿದ ಮುಖಂಡರು, ಗುಂಬಸ್ ಗೆ ಸಾಕಷ್ಟು ವಕ್ಫ್ ಆದಾಯ ಬರುತ್ತಿದ್ದರೂ ಗುಂಬಸ್ ನಲ್ಲಿ ಮೂಲ ಸೌಕರ್ಯದ ಕೊರತೆ ಇದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಟಿಪ್ಪು ವಕ್ಫ್ ಎಸ್ಟೇಟ್ ಕಾರ್ಯದರ್ಶಿ ಇರ್ಫಾನ್ ಅವರು ಬೈಲಾ ಉಲ್ಲಂಘಿಸಿ ಕಳೆದ 20 ವರ್ಷಗಳಿಂದಲೂ ಅಕ್ರಮವಾಗಿ ಅಧಿಕಾರ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದರು.

ಗಂಜಾಂನ ಟಿಪ್ಪು ಸಮಾಧಿ ಸ್ಥಳ ಗುಂಬಸ್ ಮುಂಭಾಗ ಮುಸ್ಲಿಂ ಹೋರಾಟಗಾರಿಂದ ಧರಣಿ ಕುಳಿತು, ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಾರ್ಯದರ್ಶಿ ವಿರುದ್ಧ ಧಿಕ್ಕಾರದ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.

ಸರ್ಕಾರದಿಂದ ಬಂದ ಕೋಟ್ಯಂತರ ರು. ಅನುದಾನ ದುರ್ಬಳಕೆ ಮಾಡಿಕೊಂಡಿರುವುದಾಗಿಯೂ ಗಂಭೀರವಾಗಿ ಆರೋಪ ಮಾಡಿದ ಮುಖಂಡರು, ಗುಂಬಸ್ ಗೆ ಸಾಕಷ್ಟು ವಕ್ಫ್ ಆದಾಯ ಬರುತ್ತಿದ್ದರೂ ಗುಂಬಸ್ ನಲ್ಲಿ ಮೂಲ ಸೌಕರ್ಯದ ಕೊರತೆ ಇದೆ ಎಂದು ಕಿಡಿಕಾರಿದರು.

ತಮ್ಮ ಸ್ವಂತ ಆಸ್ತಿಯಂತೆ ಕಾರ್ಯದರ್ಶಿ ಇರ್ಫಾನ್ ವಕ್ಫ್ ಆಸ್ತಿ ಕಬಳಿಕೆ ಮಾಡುತ್ತಿದ್ದು, ಇವರ ವಿರುದ್ಧ ಸರ್ಕಾರ ನಿವೃತ್ತ ನ್ಯಾಯಾಧೀಶರ ತನಿಖಾ ತಂಡದಿಂದ ಪಾರದರ್ಶಕ ತನಿಖೆ ಆಗಬೇಕೆಂದು ಆಗ್ರಹಿಸಿದರು.

ಇದೇ‌ ವೇಳೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಸ್ಲಿಂ ಹೋರಾಟಗಾರರಾದ ಸಿಂಧುವಳ್ಳಿ ಅಕ್ಬರ್ , ಅಲೀಂ ಉಲ್ಲಾ ಷರೀಫ್, ದಸ್ತಗೀರ್, ಅಯುಬ್, ಮುಜೀಬ್ ಶಾಲಿಮಾರ್, ಸೈಯದ್ ಜಲ್ಫೆಕರ್, ಇಮ್ರಾನ್ ಸೇರಿದಂತೆ ಇತರರು ಇದ್ದರು.

ನಿವಾಸಿಗಳಿಗೆ ಇ- ಸ್ವತ್ತು ಮಾಡಿಸಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ವಿತರಣೆ

ಶ್ರೀರಂಗಪಟ್ಟಣ: ಸುಮಾರು 35 ವರ್ಷಗಳಿಂದ ಬಾಕಿ ಉಳಿದಿದ್ದ ಪಟ್ಟಣ ಪುರಸಭೆ ವ್ಯಾಪ್ತಿಯ 14ನೇ ವಾರ್ಡಿನ ಭೋವಿ ಕಾಲೋನಿ ನಿವಾಸಿಗಳಿಗೆ ಖಾತೆಗಳನ್ನು ಅವರ ಹೆಸರಿಗೆ ಇ- ಸ್ವತ್ತು ಮಾಡಿಸಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿತರಿಸಿದರು.

ನಂತರ ಶಾಸಕರು ಮಾತನಾಡಿ, ಹಲವು ವರ್ಷಗಳಿಂದ ಈ ಭಾಗದ ಜನರಿಗೆ ಇ- ಸ್ವತ್ತು ಖಾತೆಗಳ ಮಾಡಿಸಲು ತಾಂತ್ರಿಕ ದೋಷಗಳಿದ್ದು, ಇದೀಗ ಅವುಗಳೆಲ್ಲವೂ ಸರ್ಕಾರದಲ್ಲಿ ಸಡಿಲಗೊಂಡಿದ್ದರಿಂದ ಬಡವರಿಗೆ ಇದೀಗ ಇ- ಸ್ವತ್ತುಗಳ ಮೂಲಕ ಖಾತೆಗಳನ್ನು ಮಾಡಿಸಿ 50ಕ್ಕೂ ಹೆಚ್ಚು ಮಂದಿಗೆ ವಿತರಿಸಲಾಗಿದೆ ಎಂದರು.

ಪಟ್ಟಣದಲ್ಲಿ ಉಳಿದಿರುವ ಖಾತೆಗಳ ಬಗ್ಗೆ ಇನ್ನು ಮುಂದೆ ಇ- ಸ್ವತ್ತು ಹಾಗೂ ಬಿ ಖಾತೆಗಳನ್ನು ಮಾಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು. ಪಟ್ಟಣ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಸದಸ್ಯರಾದ ಕೃಷ್ಣಪ್ಪ, ವಸಂತ ಕುಮಾರಿ, ಎಸ್.ಎನ್.ದಯಾನಂದ್, ಪುರಸಭೆ ಮುಖ್ಯಾಧಿಕಾರಿ ಸತೀಶ್, ಕಾಂಗ್ರೆಸ್ ಅಧ್ಯಕ್ಷ ಎಂ.ಲೋಕೇಶ್, ಕಂದಾಯ ಅಧಿಕಾರಿ ಸೋಮಶೇಖರ್ ಉಪಸ್ಥಿತರಿದ್ದರು.