ಹಾವೇರಿ: ಕೇಂದ್ರ ಸರ್ಕಾರ 2047ರ ವಿಕಸಿತ ಭಾರತ ಕನಸಿಗೆ ವಿಬಿ-ಜಿ ರಾಮ್-ಜಿ ಯೋಜನೆ ತಂದಿದ್ದು, ರಾಜ್ಯ ಸರ್ಕಾರ ಶೇ.40ರಷ್ಟು ಹಣ ನೀಡಬೇಕು ಎಂದಿದ್ದಕ್ಕೆ ಅವರ ಕುತ್ತಿಗೆಗೆ ಬಂದಿದೆ. ಈ ಸರ್ಕಾರದ ಖಜಾನೆ ಖಾಲಿಯಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದು, ಹಣ ಕೊಡಲಿಕ್ಕೆ ಆಗದಿದ್ದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ಸ್ಥಳೀಯ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಬಿ-ಜಿ ರಾಮ್-ಜಿ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಮಗಾರಿಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದ ವಿಬಿ-ಜಿ ರಾಮ್ ಜಿ ಜಾರಿಗೆ ತರಲಾಗುತ್ತಿದೆ. ಜೊತೆಗೆ 125 ದಿನಗಳ ಹೆಚ್ಚಳ, ಸುಗ್ಗಿ ಸಮಯದಲ್ಲಿ ರೈತರಿಗೆ ವಿನಾಯಿತಿ ನೀಡಲಾಗುತ್ತಿದೆ. ತಾಲೂಕು, ಗ್ರಾಮ ಮಟ್ಟದಲ್ಲಿ ಜನರಿಗೆ ಈ ಕುರಿತು ಮನದಟ್ಟು ಮಾಡುವ ಕೆಲಸ ಮಾಡಬೇಕಿದೆ. ರಾಜ್ಯ ಸರ್ಕಾರ ಭೂ ಗ್ಯಾರಂಟಿ ಸಮಾವೇಶಕ್ಕೆ 20 ಕೋಟಿ ಖರ್ಚು ಮಾಡಿದೆ. ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ. ಸರ್ಕಾರದ ಹಣ ದುರುಪಯೋಗವಾಗಿದೆ. ಯಾವ ಭೂಮಿ ಯಾರಿಗೆ ಸಮರ್ಪಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಸೈಟ್ ಇಲ್ಲದ ಎಷ್ಟು ಜನರಿಗೆ ಸೈಟ್ ಖರೀದಿಸಿ ಹಕ್ಕುಪತ್ರ ಕೊಟ್ಟಿದ್ದೀರಿ, ಗುಡ್ಡಗಾಡು ಪ್ರದೇಶ ಉಳಿಮೆ ಮಾಡಿದ ಎಷ್ಟು ಜನರಿಗೆ ಪಟ್ಟಾ ಕೊಟ್ಟಿದ್ದೀರಿ ಎಂಬ ಮಾಹಿತಿ ಕೊಡಬೇಕು. ಹಳ್ಳಿಗಳಲ್ಲಿ ಹೊಡೆದಾಟ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ದೂರಿದರು.ಈ ವೇಳೆ ಮಾಜಿ ಶಾಸಕ ಅರುಣಕುಮಾರ ಪೂಜಾರ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಎನ್.ಎಂ ಈಟೇರ, ಭೋಜರಾಜ ಕರೂದಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಮುಖಂಡರುಗಳಾದ ಗವಿಸಿದ್ದಪ್ಪ ದ್ಯಾಮಣ್ಣವರ, ಭರತ ಬೊಮ್ಮಾಯಿ, ಭೋಜರಾಜ ಕರೂದಿ, ನಗರ ಮಂಡಳದ ಅಧ್ಯಕ್ಷ ಕಿರಣ ಕೊಳ್ಳಿ, ಗ್ರಾಮೀಣ ಮಂಡಳದ ಅಧ್ಯಕ್ಷ ಮಾರುತಿ ಗೊರವರ, ಹತ್ತಿಮತ್ತೂರ ಮಂಡಳದ ಅಧ್ಯಕ್ಷ ಬಸವರಾಜ ಕೋಳಿವಾಡ ಸೇರಿದಂತೆ ಎಲ್ಲಾ ತಾಲೂಕು ಮಂಡಳದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಸಿದ್ದಣ್ಣ ಚಿಕ್ಕಬಿದರಿ ಸ್ವಾಗತಿಸಿದರು. ಸಂತೋಷ ಆಲದಕಟ್ಟಿ ನಿರೂಪಿಸಿದರು.ಒಂದೇ ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯ ಎಂದು ಬಿಂಬಿಸುವ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಆರೋಪಕ್ಕೆ ತಕ್ಕ ಶಾಸ್ತಿ ಕೊಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು. ಪಾರದರ್ಶಕ ಆಡಳಿತ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮನರೇಗಾ ಯೋಜನೆಯ ಭ್ರಷ್ಟಾಚಾರ ತಡೆಯುವುದು ಕೇಂದ್ರದ ಆಶಯವಾಗಿದೆ. ಸ್ಥಳೀಯ ಸಂಸ್ಥೆಗಳ ಎಲ್ಲ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.ವಿಬಿ-ಜಿ ರಾಮ್-ಜಿ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ. ಕಾಂಗ್ರೆಸ್‌ನವರಿಗೆ ಕೆಲಸವಿಲ್ಲ, ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದ ನರೇಗಾ ಯೋಜನೆಯಲ್ಲಿ 24 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಇಂಥ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ವಿಬಿ-ಜಿ ರಾಮ್-ಜಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನ ಹೇಳಿದರು.