ಸಾರಾಂಶ
ಜಮಖಂಡಿ : ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಬಡವರಿಗಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ಸೋಮವಾರ ನಗರದ ಬಸ್ ನಿಲ್ದಾಣದಲ್ಲಿ ನೂತನ ಬಸ್ಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ತ್ರೀ ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯದಾದ್ಯಂತ 500 ಕೋಟಿ ಉಚಿತ ಪ್ರಯಾಣ ನಡೆದಿದೆ.
ಜಮಖಂಡಿ ತಾಲೂಕಿನಲ್ಲಿ ₹2.40 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರ ಕ್ರಮ ಜರುಗಿಸಿದೆ. ಐದು ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಕನಸು ನನಸು ಮಾಡಿದೆ ಎಂದು ಹೇಳಿದ ಅವರು, ಪ್ರತಿವರ್ಷ ಸರ್ಕಾರ ₹58 ಸಾವಿರ ಕೋಟಿ ಬಡವರಿಗಾಗಿ ಖರ್ಚು ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಬಡವರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಅನುಕೂಲ ಆಗಿದೆ. ಬಡಮಹಿಳೆಯರು ಉಚಿತ ಪ್ರಯಾಣ ಮಾಡಿ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಇದರಿಂದ ಅವರ ಬಸ್ ಚಾರ್ಜ್ ಉಳಿತಾಯ ಆಗುತ್ತಿದೆ. ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆ ಅಡಿ ₹2000 ನೀಡಲಾಗುತ್ತಿದ್ದು, ಸಣ್ಣಪುಟ್ಟ ಖರ್ಚುಗಳಿಗೆ ಅವರು ಬೇರೆಯವರ ಬಳಿ ಬಾಯಿ ತೆರೆಯದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆ ಈಡೇರಿಸಲಾಗಿದೆ. ರಾಜ್ಯ ಸರ್ಕಾರ ಬಡವರ ಪರ ಕಾಳಜಿ ಹೊಂದಿದ್ದು, ಬಸವಣ್ಣನವರ ತತ್ವ, ಸಿದ್ಧಾಂತದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಮುಖಂಡರಾದ ಬಸವರಾಜ ಸಿಂಧೂರ, ನಗರ ಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಮಹೇಶ ಕೋಳಿ,ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲುಕು ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ ಹಾಗೂ ಸದಸ್ಯರು, ತಾಲೂಕು ಕಾಂಗ್ರೆಸ್ ಕಾರ್ಯಕರ್ತರು, ಕೆಎಸ್ಆರ್ಟಿಸಿ ಅಧಿಕಾರಿ ಎಸ್.ಬಿ. ಗಸ್ತಿ ಹಾಗೂ ಸಿಬ್ಬಂದಿ ಇದ್ದರು.