ವಿಧಾನಸಭೆ : 2028ರ ಚುನಾವಣೆ ಹೇಗೆ ಎದುರಿಸಬೇಕೆಂದು ನನಗೆ ಗೊತ್ತಿದೆ. ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸಂಪುಟದ ಸಚಿವರನ್ನು ಪರಿಚಯಿಸುವ ವೇಳೆ ಮಾತನಾಡಿದರು

ಶುಕ್ರವಾರ ಸದನಕ್ಕೆ ಸಂಪುಟದ ಸಚಿವರನ್ನು ಪರಿಚಯಿಸುವ ವೇಳೆ ಮಾತನಾಡಿದ ಅವರು, ಅಧಿಕಾರದ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಅವರು ಇದೇ ಸದನದಲ್ಲಿ ಮಾತನಾಡಿದಾಗ ನಾನು ಒಂದು ಮಾತು ಹೇಳಿದ್ದೆ. ಒಬ್ಬ ಧೈರ್ಯಶಾಲಿ ವ್ಯಕ್ತಿಯಿಂದ ಬಹುಮತ ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಅವರು ಸೇರಿ ನಾವು 136 ಜನ ಒಂದೇ ಎಂದು ಅಂತ ಹೇಳಿದ್ದೆ. ನಾನು ಅದನ್ನು ಸಾಬೀತುಪಡಿಸಿದ್ದೇನೆ. ನಾವು ಒಟ್ಟಾಗಿ ಹೋರಾಟ ಮಾಡುತ್ತೇವೆ. ಅಂತಿಮ ಫಲಿತಾಂಶವನ್ನು ಜನ ತೀರ್ಮಾನಿಸುತ್ತಾರೆ ಎಂದು ಹೇಳಿದರು.

2028ರ ಚುನಾವಣೆ ಹೇಗೆ ಎದುರಿಸಬೇಕು ಎಂದು ನನಗೆ ಗೊತ್ತಿದೆ

2028ರ ಚುನಾವಣೆ ಹೇಗೆ ಎದುರಿಸಬೇಕು ಎಂದು ನನಗೆ ಗೊತ್ತಿದೆ. ನಾನು ಫುಟ್ಬಾಲ್ ಆಡುವವನಲ್ಲ, ಚೆಸ್ ಆಡುವವನು. ಜನರ ಸೇವೆ ಮಾಡುವಾಗ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಇಲ್ಲಿ ಯಾರೂ ಶಾಶ್ವತವಲ್ಲ. ನಾವು ವಿರೋಧ ಪಕ್ಷಕ್ಕೆ ಹೋಗಬಹುದು, ವಿರೋಧ ಪಕ್ಷದವರು ಇಲ್ಲಿಗೆ ಬರಬಹುದು. ಜನರು ರಾಜ್ಯದ ಹಿತ ಕಾಪಾಡಲು ನಮ್ಮೆಲ್ಲರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.