ವಿದ್ಯಾರ್ಥಿನಿ ಅಪಹರಿಸಿ, ಅತ್ಯಾಚಾರ-ಇಬ್ಬರ ಬಂಧನ

| Published : Sep 27 2025, 12:01 AM IST

ಸಾರಾಂಶ

ಕಾಲೇಜು ವಿದ್ಯಾರ್ಥಿನಿ ಅಪಹರಿಸಿ, ಕಾಡಿನಲ್ಲಿ ದೈಹಿಕ ಸಂಪರ್ಕ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿಗ್ಗಾಂವಿ: ಕಾಲೇಜು ವಿದ್ಯಾರ್ಥಿನಿ ಅಪಹರಿಸಿ, ಕಾಡಿನಲ್ಲಿ ದೈಹಿಕ ಸಂಪರ್ಕ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಡಸ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧ ಆರೋಪಿಗಳಾದ ಅಭಿಷೇಕ ಲಕ್ಷ್ಮಣಪ್ಪ ಲಮಾಣಿ ಹಾಗೂ ಪ್ರವೀಣ ಲಮಾಣಿ ಎಂಬವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಯಶೋಧಾ ಒಂಟಗೋಡಿ ತಿಳಿಸಿದ್ದಾರೆ.

ಪಟ್ಟಣದ ನರ್ಸಿಂಗ್‌ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್‌ನ ಮೊದಲನೇ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಮಮದಾಪುರ ಗ್ರಾಮದ ಅಭಿಷೇಕ ಲಕ್ಷ್ಮಣಪ್ಪ ಲಮಾಣಿ ಕೆಲವು ದಿನಗಳಿಂದ ಹಿಂಬಾಲಿಸುತಿದ್ದು, ಸೆ.೧೫ರಂದು ೩.೩೦ ಗಂಟೆ ಆಸುಪಾಸಿನಲ್ಲಿ ಬಾಲಕಿ ಕಾಲೇಜು ಮುಗಿಸಿ ಶಿಗ್ಗಾಂವಿಯಿಂದ ಕುನ್ನೂರಿಗೆ ಬಸ್ಸಿನಲ್ಲಿ ಬಂದು ಇಳಿದು, ಕುನ್ನೂರಿನ ಮೌಲಾನಾ ಆಜಾದ ಶಾಲೆಯ ಮಾರ್ಗವಾಗಿ ಮನೆಗೆ ಹೋಗುತ್ತಿರುವಾಗ ಅಭಿಷೇಕ ಲಮಾಣಿ ಮಮದಾಪುರದ ತನ್ನ ಗೆಳೆಯ ಪ್ರವೀಣ ಲಮಾಣಿಯೊಂದಿಗೆ ಕಾರಿನಲ್ಲಿ ಬಂದು ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಅಪಹರಿಸಿ ಪಕ್ಕದ ಮಮದಾಪುರ ಕಾಡಿನಲ್ಲಿ ಕರೆದುಕೊಂಡು ಹೋಗಿದ್ದು, ಬಾಲಕಿಯ ವಿರೋಧದ ಮಧ್ಯೆಯು ಬಾಲಕಿಯನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಹೆದರಿಸಿ, ದೈಹಿಕ ಸಂಪರ್ಕ ಮಾಡಿದ್ದಾನೆ.

ಇನ್ನುಮುಂದೆ ಹೇಳಿದಂತೆ ಕೇಳದಿದ್ದರೆ ಮಾಡಿಕೊಂಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿ ವಿದ್ಯಾರ್ಥಿನಿಯನ್ನು ೪.೩೦ ಗಂಟೆ ಆಸುಪಾಸಿನಲ್ಲಿ ಅಪಹರಿಸಿದ ಜಾಗಕ್ಕೆ ಇಳಿಸಿ ಹೋಗಿದ್ದಾನೆ. ಮತ್ತೆ ಸೆ. ೧೭ರಂದು ರಾತ್ರಿ ೧೦ ಗಂಟೆ ಆಸುಪಾಸಿನಲ್ಲಿ ಬಾಲಕಿಯನ್ನು ಹೆದರಿಸಿ ಹಿತ್ತಲಕ್ಕೆ ಕರೆಯಿಸಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.ಮನನೊಂದ ಬಾಲಕಿ ಅಭಿಷೇಕ ಲಕ್ಷ್ಮಣಪ್ಪ ಲಮಾಣಿಯ ಕಿರುಕುಳ ತಾಳಲಾಗದೆ ಸೆ.೨೪ರಂದು ಮಕ್ಕಳ ಸಹಾಯವಾಣಿ ೧೦೯೮ಗೆ ಕರೆಮಾಡಿ ಅವಳ ಮೇಲಾಗುತ್ತಿರುವ ದೈಹಿಕ ಅತ್ಯಾಚಾರ ಕುರಿತು ದೂರು ನೀಡಿದ ಮೇಲೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ಹಾವೇರಿಯ ಒನ್ ಸ್ಟಾಪ್ ಸೆಂಟರ್‌ನ ಅಭಿರಕ್ಷಣೆಯಲ್ಲಿ ಇರಿಸಿದ್ದಾರೆ.ಈ ಘಟನೆ ಕುರಿತಂತೆ ತಾಲೂಕಿನ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. ನನ್ನ ಮಗಳು ೧೦೯೮ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ ನಂತರ ಅವರು ಮಗಳನ್ನು ತಡಸ್ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದ ಮೇಲೆ ಮಗಳನ್ನು ವಿಚಾರಿಸಿದಾಗ ನಡೆದಿರುವ ಘಟನೆ ತಿಳಿದುಬಂದಿದ್ದು, ಅಪ್ರಾಪ್ತೆಯಾದ ನನ್ನ ಮಗಳನ್ನು ಅಪಹರಿಸಿ ಬಲಾತ್ಕಾರದಿಂದ ದೈಹಿಕ ಸಂಪರ್ಕ ಮಾಡಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೊಂದ ಬಾಲಕಿಯ ತಾಯಿ ತಡಸ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಪ್ರಕರಣ ದಾಖಲಾಗುತ್ತಿದ್ದಂತೆ ನಮ್ಮ ಇಲಾಖೆಯ ತಡಸ ಪೊಲೀಸ್ ಠಾಣಾ ಅಧಿಕಾರಿಗಳು ಆರೋಪಿಗಳಾಗಿರುವ ಅಭಿಷೇಕ ಲಕ್ಷ್ಮಣಪ್ಪ ಲಮಾಣಿ ಮತ್ತು ಪ್ರವೀಣ ಲಮಾಣಿ ಅವರನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಹಾವೇರಿ ಎಸ್ಪಿ ಯಶೋಧಾ ಒಂಟಗೋಡಿ

ಹೇಳಿದರು.